ಭೀಮಾ ಕೋರೆಗಾಂವ್ ಪ್ರಕರಣ: ಮನವಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶೆ ಸಾಧನಾ ಜಾಧವ್
ಮುಂಬೈ, ಎ. 19: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸಲ್ಲಿಸಲಾದ ಮನವಿಯ ವಿಚಾರಣೆಯಿಂದ ಬಾಂಬೆ ಉಚ್ಚ ನ್ಯಾಯಾಲಯ ನ್ಯಾಯಾಧೀಶೆ ಸಾಧನಾ ಜಾಧವ್ ಮಂಗಳವಾರ ಹಿಂದೆ ಸರಿದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಮನವಿಯ ವಿಚಾರಣೆಯಿಂದ ಈ ವರ್ಷ ಹಿಂದೆ ಸರಿಯುತ್ತಿರುವ ಬಾಂಬೆ ಉಚ್ಚ ನ್ಯಾಯಾಲಯದ ಮೂರನೇ ನ್ಯಾಯಾಧೀಶರು ಜಾಧವ್.
ಇದಕ್ಕಿಂತ ಮೊದಲು ಈ ಮನವಿಯ ವಿಚಾರಣೆ ನಡೆಸುವುದರಿಂದ ನ್ಯಾಯಮೂರ್ತಿಗಳಾದ ಪಿ.ಬಿ. ವರಾಲೆ ಹಾಗೂ ಎಸ್.ಎಸ್. ಶಿಂದೆ ಹಿಂದೆ ಸರಿದಿದ್ದರು. ಇದಕ್ಕಿಂತ ಮೊದಲು 2019 ಹಾಗೂ 2020ರಲ್ಲಿ ಕೂಡ ಜಾಧವ್ ಅವರು ಭೀಮಾ ಕೋರೆಗಾಂವ್ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು.
ಪುಣೆಯ ಸಮೀಪದ ಗ್ರಾಮವೊಂದರಲ್ಲಿ 2018ರಲ್ಲಿ ನಡೆದ ಜಾತಿ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣ ಭೀಮಾಕೋರೆಗಾಂವ್. ಈ ಪ್ರಕರಣಕ್ಕೆ ಸಂಬಂಧಿಸಿ 16 ಮಂದಿಯನ್ನು ಬಂಧಿಸಲಾಗಿದೆ.
Next Story