ಚರ್ಚ್ಗೆ ಅನುದಾನ ಕೊಡಿಸುವ ನೆಪದಲ್ಲಿ ವಂಚನೆ: ಆರೋಪಿಯ ಬಂಧನ

ಸಾಂದರ್ಭಿಕ ಚಿತ್ರ
ಬೆಳಗಾವಿ, ಎ.20: ಅಲ್ಪಸಂಖ್ಯಾತರ ಇಲಾಖೆಯಿಂದ ಚರ್ಚ್ಗಳಿಗೆ ಅನುದಾನ ಕೊಡಿಸುವುದಾಗಿ ವಂಚನೆಗೈದ ಆರೋಪದಡಿ ಓರ್ವನನ್ನು ಇಲ್ಲಿನ ಬೆಂಗಳೂರಿನ ಯಶವಂತಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬೀದರ್ ಮೂಲದ ಕಾಯೆಲ್ ಯಾನೆ ಮಾರ್ಕ್ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಕಾಯೆಲ್, ಚರ್ಚ್ಗೆ ಅನುದಾನ ಹಾಗೂ ದುರಸ್ಥಿ ಕಾರ್ಯವನ್ನು ಮಾಡಲು ಸರಕಾರದಿಂದ ಅನುದಾನ ಬಿಡುಗಡೆ ಮಾಡಿಸುವ ಬಗ್ಗೆ ಆಡಳಿತ ಮಂಡಳಿಗೆ ನಂಬಿಸುತ್ತಿದ್ದ. ಬಳಿಕ ಈ ಅನುದಾನ ಬಿಡುಗಡೆಯಾಗಲು ಶುಲ್ಕ ಪಾವತಿಸಬೇಕು ಎಂದು ಚರ್ಚ್ನಿಂದ 50 ಸಾವಿರ ರೂ. ಹಣ ಪಡೆದು ವಂಚಿಸುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರು, ಹಾಸನ, ತುಮಕೂರು ಭಾಗದ ಚರ್ಚ್ಗಳಿಗೆ ವಂಚಿಸಿದ್ದ ಆರೋಪಿ ತಲೆಮರೆಸಿಕೊಂಡಿದ್ದು, ವಂಚನೆಗೊಳಗಾದ ಟಿ. ದಾಸರಹಳ್ಳಿ ನಿವಾಸಿ ಜೇಮ್ಸ್ ಫೌಲ್, ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ, ಉಳಿದವರ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.
Next Story





