ಚಿತ್ರ ನಿರ್ಮಾಪಕರು ಸಮಾಜದ ಶಾಂತಿ ಕದಡುವ ಸಾಹಸದಿಂದ ದೂರ ಇರಬೇಕು: ಮಹಾರಾಷ್ಟ್ರ ಸಿಕ್ಖ್ ಅಸೋಸಿಯೇಶನ್
'ದ ಡೆಲ್ಲಿ ಫೈಲ್ಸ್'ಗೆ ವ್ಯಾಪಕ ವಿರೋಧ
![ಚಿತ್ರ ನಿರ್ಮಾಪಕರು ಸಮಾಜದ ಶಾಂತಿ ಕದಡುವ ಸಾಹಸದಿಂದ ದೂರ ಇರಬೇಕು: ಮಹಾರಾಷ್ಟ್ರ ಸಿಕ್ಖ್ ಅಸೋಸಿಯೇಶನ್ ಚಿತ್ರ ನಿರ್ಮಾಪಕರು ಸಮಾಜದ ಶಾಂತಿ ಕದಡುವ ಸಾಹಸದಿಂದ ದೂರ ಇರಬೇಕು: ಮಹಾರಾಷ್ಟ್ರ ಸಿಕ್ಖ್ ಅಸೋಸಿಯೇಶನ್](https://www.varthabharati.in/sites/default/files/images/articles/2022/04/20/332359-1650425039.jpg)
ಮುಂಬೈ: ದ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಮ್ಮ ಮುಂದಿನ ಚಿತ್ರ "ದ ಡೆಲ್ಲಿ ಫೈಲ್ಸ್" ಘೋಷಿಸುತ್ತಿದ್ದಂತೆ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಚಿತ್ರ ನಿರ್ಮಾಪಕರು ಸಮಾಜದ ಶಾಂತಿ ಕದಡುವ ಸಾಹಸದಿಂದ ದೂರ ಇರಬೇಕು ಎಂದು ಮಹಾರಾಷ್ಟ್ರ ಸಿಕ್ಖ್ ಅಸೋಸಿಯೇಶನ್ ಸಲಹೆ ಮಾಡಿದೆ.
ಈ ವರ್ಷದ ಅತಿದೊಡ್ಡ ಬ್ಲಾಕ್ ಬಸ್ಟರ್ ಎನಿಸಿದ ʼದ ಕಾಶ್ಮೀರ್ ಫೈಲ್ಸ್ʼನ ನಿರ್ದೇಶಕ ತಮ್ಮ ಮುಂದಿನ ಯೋಜನೆಯನ್ನು ಕಳೆದ ವಾರ ಪ್ರಕಟಿಸಿದ್ದರು. 1984ರ ಸಿಕ್ಖ್ ವಿರೋಧಿ ದೊಂಬಿಯನ್ನು ಈ ಚಿತ್ರದಲ್ಲಿ ಬಿಂಬಿಸುವ ಸಾಧ್ಯತೆ ಇದೆ. ಆದರೆ ಅಗ್ನಿಹೋತ್ರಿ ಇದುವರೆಗೆ ಇದರ ವಿವರವನ್ನು ಬಿಟ್ಟುಕೊಟ್ಟಿಲ್ಲ.
"ಸೃಜನಾತ್ಮಕ ಅಭಿವ್ಯಕ್ತಿ ಮತ್ತು ವೈಯಕ್ತಿಕ ಲಾಭದ ಉದ್ದೇಶದಿಂದ ಸಿಕ್ಖ್ ದಂಗೆಯಂಥ ಮನುಕುಲದ ದುರದೃಷ್ಟಕರ ದುರಂತ ಅಧ್ಯಾಯಗಳನ್ನು ಶೋಷಿಸುವ ಮತ್ತು ವಾಣಿಜ್ಯೀಕರಿಸುವುದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ" ಎಂದು ಮಹಾರಾಷ್ಟ್ರ ಸಿಕ್ಖ್ ಅಸೋಸಿಯೇಷನ್ ಹೇಳಿಕೆ ನೀಡಿದೆ.
ಈ ಬಗ್ಗೆ ಅಗ್ನಿಹೋತ್ರಿಯವರ ಪ್ರತಿಕ್ರಿಯೆ ಕೇಳಿದಾಗ, ಚಿತ್ರ ನಿರ್ಮಾಪಕನಾಗಿ ಅಭಿವ್ಯಕ್ತಿಯ ಹಕ್ಕು ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ಚಿತ್ರ ನಿರ್ಮಿಸುವ ಹಕ್ಕು ತಮಗೆ ಇದೆ ಎಂದು ಸಮರ್ಥಿಸಿಕೊಂಡರು. ಚಿತ್ರದ ಶೀರ್ಷಿಕೆಯನ್ನು ಹೊರತುಪಡಿಸಿ, ಚಿತ್ರದ ವಸ್ತುವನ್ನು ತಾವು ಇದುವರೆಗೆ ಬಹಿರಂಗಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.
"ಇದು ಯಾವ ಸಂಘಟನೆ ಎಂದು ನನಗೆ ತಿಳಿದಿಲ್ಲ. ನಾನು ಭಾರತೀಯ. ಸಾರ್ವಭೌಮ ದೇಶದಲ್ಲಿ ನಾನು ಜೀವಿಸುತ್ತಿದ್ದೇನೆ. ಅದು ನನ್ನ ಇಚ್ಛೆಗೆ ಅನುಗುಣವಾಗಿ ಅಭಿವ್ಯಕ್ತಪಡಿಸಲು ನನಗೆ ಸಂಪೂರ್ಣ ಹಕ್ಕು ನೀಡಿದೆ. ನನಗೆ ಬೇಕು ಎನಿಸಿದ್ದನ್ನು ಮತ್ತು ನನ್ನ ಆತ್ಮಸಾಕ್ಷಿ ಒಪ್ಪಿದ್ದನ್ನು ನಾನು ಮಾಡುತ್ತೇನೆ. ನಾನು ಯಾವುದೇ ಬೇಡಿಕೆಗಳ ಅಥವಾ ಸಂಘಟನೆಗಳ ಗುಲಾಮನಲ್ಲ" ಎಂದು ಹೇಳಿದ್ದಾರೆ.