ಕ್ರಿಮಿನಲ್ ವಿಚಾರಣೆಗಳ ಕುರಿತು ಟಿವಿ ಚರ್ಚೆಗಳು ನ್ಯಾಯ ವ್ಯವಸ್ಥೆಯ ಆಡಳಿತದಲ್ಲಿ ನೇರ ಹಸ್ತಕ್ಷೇಪ: ಸುಪ್ರೀಂ ಕೋರ್ಟ್
![ಕ್ರಿಮಿನಲ್ ವಿಚಾರಣೆಗಳ ಕುರಿತು ಟಿವಿ ಚರ್ಚೆಗಳು ನ್ಯಾಯ ವ್ಯವಸ್ಥೆಯ ಆಡಳಿತದಲ್ಲಿ ನೇರ ಹಸ್ತಕ್ಷೇಪ: ಸುಪ್ರೀಂ ಕೋರ್ಟ್ ಕ್ರಿಮಿನಲ್ ವಿಚಾರಣೆಗಳ ಕುರಿತು ಟಿವಿ ಚರ್ಚೆಗಳು ನ್ಯಾಯ ವ್ಯವಸ್ಥೆಯ ಆಡಳಿತದಲ್ಲಿ ನೇರ ಹಸ್ತಕ್ಷೇಪ: ಸುಪ್ರೀಂ ಕೋರ್ಟ್](https://www.varthabharati.in/sites/default/files/images/articles/2022/04/21/332462-1650480185.gif)
ಹೊಸದಿಲ್ಲಿ,ಎ.20: ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಅಪರಾಧ ವಿಚಾರಣೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಟಿವಿ ವಾಹಿನಿಗಳಲ್ಲಿಯ ಚರ್ಚೆಗಳು ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ನೇರ ಹಸ್ತಕ್ಷೇಪಕ್ಕೆ ಸಮನಾಗುತ್ತವೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಅಪರಾಧಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳು ಮತ್ತು ನಿರ್ದಿಷ್ಟ ವಿಷಯವು ಪ್ರಕರಣದಲ್ಲಿ ನಿರ್ಣಾಯಕ ಸಾಕ್ಷವಾಗುತ್ತದೆಯೇ ಎನ್ನುವುದು ನ್ಯಾಯಾಲಯದಿಂದ ವಿಚಾರಣೆಯಾಗಬೇಕೇ ಹೊರತು ಟಿವಿ ವಾಹಿನಿಯಿಂದಲ್ಲ ಎಂದು ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ಪಿ.ಎಸ್.ನರಸಿಂಹ ಅವರ ಪೀಠವು ಹೇಳಿತು. ಮಂಗಳವಾರ ಡಕಾಯಿತಿ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪಿನಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ. ಅಪರಾಧಕ್ಕೆ ಕಾರಣವಾದ ಘಟನಾವಳಿಗಳನ್ನು ಸಾಬೀತುಗೊಳಿಸಲು ಪ್ರಾಸಿಕ್ಯೂಷನ್ ವಿಫಲಗೊಂಡಿತ್ತು.
1999,ಅ.28ರಂದು ಬೆಂಗಳೂರಿನಲ್ಲಿ ವೃದ್ಧೆಯೋರ್ವರನ್ನು ಹತ್ಯೆ ಮಾಡಿ ಅವರ ಚಿನ್ನಾಭರಣಗಳನ್ನು ದೋಚಲಾಗಿತ್ತು. ವಿಚಾರಣಾ ನ್ಯಾಯಾಲಯವು ಆರೋಪಿಗಳಿಗೆ ಮರಣ ದಂಡನೆಯನ್ನು ವಿಧಿಸಿದ್ದರೆ, ಬಳಿಕ ಕರ್ನಾಟಕ ಉಚ್ಚ ನ್ಯಾಯಾಲಯವು ಅದನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಿತ್ತು.
ಪ್ರಕರಣದಲ್ಲಿಯ ‘ಆತಂಕಕಾರಿ ಅಂಶಗಳನ್ನು ’ ಗಮನಿಸಿದ ಸರ್ವೋಚ್ಚ ನ್ಯಾಯಾಲಯದ ಪೀಠವು.ತನಿಖಾಧಿಯೆದುರು ನಿಡಲಾಗಿದ್ದ ತಪ್ಪೊಪ್ಪಿಗೆ ಹೇಳಿಕೆಯನ್ನು ಒಳಗೊಂಡಿದ್ದ ಡಿವಿಡಿಯನ್ನು ವಿಚಾರಣಾ ನ್ಯಾಯಾಲಯದಲ್ಲಿ ಕೇಳಿಸಲಾಗಿತ್ತು ಮತ್ತು ಅದರ ಆಧಾರದಲ್ಲಿ ತೀರ್ಪು ಹೊರಬಿದ್ದಿತ್ತು. ತನಿಖಾಧಿಕಾರಿ ತಪ್ಪೊಪ್ಪಿಗೆ ಹೇಳಿಕೆಯನ್ನು ಪಡೆದಿದ್ದು ಭಾರತೀಯ ಸಾಕ್ಷ ಕಾಯ್ದೆಯ ಉಲ್ಲಂಘನೆಯಾಗಿದೆ. ಕಾಯ್ದೆಯ ಕಲಂ 26ರಂತೆ ಮ್ಯಾಜಿಸ್ಟ್ರೇಟ್ ಬದಲು ಪೊಲೀಸ್ ಅಧಿಕಾರಿಯ ಎದುರು ನೀಡಿದ ತಪ್ಪೊಪ್ಪಿಗೆ ಹೇಳಿಕೆಯನ್ನು ನ್ಯಾಯಾಲಯವು ಪರಿಗಣಿಸುವಂತಿಲ್ಲ ಎಂದು ಹೇಳಿತು.
ಇದೇ ಡಿವಿಡಿಯನ್ನು ಕನ್ನಡದ ಉದಯ ವಾಹಿನಿಯು ಕಾರ್ಯಕ್ರಮವೊಂದರಲ್ಲಿ ಪ್ರಸಾರಿಸಿತ್ತು. ಡಿವಿಡಿಯನ್ನು ಖಾಸಗಿ ಟಿವಿ ವಾಹಿನಿಗೆ ಲಭ್ಯವಾಗಿಸಿದ್ದು ಮತ್ತು ಅದು ಪ್ರಸಾರಗೊಳ್ಳುವಂತೆ ಮಾಡಿದ್ದು ಕರ್ತವ್ಯಲೋಪ ಮತ್ತು ನ್ಯಾಯದ ಆಡಳಿತದಲ್ಲಿ ನೇರ ಹಸ್ತಕ್ಷೇಪವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು