ಅನುಮತಿ ಇಲ್ಲದೆ ಮೆರವಣಿಗೆ ನಡೆಸಿದ ವಿಎಚ್ ಪಿ, ಬಜರಂಗದಳದ ನಾಯಕರ ವಿರುದ್ಧ ದಿಲ್ಲಿ ಪೊಲೀಸರಿಂದ ಎಫ್ ಐಆರ್
ಜಹಾಂಗೀರಪುರಿ ಹಿಂಸಾಚಾರ ಪ್ರಕರಣ
![ಅನುಮತಿ ಇಲ್ಲದೆ ಮೆರವಣಿಗೆ ನಡೆಸಿದ ವಿಎಚ್ ಪಿ, ಬಜರಂಗದಳದ ನಾಯಕರ ವಿರುದ್ಧ ದಿಲ್ಲಿ ಪೊಲೀಸರಿಂದ ಎಫ್ ಐಆರ್ ಅನುಮತಿ ಇಲ್ಲದೆ ಮೆರವಣಿಗೆ ನಡೆಸಿದ ವಿಎಚ್ ಪಿ, ಬಜರಂಗದಳದ ನಾಯಕರ ವಿರುದ್ಧ ದಿಲ್ಲಿ ಪೊಲೀಸರಿಂದ ಎಫ್ ಐಆರ್](https://www.varthabharati.in/sites/default/files/images/articles/2022/04/19/332250-1650360138.jpg)
ಹೊಸದಿಲ್ಲಿ: ವಾಯುವ್ಯ ದಿಲ್ಲಿಯ ಜಹಾಂಗೀರಪುರಿಯಲ್ಲಿ ಶನಿವಾರ ಹನುಮ ಜಯಂತಿ ನಿಮಿತ್ತ ಅನುಮತಿ ಇಲ್ಲದೆ ಶೋಭಾ ಯಾತ್ರೆ ಆಯೋಜಿಸಿದ್ದಕ್ಕಾಗಿ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಹಾಗೂ ಬಜರಂಗದಳದ ದಿಲ್ಲಿ ಘಟಕದ ಇಬ್ಬರ ವಿರುದ್ಧ ದಿಲ್ಲಿ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಶೋಭಾ ಯಾತ್ರೆಯ ನಂತರ ಜಹಾಂಗೀರ್ಪುರಿಯಲ್ಲಿ ಕೋಮು ಘರ್ಷಣೆ ನಡೆದಿದ್ದು, ಪೊಲೀಸರು ಗಲಭೆ ಹಾಗೂ ಕಾನೂನುಬಾಹಿರವಾಗಿ ಗುಂಪು ಸೇರಿದ ಆರೋಪದ ಮೇಲೆ ಅಪ್ರಾಪ್ತರು ಸೇರಿದಂತೆ 20 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.
ಅದೇ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ದೂರು ನೀಡಿದ ನಂತರ ಜಹಾಂಗೀರ್ಪುರಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 188ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
“ಎಪ್ರಿಲ್ 15 ರಂದು ವಿಎಚ್ಪಿಯ ಜಿಲ್ಲಾ ಸೇವಾ ಪ್ರಮುಖ್ ಪ್ರೇಮ್ ಶರ್ಮಾ ಹಾಗೂ ತ್ತು ಸಹ-ವಿಭಾಗೀಯ ಕಾರ್ಯದರ್ಶಿ ಬ್ರಹ್ಮ ಪ್ರಕಾಶ್ ಅವರು ಮೆರವಣಿಗೆ ನಡೆಸಲು ಜಹಾಂಗೀರ್ಪುರಿ ಪೊಲೀಸ್ ಠಾಣೆಯಲ್ಲಿ ಡಿಡಿ (ದೈನಂದಿನ ಡೈರಿ) ಸಂಖ್ಯೆ 83 ಎ ಅರ್ಜಿಯನ್ನು ಸಲ್ಲಿಸಿದರು. ಡಿಸಿಪಿ (ವಾಯುವ್ಯ) ಅನುಮತಿಯನ್ನು ತೆಗೆದುಕೊಳ್ಳಬೇಕು ಎಂದು ಅವರಿಗೆ ತಿಳಿಸಲಾಗಿದೆ” ಎಂದು ಎಫ್ಐಆರ್ ಹೇಳಲಾಗಿದೆ.
ಎಪ್ರಿಲ್ 16 ರಂದು ಯಾವುದೇ ಅನುಮತಿಯಿಲ್ಲದೆ ವಿಎಚ್ ಪಿ ನಾಯಕರು ಜನರನ್ನು ಒಟ್ಟುಗೂಡಿಸಿದರು ಹಾಗೂ ಸ್ವಇಚ್ಛೆಯಿಂದ "ಕಾನೂನುಬಾಹಿರವಾಗಿ" ಮೆರವಣಿಗೆ ನಡೆಸಿದರು. ಎರಡು ಕೋಮುಗಳ ನಡುವೆ ಜಟಾಪಟಿ ನಡೆಯುವ ಸಾಧ್ಯತೆ ಇದ್ದು, ಅವರು ಯಾವುದೇ ಅನುಮತಿ ಪಡೆದಿಲ್ಲ ಎಂಬುದು ಪೊಲೀಸ್ ಠಾಣೆಯಿಂದ ಬೆಳಕಿಗೆ ಬಂದಿದೆ. ಪ್ರೇಮ್ ಶರ್ಮಾ ಹಾಗೂ ಬ್ರಹ್ಮ ಪ್ರಕಾಶ್ ಖುದ್ದಾಗಿ ಅಕ್ರಮವಾಗಿ ಎಲ್ಲರನ್ನು ಸೇರಿಸಿ ಅನುಮತಿ ಪಡೆಯದೆ ಮೆರವಣಿಗೆ ನಡೆಸಿದ್ದಾರೆ ಇದು ಎಪ್ರಿಲ್ 1 ರಂದು ಎಸಿಪಿ (ಜಹಾಂಗೀರಪುರಿ) ಹೊರಡಿಸಿದ ಅಧಿಸೂಚನೆಯನ್ನು ಉಲ್ಲಂಘಿಸಿದೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 188 ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಫ್ ಐಆರ್ ನಲ್ಲಿ ತಿಳಿಸಲಾಗಿದೆ.