ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಲಭ್ಯ?
![ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಲಭ್ಯ? ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಲಭ್ಯ?](https://www.varthabharati.in/sites/default/files/images/articles/2022/04/20/332420-1650470449.jpeg)
ಸಂತೋಷ್ ಪಾಟೀಲ್
ಉಡುಪಿ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯು ಪೊಲೀಸರ ಕೈ ಸೇರಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಇದನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಲ್ಲಗಳೆದಿದ್ದಾರೆ.
ಎ.12ರಂದು ಉಡುಪಿಯ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಅವರ ಮೃತದೇಹ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲ ಕೆಎಂಸಿಯ ಶವಗಾರದಲ್ಲಿ ಎ.13ರಂದು ಸಂಜೆ ವೇಳೆ ನಡೆಸಲಾಗಿತ್ತು. ಇದೀಗ ಈ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯನ್ನು ಕೆಎಂಸಿ ವೈದ್ಯರು ಪೊಲೀಸರಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಅಧಿಕೃತ ಮೂಲಗಳ ಪ್ರಕಾರ, ಈ ವರದಿಯಲ್ಲಿ ಸಾವಿಗೆ ಕಾರಣ ತಿಳಿಸದೆ ಕಾಯ್ದಿರಿಸಲಾಗಿದೆ ಎನ್ನಲಾಗಿದೆ. ಅದೇ ರೀತಿ ರಕ್ತ, ಶ್ವಾಸಕೋಶ, ಕಿಡ್ನಿ, ಚರ್ಮದ ಪರೀಕ್ಷೆ ವರದಿ ಬಾಕಿ ಇರಿಸಲಾಗಿದೆ. ಮೃತದೇಹದ ಒಳಾಂಗಗಳ ಹಾಗೂ ಮಾದರಿಗಳ ವರದಿಯನ್ನು ಮಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯದ ನೀಡಬೇಕಾಗಿದೆ. ಈ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಮರಣೋತ್ತರ ಹಾಗೂ ಎಫ್ಎಸ್ಎಲ್ ಈ ಎರಡು ವರದಿಯನ್ನು ಹೋಲಿಕೆ ಮಾಡಿ ತಜ್ಞರ ತಂಡ ಅಂತಿಮ ವರದಿಯನ್ನು ಸಿದ್ಧಪಡಿಸುತ್ತದೆ. ಅದರಲ್ಲಿ ಸಾವಿಗೆ ಕಾರಣ ಸೇರಿದಂತೆ ಎಲ್ಲ ಅಂಶಗಳನ್ನು ಉಲ್ಲೇಖಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಆದರೆ ಈ ಕುರಿತು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್ ಸಂಪರ್ಕಿಸಿದಾಗ, ಮರಣೋತ್ತರ ಪರೀಕ್ಷೆ ಪ್ರಾಥಮಿಕ ವರದಿ ಇನ್ನೂ ಬಂದಿಲ್ಲ. ಈ ಬಗ್ಗೆ ಯಾವುದೇ ಮಾಹಿತಿ ನಮಗೆ ಇಲ್ಲ. ಆ ವರದಿಯ ನಿರೀಕ್ಷೆಯಲ್ಲಿ ಇದ್ದೇವೆ. ಅದು ಬಂದರೆ ತನಿಖೆ ನಮಗೆ ತುಂಬಾ ಅನುಕೂಲ ವಾಗುತ್ತದೆ ಎಂದರು.
ಸ್ನೇಹಿತರಿಂದ ತನಿಖೆಗೆ ಸಹಕಾರ: ಎಸ್ಪಿ
ವಿವಿಧ ಭಾಗಗಳಿಗೆ ತೆರಳಿರುವ ಎಲ್ಲ ಏಳು ತನಿಖಾ ತಂಡಗಳು ಇನ್ನೂ ಕೂಡ ಹೊರ ಜಿಲ್ಲೆಗಳಲ್ಲಿಯೇ ತನಿಖೆ ನಡೆಸುತ್ತಿದೆ. ಆ ತಂಡಗಳ ಬಂದ ನಂತರವೇ ನಮಗೆ ಈ ಪ್ರಕರಣದ ಸಂಪೂರ್ಣ ಮಾಹಿತಿ ದೊರೆಯಲಿದೆ. ಅದಕ್ಕೆ ನಿರೀಕ್ಷೆ ಮಾಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್ ಹೇಳಿದ್ದಾರೆ.
ಸಂತೋಷ್ ಪಾಟೀಲ್ ಸ್ನೇಹಿತರಾದ ಪ್ರಶಾಂತ್ ಶೆಟ್ಟಿ ಹಾಗೂ ಸಂತೋಷ್ ಮೊದಲಿನಿಂದಲೂ ಪೊಲೀಸರ ವಶದಲ್ಲಿ ಇರಲಿಲ್ಲ. ಉಡುಪಿಯಲ್ಲಿ ಉಳಿದು ಕೊಂಡಿರುವ ಅವರು, ನೋಟೀಸ್ ನೀಡಿದಾಗಲೆಲ್ಲ ಆಗಮಿಸಿ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ತನಿಖೆಗೆ ಅವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.