ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ಕಾರ್ಯಾದೇಶ ನೀಡಿ: ಬಿಬಿಎಂಪಿಗೆ ಹೈಕೋರ್ಟ್ ಆದೇಶ

ಬೆಂಗಳೂರು, ಎ.20: ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಕಾರ್ಯಾದೇಶವನ್ನು ಮುಂದಿನ 36 ಗಂಟೆಗಳಲ್ಲಿ ನೀಡಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೈಕೋರ್ಟ್ ಗಡುವು ನೀಡಿದೆ.
ರಾಜಧಾನಿ ಬೆಂಗಳೂರಿನ ರಸ್ತೆಗಳ ನಿರ್ವಹಣೆ ಸಂಬಂಧ 2015ರಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ವಿಚಾರಣೆ ಆರಂಭವಾಗುತ್ತಿದ್ದಂತೆಯೇ ರಸ್ತೆ ಗುಂಡಿ ಮುಚ್ಚುವ ಕಂಪೆನಿ ಪರ ವಕೀಲರು ವಾದಿಸಿ, ‘ಪಾಲಿಕೆ ಈವರೆಗೂ ನಮಗೆ ಕಾರ್ಯಾದೇಶ ನೀಡಿಲ್ಲ. ಹೀಗಾಗಿ, ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ. ಇನ್ನೂ ಪಾಲಿಕೆ ಜತೆ ಮಾತುಕತೆ ನಡೆದಿದೆ’ ಎಂದು ತಿಳಿಸಿದರು.
ಪಾಲಿಕೆ ಪರ ವಕೀಲರು ವಾದಿಸಿ, ಕೆಲ ವಿಚಾರಗಳಲ್ಲಿ ಲೆಕ್ಕಾಚಾರ ನಡೆಯುತ್ತಿದ್ದು, ಎಆರ್ಟಿಎಸ್ ಸಂಸ್ಥೆಯೇ ಎರಡು ದಿನ ಕಾಲಾವಕಾಶ ನೀಡುವಂತೆ ಬಿಬಿಎಂಪಿಗೆ ಕೋರಿದೆ. ಅದರ ಹೊರತಾಗಿ ರಸ್ತೆಗುಂಡಿ ಮುಚ್ಚುವ ಕಾಮಗಾರಿ ಸಂಬಂಧ ಪಾಲಿಕೆ ಕಾರ್ಯಾದೇಶ ನೀಡಲು ಸಿದ್ಧವಿದೆ. ಇನ್ನೆರಡು ದಿನಗಳಲ್ಲಿ ಕಾರ್ಯಾದೇಶ ನೀಡುತ್ತೇವೆ ಎಂದು ತಿಳಿಸಿದರು.
ಬಿಬಿಎಂಪಿ ಹೇಳಿಕೆಯನ್ನು ಎಆರ್ಟಿಎಸ್ ಪರ ವಕೀಲರು ಸರಾಸಗಟಾಗಿ ನಿರಾಕರಿಸಿದರು. ಕೊನೆಗೆ ಪಾಲಿಕೆ ಪರ ವಕೀಲರು, ಪ್ರಕರಣವನ್ನು ಗುರುವಾರ ವಿಚಾರಣೆಗೆ ನಿಗದಿಪಡಿಸಿದರೆ, ಕಾರ್ಯಾದೇಶ ನೀಡಿ ನ್ಯಾಯಾಲಯಕ್ಕೆ ದಾಖಲೆ ಒದಗಿಸಲಾಗುವುದು ಎಂದು ತಿಳಿಸಿದರು. ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ನಮಗೆ ಬೇರೆ ಯಾವ ವಿಚಾರವೂ ಬೇಡ. ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭವಾಗಿದೆಯೇ, ಇಲ್ಲವೇ ಎನ್ನುವುದಷ್ಟೇ ಬೇಕು. ಈಗಾಗಲೇ ಮಳೆ ಆರಂಭವಾಗಿದೆ. ಪರಿಸ್ಥಿತಿ ಮಾತ್ರ ಮೊದಲಿನಂತೆಯೇ ಇದೆ. ಮಳೆ ಆರಂಭವಾದರೆ ನಾಲ್ಕೈದು ತಿಂಗಳು ಕಾಮಗಾರಿ ಮಾಡಲಾಗದು. ಇನ್ನೇನು ಕೋರ್ಟ್ ಬೇಸಿಗೆ ರಜೆ ಆರಂಭವಾಗಲಿದ್ದು, ಕಲಾಪ ನಡೆಯುವುದಿಲ್ಲವೆಂಬುದು ನಿಮಗೂ ತಿಳಿದಿದೆ.
ಈಗಾಗಲೇ ಸಾಕಷ್ಟು ಸಮಯ ನೀಡಿದ್ದೇವೆ. ನಿಮಗೆ ಕೆಲಸ ಆರಂಭಿಸುವ ಉದ್ದೇಶವಿಲ್ಲ. ಇದು ನಿಜಕ್ಕೂ ದುರದೃಷ್ಟಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೇ, ಮೊದಲು ಸಂಚಾರ ದಟ್ಟಣೆಯಿಂದ ರಸ್ತೆ ಗುಂಡಿ ಮುಚ್ಚಲಾಗಿಲ್ಲವೆಂದು ಹೇಳಿದಿರಿ, ಆನಂತರ ಮೂಲಸೌಕರ್ಯ ಕೊರತೆ, ಆಮೇಲೆ ಮಳೆಯ ಮೇಲೆ ಆರೋಪ ಹೊರಿಸಿದಿರಿ, ಇದೆಲ್ಲಾ ಆದ ಬಳಿಕ ರಸ್ತೆ ಅಗೆಯುವ ಇತರ ಏಜೆನ್ಸಿಗಳತ್ತ ಬೆರಳು ತೋರಿದಿರಿ. ಇದೀಗ, ರಸ್ತೆ ಗುಂಡಿ ಮುಚ್ಚಲು ಮುಂದಾಗಿರುವ ಸಂಸ್ಥೆ ಬಗ್ಗೆಯೇ ದೂರುತ್ತಿದ್ದೀರಿ. ಇದೇ ರೀತಿ ನೀವು ಆರೋಪ ಹೊರಿಸುವುದನ್ನು ಮುಂದುವರೆಸಲು ಯಾರು ಉಳಿದಿದ್ದಾರೆ.
ಇನ್ನು ಮುಂದೆ ಯಾರ ಮೇಲೆ ನಿಮ್ಮ ಜವಾಬ್ದಾರಿಗಳನ್ನು ಹೊರಿಸುತ್ತೀರಿ ಎಂದು ಪೀಠ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿತು. ಅಂತಿಮವಾಗಿ, ನೀವು ಒಂದಲ್ಲಾ ಒಂದು ಕಾರಣ ನೀಡಿ ಕೆಲಸ ಮುಂದೂಡುತ್ತಲೇ ಇದ್ದೀರಿ, ಇದು ನಿಜಕ್ಕೂ ವಿಪರೀತವಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿತು. ಹಾಗೆಯೇ, ‘ನಿಮಗೆ ಇನ್ನು 36 ಗಂಟೆ ಕಾಲಾವಕಾಶ ನೀಡುತ್ತೇವೆ. ಅಷ್ಟರೊಳಗೆ ಕಾಮಗಾರಿ ಆರಂಭಿಸಲು ಕಾರ್ಯಾದೇಶ ನೀಡಿ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದು ಪಾಲಿಕೆಗೆ ತಾಕೀತು ಮಾಡಿ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.







