ಕಮಿಷನ್ ನೀಡಿಲ್ಲ ಎನ್ನುವ ಮಠಾಧೀಶರು ಮಂಪರು ಪರೀಕ್ಷೆಗೆ ಒಳಗಾಗಲಿ: ದಿಂಗಾಲೇಶ್ವರ ಸ್ವಾಮೀಜಿ
''ಲಂಚ ತೆಗೆದುಕೊಂಡವರು ರಶೀದಿ ಕೊಡುತ್ತಾರೆಯೇ?''

ದಿಂಗಾಲೇಶ್ವರ ಸ್ವಾಮೀಜಿ
ಗದಗ, ಎ.19: ಎಲ್ಲ ಮಠಾಧೀಶರು ಕಮಿಷನ್ ನೀಡಿದ್ದಾರೆ. ಅದನ್ನು ಬಹಿರಂಗವಾಗಿ ಹೇಳಿಕೊಳ್ಳಲು ಮುಂದಾಗುತ್ತಿಲ್ಲ. ಅವರನ್ನೆಲ್ಲಾ ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯ ಹೊರಬರುತ್ತದೆ ಎಂದು ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಜರಾಯಿ ಇಲಾಖೆ ಹೊರತುಪಡಿಸಿದರೆ ಎಲ್ಲ ಇಲಾಖೆಗಳಲ್ಲಿ ಅನುದಾನ ತೆಗೆದುಕೊಳ್ಳಲು ಎಲ್ಲ ಮಠಾಧೀಶರು ಕಮಿಷನ್ ನೀಡಿದ್ದಾರೆ. ಅದನ್ನು ಬಹಿರಂಗವಾಗಿ ಹೇಳಿಕೊಳ್ಳಲು ಮುಂದಾಗುತ್ತಿಲ್ಲ. ಅವರನ್ನೆಲ್ಲಾ ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯ ಹೊರಬರುತ್ತದೆ ಎಂದು ಹೇಳಿದರು.
ಮಠ, ಮಂದಿರಗಳಿಗೆ ದೇಣಿಗೆ ನೀಡಿದರೆ ಅಲ್ಲಿ ರಶೀದಿ ಕೊಡುತ್ತಾರೆ. ಆದರೆ, ಲಂಚ ಪಡೆದ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ದೇಣಿಗೆ ಪಾವತಿ ನೀಡುತ್ತಾರೆಯೇ ಎಂದು ಲಂಚದ ಬಗ್ಗೆ ದಾಖಲೆ ಕೇಳಿದ ಸಚಿವರಿಗೆ ಫಕೀರ ದಿಂಗಾಲೇಶ್ವರ ಶ್ರೀಗಳು ಖಾರವಾಗಿ ಪ್ರಶ್ನಿಸಿದರು. ಮಠಕ್ಕೆ ಮಂಜೂರಾದ 75 ಲಕ್ಷ ಅನುದಾನದಲ್ಲಿ ಅಧಿಕಾರಿಗಳು 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕಿಂತ ಹೆಚ್ಚಿನ ದಾಖಲೆಯ ಅವಶ್ಯಕತೆ ಇದೆಯೇ ಎಂದರು.
500 ವರ್ಷಗಳ ಭವ್ಯ ಪರಂಪರೆಯ ಹೊಂದಿರುವ ಫಕೀರೇಶ್ವರ ಮಠವು ಶಾಖಾ ಮಠ ಹಾಗೂ ಶಾಖಾ ಮಸೀದಿಗಳನ್ನು ಹೊಂದಿ ದೇಶದಲ್ಲೇ ಭಾವೈಕ್ಯತೆಯ ಕೇಂದ್ರವೆಂದು ಗುರುತಿಸಿಕೊಂಡಿದೆ. ರಾಜಕಾರಣಿಗಳಿಗೆ ಇತಿಹಾಸ ಓದಲು ಸಮಯ ಇಲ್ಲ ಎನಿಸುತ್ತದೆ. ಒಂದು ನಿರ್ಣಯ ತೆಗೆದುಕೊಳ್ಳಬೇಕಾದರೆ ಅದರ ಬಗ್ಗೆ ತಜ್ಞರ ಸಲಹೆ ಪಡೆದು ನಿರ್ಣಯ ತೆಗೆದುಕೊಳ್ಳುವ ಬಹುತೇಕ ಸರಕಾರವನ್ನು ಕಂಡಿದ್ದೇವೆ. ಅದನ್ನು ಬಿಟ್ಟು ಅವರಿವರ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದು ಸೂಕ್ತವಲ್ಲ ಎಂದರು.
ಗದುಗಿನ ತೋಂಟದಾರ್ಯ ಮಠದ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ಜನ್ಮದಿನವನ್ನು ಭಾವೈಕ್ಯತಾ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಸಿಎಂ ಘೋಷಿಸಿರುವುದು ಖಂಡನೀಯ. ಬ್ರಾಹ್ಮಣ ಸಮುದಾಯವನ್ನು ಸದಾ ದ್ವೇಷಿಸುತ್ತಿದ್ದ ಲಿಂಗೈಕ್ಯ ಶ್ರೀಗಳು, ಭಾವೈಕ್ಯತೆಯ ಕಡುವೈರಿಯಾಗಿದ್ದಾರೆ. ವಿರೋಧ ಪಕ್ಷದ ಬೆಂಬಲದಿಂದ ಲಿಂಗಾಯತ ಸಮುದಾಯವನ್ನು ಬೇರೆ ಮಾಡಿ ರಾಜ್ಯ ಹೊತ್ತಿ ಉರಿಯುವಂತಹ ಘಟನೆ ಹುಟ್ಟುಹಾಕಿರುವುದು ಅರಿವಿಲ್ಲವೇ?
-ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀ







