ಎ. 24ಕ್ಕೆ ‘ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ’ ಪ್ರದಾನ
ಉಡುಪಿ : ತುಳುಕೂಟ ಉಡುಪಿ ವತಿಯಿಂದ, ತುಳುಭಾಷೆ, ಸಂಸ್ಕೃತಿ, ಸಾಹಿತ್ಯಕ್ಕಾಗಿ ಅಪಾರ ಸೇವೆ ಸಲ್ಲಿಸಿದ, ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡ ಹಿರಿಯ ಚೇತನ ದಿ. ಶ್ರೀನಿವಾಸ ಉಪಾಧ್ಯಾಯ ಪಣಿಯಾಡಿ ಇವರ ಸ್ಮರಣಾರ್ಥ ನೀಡಲಾಗುವ ೨೭ನೇ ವರ್ಷದ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಸಮಾರಂಭ ಎ.24ರ ರವಿವಾರ ಸಂಜೆ 4 ಗಂಟೆಗೆ ಉಡುಪಿ ಹೋಟೇಲ್ ಕಿದಿಯೂರಿನ ಪವನ್ ರೂಫ್ಟಾಪ್ನಲ್ಲಿ ಜರುಗಲಿದೆ.
ಈ ಬಾರಿಯ ಪಣಿಯಾಡಿ ಕಾದಂಬರಿ ಪ್ರಶಸ್ತಿಯನ್ನು ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ಅಕ್ಷಯ ಆರ್. ಶೆಟ್ಟಿ ಪೆರಾರ ಮುಂಡಬೆಟ್ಟುಗುತ್ತು ಬರೆದ ‘ದೆಂಗ’ ತುಳು ಕಾದಂಬರಿಗೆ ನೀಡಲಾಗುತ್ತಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಣಿಯಾಡಿ ಪ್ರಶಸ್ತಿ ವಿಜೇತ ‘ದೆಂಗ’ ಕಾದಂಬರಿಯನ್ನು ಮುಖ್ಯ ಅತಿಥಿಗಳಲ್ಲಿ ಓರ್ವರಾದ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಬಿಡುಗಡೆಗೊಳಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುಕೂಟ ಉಡುಪಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ವಹಿಸಲಿದ್ದಾರೆ.
ದೆಂಗ ಕಾದಂಬರಿಯನ್ನು ಹಿರಿಯಡಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ, ತುಳು ಸಾಹಿತಿ, ಜಾನಪದ ಸಂಶೋಧಕಿ ಡಾ. ನಿಕೇತನ ಪರಿಚಯಿಸಲಿದ್ದಾರೆ.ಖ್ಯಾತ ತುಳು ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಪಣಿಯಾಡಿ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠದ ಸಂಯೋಜಕ ಮಾಧವ ಎಂ.ಕೆ. ಹಾಗೂ ಉಡುಪಿಯ ಉದ್ಯಮಿ ಮತ್ತು ಸಮಾಜಸೇವಕರಾದ ವಿಶ್ವನಾಥ ಶೆಣೈ ಇವರು ಭಾಗವಹಿಸಲಿದ್ದಾರೆ ಎಂದು ಪ್ರಶಸ್ತಿ ಸಮಿತಿಯ ಸಂಚಾಲಕಿ ತಾರಾ ಉಮೇಶ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.