ಉಡುಪಿ: ವಿದ್ಯಾಪೋಷಕ್ ಸನಿವಾಸ ಶಿಬಿರದ ಸಮಾರೋಪ

ಉಡುಪಿ : ಯಕ್ಷಗಾನ ಕಲಾರಂಗ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಿಗೆ ನಡೆಸಿದ ಐದು ದಿನಗಳ ಶೈಕ್ಷಣಿಕ ಸನಿವಾಸ ಶಿಬಿರದ ಸಮಾರೋಪ ಸಮಾರಂಭ ಬುಧವಾರ ಅಂಬಲಪಾಡಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಜರಗಿತು.
ದೇವಳದ ಧರ್ಮದರ್ಶಿ ಡಾ.ನಿ. ಬೀ.ವಿಜಯ ಬಲ್ಲಾಳರು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಮಣಿಪಾಲ ಎಂಐಟಿಯ ಪ್ರಾಧ್ಯಾಪಕ ಡಾ. ನಾರಾಯಣ್ ಶೆಣೈ ಕೆ., ಗೋವಾದ ಉದ್ಯಮಿ ರಾಘವ ಎಂ. ಶೆಟ್ಟಿ, ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ರಾಮಚಂದ್ರ ಅಡಿಗ ಜಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಸ್ಥೆಯ ದಾನಿಗಳಾದ ಯು. ವಿಶ್ವನಾಥ ಶೆಣೈ, ಡಾ. ಯು. ಸಿ. ನಿರಂಜನ್, ವಿಲಾಸಿನಿ ಬಿ. ಶೆಣೈ, ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ವಿ.ಭಟ್, ವಿ.ಜಿ ಶೆಟ್ಟಿ, ಶಿಬಿರದ ಸಂಯೋಜಕರಾದ ಎ.ನಟರಾಜ ಉಪಾಧ್ಯ, ಅಶೋಕ್ ಎಂ. ಮುಂತಾದವರು ಉಪಸ್ಥಿತರಿದ್ದರು.
ಶಿಬಿರದ ನಿರ್ದೇಶಕರಾದ ಪ್ರವೀಣ್ ಗುಡಿ ಮತ್ತು ಅವರ ತಂಡವನ್ನು ಗೌರಸಲಾಯಿತು. ಶಿಬಿರಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಒಟ್ಟು ೨೩೦ ವಿದ್ಯಾರ್ಥಿ ಗಳು ಈ ಶಿಬಿರದ ಪ್ರಯೋಜನವನ್ನು ಪಡೆದಿದ್ದು, ಶಿಬಿರದಲ್ಲಿ ವೃತ್ತಿ ಮಾರ್ಗ ದರ್ಶನ, ಸಂವಹನ ಕೌಶಲ, ಆಂಗ್ಲಭಾಷಾ ಕೌಶಲ, ಗುಂಪು ಚರ್ಚೆ ಮೊದಲಾ ದವುಗಳ ಕುರಿತು ತರಬೇತಿ ನೀಡಿ ಅವರ ಆತ್ಮ ವಿಶ್ವಾಸವನ್ನು ಗುರುತಿಸಲಾಯಿತು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿ, ನಾರಾಯಣ ಎಂ. ಹೆಗಡೆ ವಂದಿಸಿದರು.







