ಉಡುಪಿ: ಮೇ 7ರಂದು ಸೌಹಾರ್ದ ನಡಿಗೆ, ಸಹಬಾಳ್ವೆ ಸಮಾವೇಶ
ಉಡುಪಿ: ಇತ್ತೀಚಿನ ದಿನಗಳಲ್ಲಿ ನಾಡಿನಾದ್ಯಂತ ಮತ ಧ್ವೇಷದ ದಳ್ಳುರಿ ಹಬ್ಬಿಸುವ ಆತಂಕಕಾರಿ ವಿದ್ಯಾಮಾನ ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಡಿನಲ್ಲಿ ಸೌಹಾರ್ದಯುತ ಸಹಬಾಳ್ವೆಯನ್ನು ಉಳಿಸಿ ಬೆಳೆಸುವ ಅಗತ್ಯವಿದ್ದು ಇದಕ್ಕಾಗಿ ಮೇ 7ರಂದು ಉಡುಪಿಯಲ್ಲಿ ಬೃಹತ್ ಸಮಾವೇಶವೊಂದನ್ನು ಆಯೋಜಿಸಲಾಗುವುದು ಎಂದು ಉಡುಪಿ ಸಹಬಾಳ್ವೆ ಸಂಚಾಲನ ಸಮಿತಿಯ ಅಧ್ಯಕ್ಷ ಅಮೃತ ಶೆಣೈ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತಿದ್ದ ಅವರು, ಈ ನಿಟ್ಟಿನಲ್ಲಿ ಕರ್ನಾಟಕದಲಿಲ ಸೌಹಾರ್ದಯುತ ಸಹಬಾಳ್ವೆ ಬಯಸುವ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸಹಬಾಳ್ವೆ ಉಡುಪಿ ಇದರ ಸಹಯೋಗದಲ್ಲಿ ಮೇ 7ರಂದು ಉಡುಪಿಯಲ್ಲಿ ‘ಸೌಹಾರ್ದ ನಡಿಗೆ- ಸಹಬಾಳ್ವೆ ಸಮಾವೇಶ’ವೊಂದನ್ನು ಆಯೋಜಿಸಲಾಗುತ್ತಿದೆ ಎಂದರು.
ಇದರಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪ್ರಗತಿಪರರು ಅತಿಥಿಗಳಾಗಿ, ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಿರಲಿ ಎಂಬ ಆಶಯದೊಂದಿಗೆ ಉಡುಪಿಯಲ್ಲಿ ಸೌಹಾರ್ದ ನಡಿಗೆ ಹಾಗೂ ಸಮಾವೇಶ ನಡೆಯಲಿದೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಸಹಬಾಳ್ವೆ ಸಂಚಾಲನ ಸಮಿತಿಯ ಸುಂದರ್ ಮಾಸ್ಟರ್, ಪ್ರಶಾಂತ್ ಜತ್ತನ್ನ, ವೆರೋನಿಕಾ ಕರ್ನೇಲಿಯೊ, ಹುಸೇನ್ ಕೋಡಿ ಬೇಂಗ್ರೆ ಹಾಗೂ ಅಝೀಝ್ ಉದ್ಯಾವರ ಉಪಸ್ಥಿತರಿದ್ದರು.







