ಪುರಸಭೆ ಅಧ್ಯಕ್ಷೀಯ ಚುನಾವಣೆ: ನಾಮನಿರ್ದೇಶಿತ ಸದಸ್ಯರ ಮತ ತಿರಸ್ಕರಿಸಿದ ಹೈಕೋರ್ಟ್

ಬೆಂಗಳೂರು, ಎ.20: ಮುನ್ಸಿಪಾಲಿಟಿಯ ನಾಮ ನಿರ್ದೇಶಿತ ಸದಸ್ಯರು ಮುನ್ಸಿಪಲ್ ಕೌನ್ಸಿಲ್ ಸಭೆಯಲ್ಲಿ ಮತ ಹಾಕುವ ಹಕ್ಕು ಹೊಂದಿರುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಸಂವಿಧಾನದ ವಿಧಿ 243 ಆರ್(2)(ಎ) ಹಾಗೂ ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆಯ ಸೆಕ್ಷನ್ 11(ಬಿ) ನಿಯಮಗಳನ್ನು ಎತ್ತಿಹಿಡಿದಿದೆ.
ಕೋಲಾರ ಜಿಲ್ಲೆಯ ಮಾಲೂರು ಪುರಸಭೆ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಮತ ಪರಿಗಣಿಸಲು ಕೋರಿ 6 ಮಂದಿ ನಾಮನಿರ್ದೇಶಿತ ಸದಸ್ಯರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ತೀರ್ಪು ಪ್ರಕಟಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಜನರಿಂದ ನೇರವಾಗಿ ಮತ ಪಡೆದು ಆಯ್ಕೆಯಾದ ಸದಸ್ಯರು ಜನರ ಆದೇಶದೊಂದಿಗೆ ಬಂದಿರುತ್ತಾರೆ. ಆದರೆ, ನಾಮನಿರ್ದೇಶತ ಸದಸ್ಯರನ್ನು ನೇಮಕ ಮಾಡಲಾಗಿರುತ್ತದೆ. ಹೀಗಾಗಿ, ಇಬ್ಬರೂ ಮುನ್ಸಿಪಾಲಿಟಿ ಸದಸ್ಯರೇ ಆದರೂ ಚುನಾಯಿತ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರು ಒಂದೇ ವರ್ಗಕ್ಕೆ ಸೇರಿದ್ದಾರೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ, ನಾಮನಿರ್ದೇಶಿತ ಸದಸ್ಯರು ಮುನ್ಸಿಪಾಲಿಟಿ ಸಭೆಯಲ್ಲಿ ಮತ ಹಾಕದಂತೆ ನಿಬರ್ಂಧಿಸುವ ಸಂವಿಧಾನದ ವಿಧಿ 243ಆರ್(2)(ಎ) ವಿಧಿ 14ರ ಸಮಾನತೆಗೆ ವಿರುದ್ಧವಾಗಿಲ್ಲ. ಇಂತಹ ವಿಚಾರಗಳಲ್ಲಿ ಸಂವಿಧಾನ ಸಮಾನತೆಯನ್ನು ವಿಭಿನ್ನವಾಗಿ ಪರಿಗಣಿಸುತ್ತದೆ.
ಹೀಗಾಗಿ, ನಾಮನಿರ್ದೇಶಿತ ಸದಸ್ಯರನ್ನು ಚುನಾಯಿತ ಸದಸ್ಯರಿಗೆ ಸಮವೆಂದು ಅವರಿಗೆ ಮತ ಚಲಾಯಿಸುವ ಹಕ್ಕಿದೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿ, ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ.
ಪ್ರಕರಣವೇನು: 2021ರ ಡಿ.30ರಂದು ಮಾಲೂರು ಪುರಸಭೆಯ ಅಧ್ಯಕ್ಷ ಹುದ್ದೆಗೆ ಚುನಾವಣೆ ನಿಗದಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಮಗೂ ಮತ ಚಲಾಯಿಸಲು ಅವಕಾಶ ಕಲ್ಪಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯಲ್ಲಿ, ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆಯ ಸೆಕ್ಷನ್ 2(6) ಹಾಗೂ 42(2) ನಿಯಮಗಳು ನಮ್ಮನ್ನೂ ಮುನ್ಸಿಪಾಲಿಟಿ ಸದಸ್ಯರು ಎಂದೇ ಗುರುತಿಸುತ್ತವೆ. ಅದರಂತೆ ನಮಗೂ ಮತ ಚಲಾಯಿಸುವ ಹಕ್ಕಿದೆ. ಆದರೆ, ಇದೇ ಕಾಯ್ದೆಯ ಸೆಕ್ಷನ್ 11(ಬಿ) ಹಾಗೂ ಸಂವಿಧಾನದ ವಿಧಿ 243ಆರ್(2)(ಎ) ನಿಯಮಗಳು ನಾಮನಿರ್ದೇಶಿತ ಸದಸ್ಯರ ಮತ ಚಲಾವಣೆಯನ್ನು ನಿಬರ್ಂಧಿಸುತ್ತವೆ. ಈ ನಿಯಮಗಳು ಸಂವಿಧಾನದ ವಿಧಿ 14ರ ಸಮಾನತೆಗೆ ವಿರುದ್ಧವಾಗಿವೆ. ಹೀಗಾಗಿ, ಈ ನಿಯಮಗಳನ್ನು ಅಸಿಂಧು ಎಂದು ಘೋಷಿಸಬೇಕು ಹಾಗೂ ತಮಗೆ ಮತ ಚಲಾಯಿಸಲು ಅವಕಾಶ ನೀಡಬೇಕು ಎಂದು ಕೋರಿದ್ದರು.







