ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ; ತನಿಖಾ ತಂಡದಿಂದ ಹೊಟೇಲಿನಲ್ಲಿ ಮತ್ತೆ ಪರಿಶೀಲನೆ
![ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ; ತನಿಖಾ ತಂಡದಿಂದ ಹೊಟೇಲಿನಲ್ಲಿ ಮತ್ತೆ ಪರಿಶೀಲನೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ; ತನಿಖಾ ತಂಡದಿಂದ ಹೊಟೇಲಿನಲ್ಲಿ ಮತ್ತೆ ಪರಿಶೀಲನೆ](https://www.varthabharati.in/sites/default/files/images/articles/2022/04/18/332191-1650300047.jpeg)
ಉಡುಪಿ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಈಗಾಗಲೇ ವಿವಿಧ ಭಾಗಗಳಿಗೆ ತೆರಳಿರುವ ಎಸ್ಪಿ ನೇತೃತ್ವದಲ್ಲಿ ರಚಿಸಲಾಗಿರುವ ಏಳು ತಂಡಗಳು ಮಾಹಿತಿಗಳನ್ನು ಕಲೆ ಹಾಕುತ್ತಿದೆ.
ಪ್ರಕರಣದ ತನಿಖಾಧಿಕಾರಿ ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್, ಕುಂದಾಪುರ ವೃತ್ತ ನಿರೀಕ್ಷಕರು, ಮಲ್ಪೆ ವೃತ್ತ ನಿರೀಕ್ಷಕರು, ಬ್ರಹ್ಮಾವರ ವೃತ್ತ ನಿರೀಕ್ಷಕರು ಹಾಗೂ ಮಣಿಪಾಲ ಪೊಲೀಸ್ ನಿರೀಕ್ಷಕರ ಮತ್ತು ಕೋಟ ಎಸ್ಸೈ, ನಗರ ಠಾಣಾ ಎಸ್ಸೈ ನೇತೃತ್ವದ ಒಟ್ಟು ಏಳು ತಂಡಗಳು, ಈಗಾಗಲೇ ಬೆಳಗಾವಿ, ಬೆಂಗಳೂರು, ಚಿಕ್ಕಮಗಳೂರು, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ತೆರಳಿದ್ದು, ತನಿಖೆಯನ್ನು ಮುಂದುವರೆಸಿದೆ ಎಂದು ತಿಳಿದು ಬಂದಿದೆ.
ಎರಡನೇ ಸುತ್ತಿನ ತನಿಖೆ
ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದ ಉಡುಪಿ ಲಾಡ್ಜ್ಗೆ ಯಾರೆಲ್ಲ ಭೇಟಿ ನೀಡಿದ್ದರು ಮತ್ತು ಸಂತೋಷ್ ಪಾಟೀಲ್ ಭೇಟಿಯಾಗ ಬೇಕಿದ್ದ ರಾಜೇಶ್ ಯಾರು ಎಂಬುದರ ಬಗ್ಗೆ ತನಿಖಾಧಿಕಾರಿ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ಎರಡನೇ ಸುತ್ತಿನ ತನಿಖೆಯನ್ನು ಹೊಟೇಲಿನಲ್ಲಿ ಇಂದು ನಡೆಸಲಾಯಿತು.
ಈಗಾಗಲೇ ವಶದಲ್ಲಿರುವ ಸಿಸಿಟಿವಿ ಫುಟೇಜ್ಗಳನ್ನು ಪರಿಶೀಲಿಸಿರುವ ಪೊಲೀಸರು, ಸಂತೋಷ್ ಪಾಟೀಲ್ ಕೋಣೆ ಸೇರಿದ ಬಳಿಕ ಯಾರೂ ಭೇಟಿಯಾಗಿಲ್ಲ ಎಂಬುದನ್ನು ದೃಢಪಡಿಸಿಕೊಂಡಿದ್ದಾರೆ. ಸಂತೋಷ್ ಪಾಟೀಲ್ ತಂಗಿದ್ದ ಕೋಣೆ ಸಂಖ್ಯೆ 207ಕ್ಕೆ ಮೂರನೇ ವ್ಯಕ್ತಿ ಪ್ರವೇಶವಾದ ಬಗ್ಗೆ ಯಾವುದೇ ದಾಖಲೆಗಳು ಪೊಲೀಸರಿಗೆ ದೊರೆತಿಲ್ಲ ಎನ್ನಲಾಗಿದೆ.
ಬ್ಯಾಂಕ್ ದಾಖಲೆ ಪತ್ತೆ
ಸಂತೋಷ್ ಪಾಟೀಲ್ ಮೃತಪಟ್ಟ ಕೋಣೆಯಲ್ಲಿ ಕುಟುಂಬದವರು ಬಿಟ್ಟು ಹೋದ ಅವರ ಬ್ಯಾಗ್ನಲ್ಲಿ ಹಲವು ಮಹತ್ವದ ದಾಖಲೆಗಳು ಪೊಲೀಸರಿಗೆ ಸಿಕ್ಕಿದ್ದು, ಅದನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಬ್ಯಾಗ್ನಲ್ಲಿ ವಿವಿಧ ಬ್ಯಾಂಕ್ಗಳ ಚೆಕ್, ವಿವಿಧ ರಸ್ತೆ ಕಾಮಗಾರಿಗಳ ದಾಖಲೆಗಳು ಪತ್ತೆಯಾಗಿದೆ. ಒಂದೇ ಒಂದು ವರ್ಕ್ ಆರ್ಡರ್ ಅಥವಾ ಟೆಂಡರ್ ಬ್ಯಾಗ್ನಲ್ಲಿ ಇರಲಿಲ್ಲ. ಹಲವಾರು ದೇವಸ್ಥಾನಗಳ ಪ್ರಸಾದಗಳು ಬ್ಯಾಗ್ನಲ್ಲಿ ಕಂಡುಬಂದಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೆಸರು ಬದಲಾವಣೆ
ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಗ್ರಾಹಕರಿಲ್ಲದೆ ತುಂಬಾ ನಷ್ಟಕ್ಕೆ ಒಳಗಾಗಿರುವ ಮಾಲಕ, ತನ್ನ ಹೊಟೇಲಿನ ಹೆಸರನ್ನು ಬದಲಾಯಿಸಿದ್ದಾರೆ. ಅಲ್ಲದೆ ವಿವಿಧ ಪೂಜೆಗಳನ್ನು ಮಾಡಿರುವ ಮಾಲಕರು, ಲಾಡ್ಜ್ನ ಪ್ರವೇಶ ದ್ವಾರವನ್ನೇ ಬದಲಾಯಿಸಲು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ.
ʼʼಈಗಗಾಲೇ ರಚಿಸಲಾಗಿರುವ ಏಳು ತಂಡಗಳು ವಿವಿಧ ಭಾಗಗಳಿಗೆ ತೆರಳಿ ಮಾಹಿತಿ ಕಲೆ ಹಾಕುತ್ತಿವೆ. ಇನ್ನು ಕೂಡ ಯಾವುದೇ ತಂಡಗಳು ವಾಪಾಸ್ಸು ಬಂದಿಲ್ಲ. ತನಿಖೆ ಮುಂದುವರೆದಿದ್ದು, ಎಫ್ಎಸ್ಎಲ್ ವರದಿ ಇನ್ನಷ್ಟೇ ಕೈ ಸೇರಬೇಕಾಗಿದೆʼʼ.
-ಎನ್.ವಿಷ್ಣುವರ್ಧನ್, ಎಸ್ಪಿ, ಉಡುಪಿ