ಪಿಎಸ್ಐ ನೇಮಕಾತಿ ಅಕ್ರಮ; ರಾಜಕೀಯ ಪ್ರಭಾವದಿಂದಾಗಿ ದಿವ್ಯಾ ಹಾಗರಗಿ ಬಂಧನವಾಗುತ್ತಿಲ್ಲ: ಬಿ.ಆರ್. ಪಾಟೀಲ್ ಆರೋಪ
'' ಸಿಐಡಿ ಬದಲು ನ್ಯಾಯಾಂಗ ತನಿಖೆಯಾಗಲಿ''

ದಿವ್ಯಾ ಹಾಗರಗಿ
ಕಲಬುರಗಿ, ಎ.20: ಪಿಎಸ್ಐ ನೇಮಕಾತಿಯ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಎಲ್ಲಿದ್ದಾರೆ ಎಂಬುದು ಬಿಜೆಪಿ ನಾಯಕರು ಹಾಗೂ ಪೊಲೀಸರಿಗೆ ಗೊತ್ತಿದೆ. ಆದರೆ, ಅವರ ಬಂಧನಕ್ಕೆ ರಾಜಕೀಯ ಪ್ರಭಾವ ಅಡ್ಡಿಯಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಬಿ.ಆರ್. ಪಾಟೀಲ ಆರೋಪಿಸಿದ್ದಾರೆ.
ಬುಧವಾರ ಕಲಬುರಗಿ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರದಿಂದ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ. ಸರಕಾರದ ಏಜೆನ್ಸಿಗಳಿಂದ ನಡೆಯುವ ತನಿಖೆಯಿಂದ ಸತ್ಯ ಹೊರ ಬರುತ್ತದೆ ಎಂಬುದನ್ನು ನಿರೀಕ್ಷಿಸಲಾಗದು. ಹೀಗಾಗಿ, ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇಲ್ಲವೇ ಕರ್ನಾಟಕ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.
‘ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ದೊಡ್ಡ ಗುಂಪು ಭಾಗಿಯಾಗಿದೆ. ಅತ್ಯಂತ ವ್ಯವಸ್ಥಿತವಾಗಿ ಸಂಚು ರೂಪಿಸಿ ಅಕ್ರಮ ಎಸಗಿದ್ದಾರೆ. ಸಿಸಿ ಕ್ಯಾಮೆರಾ ಬಂದ್ ಮಾಡಿಸಿದ್ದಾರೆ. ಈ ಪ್ರಕರಣದಲ್ಲಿ ಆರ್ಟಿಐ ಕಾರ್ಯಕರ್ತನೂ ಭಾಗಿಯಾಗಿದ್ದು, ಅವರ ಮೇಲೆ ಪೆÇಲೀಸ್ ಠಾಣೆಯಲ್ಲಿ ಹಲವು ಪ್ರಕರಣ ದಾಖಲಾಗಿವೆ ಎಂದು ಹೇಳಿದರು.
ದಿವ್ಯಾ ಹಾಗರಗಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಇವರಿಬ್ಬರಿಗೂ ರಾಜಕೀಯ ಸಂಬಂಧ ಇದೆ. ಇದೇ ಕಾರಣಕ್ಕೆ ಹಾಗರಗಿ ಮನೆಗೆ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದರು. ಹಾಗರಗಿ ಅವರ ಹಿನ್ನೆಲೆ ಗೊತ್ತಿಲ್ಲದೆಯೇ ಅವರ ಮನೆಗೆ ಹೋಗಿದ್ದರೇ? ಪೆÇಲೀಸರು ಮಾಹಿತಿ ನೀಡಿರಲಿಲ್ಲವೇ?’ ಎಂದು ಪ್ರಶ್ನಿಸಿದರು.
ಇದೊಂದು ಕಮಿಷನ್ ಸರಕಾರವಾಗಿದ್ದು, ಗುತ್ತಿಗೆದಾರರಿಂದ, ವರ್ಗಾವಣೆ ಬಯಸುವ ಅಧಿಕಾರಿಗಳಿಂದ, ಮಠಗಳಿಗೆ ಅನುದಾನ ಕೇಳುವ ಸ್ವಾಮೀಜಿಗಳಿಂದಲೂ ಕಮಿಷನ್ ಕೇಳುತ್ತಿದೆ ಎಂದು ದೂರಿದರು. ಮುಖಂಡ ಗಣೇಶ ಪಾಟೀಲ ಇದ್ದರು.
ದಿವ್ಯಾ ಬಿಜೆಪಿ ಸದಸ್ಯೆ
ಒಂಭತ್ತು ವರ್ಷಗಳಿಂದ ಬಿಜೆಪಿ ಸದಸ್ಯೆಯಾಗಿದ್ದೇನೆ ಎಂದು ಸ್ವತಃ ದಿವ್ಯಾ ಹಾಗರಗಿ ಹೇಳಿಕೊಂಡಿದ್ದಾರೆ. ಅವರನ್ನು ಬಿಜೆಪಿಯು ನರ್ಸಿಂಗ್ ಕೌನ್ಸಿಲ್ ಹಾಗೂ ದಿಶಾ ಸಮಿತಿಯ ಸದಸ್ಯೆಯನ್ನಾಗಿಸಿದೆ. ಇಷ್ಟೆಲ್ಲಾ ದಾಖಲೆಗಳಿದ್ದರೂ ಬಿಜೆಪಿಗೂ ದಿವ್ಯಾಗೂ ಸಂಬಂಧವಿಲ್ಲ ಎನ್ನುತ್ತಿರುವ ಬಿಜೆಪಿ ನಾಯಕರಿಗೆ ನೈತಿಕತೆ ಇದೆಯೇ ಎಂದು ಕಾಂಗ್ರೆಸ್ ಮುಖಂಡ ಬಿ.ಆರ್.ಪಾಟೀಲ್ ಪ್ರಶ್ನಿಸಿದ್ದಾರೆ.







