VIDEO- ನಾನು ರಾಜಕಾರಣಕ್ಕೆ ಬರಲು ಪ್ರೊ. ನಂಜುಂಡಸ್ವಾಮಿ ಪ್ರೇರಣೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
‘ಬಾರುಕೋಲು’ ಕೃತಿ ಲೋಕಾರ್ಪಣೆ

ಬೆಂಗಳೂರು, ಎ. 21: ‘ರೈತ ಬಳಸುವ ಬಾರುಕೋಲನ್ನು ತನ್ನ ರೂಲ್ ಆಫ್ ಲಾ ಎಂದವರು ಪ್ರೊ.ನಂಜುಂಡಸ್ವಾಮಿ. ರೈತರು ತಾಲೂಕು ಕಚೇರಿಗೆ ಹೋದರೆ ಎಲ್ಲ ಅಧಿಕಾರಿಗಳು ಅಲರ್ಟ್ ಆಗುತ್ತಿದ್ದರು. ಅಧಿಕಾರಿಗಳು ಲಂಚ ತೆಗೆದುಕೊಳ್ಳಲು ಹೆದರುತ್ತಿದ್ದರು, ಇದಕ್ಕೆ ಪ್ರೊ.ಎಂ.ಡಿ.ಎನ್. ಅವರು ಕಾರಣ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನೆನಪು ಮಾಡಿಕೊಂಡಿದ್ದಾರೆ.
ಗುರುವಾರ ಇಲ್ಲಿನ ಕುಮಾರಕೃಪಾದಲ್ಲಿರುವ ತಮ್ಮ ನಿವಾಸದಲ್ಲಿ ಡಾ.ನಟರಾಜ್ ಹುಳಿಯಾರ್, ರವಿಕುಮಾರ್ ಭಾಗಿಯವರು ಸಂಪಾದಿಸಿರುವ ರೈತ ನಾಯಕ ಪ್ರೊ .ಎಂ.ಡಿ.ನಂಜುಂಡಸ್ವಾಮಿಯವರ ಚಿಂತನೆಗಳ ‘ಬಾರುಕೋಲು’ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ‘ಪ್ರೊ.ಎನ್ಡಿಎಂ ಅವರಿಗೆ ಜಗತ್ತಿನ ಎಲ್ಲ ಸಮಸ್ಯೆಗಳೂ ಗೊತ್ತಿದ್ದವು. ಬಹಳ ಓದಿಕೊಂಡಿದ್ದರು. ಅವರ ಒಂದು ಸ್ವಭಾವ ಏನೆಂದರೆ ಬೇರೆಯವರ ಅಭಿಪ್ರಾಯಕ್ಕೆ ಅಷ್ಟಾಗಿ ಬೆಲೆ ಕೊಡುತ್ತಿರಲಿಲ್ಲ. ಅವರು ಹೇಳಿದ್ದೆ ಸರಿ ಅಂತ ಒಪ್ಪಿಕೊಳ್ಳಬೇಕಿತ್ತು. ಒಪ್ಪಿಕೊಳ್ಳದಿದ್ದರೆ ತೋರು ಬೆರಳು ತೋರಿಸಿ, ‘ನಿನಗೆ ಗೊತ್ತಿಲ್ಲ, ನೀನು ಓದಿಕೊಂಡಿಲ್ಲ ಕುಳಿತುಕೋ ಎನ್ನುತ್ತಿದ್ದರು' ಎಂದು ಪ್ರೊಫೆಸರ್ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು.
ಅವರೇ ಪ್ರೇರಣೆ: ‘ನಾನು ರಾಜಕಾರಣಕ್ಕೆ ಬರಲು ಕಾರಣರಾದವರು ಪ್ರೊ.ಎಂಡಿಎನ್. ಅವರೊಂದಿಗೆ ರಾಜಕೀಯ ಚರ್ಚೆಗಳನ್ನು ನಡೆಸುತ್ತಿದ್ದೆವು. ಲೋಹಿಯಾ ಅವರು ಹೊರತರುತ್ತಿದ್ದ ‘ಮ್ಯಾನ್ಕೈಂಡ್’ ವಾರಪತ್ರಿಕೆಯನ್ನು ಕನ್ನಡದಲ್ಲಿ ‘ಮಾನವ’ ಎಂದು ಪ್ರಕಟಿಸಲಾಗುತ್ತಿತ್ತು. ಆಂದೋಲನ ಪತ್ರಿಕೆಯ ರಾಜಶೇಖರ್ ಕೋಟಿ ಮೈಸೂರಿನ ಕೆ.ಆರ್.ಸರ್ಕಲ್ನಲ್ಲಿ ಪತ್ರಿಕೆಯನ್ನು ಮಾರುತ್ತಿದ್ದರು. ನಂತರ ನಂಜುಂಡಸ್ವಾಮಿಯವರು ಬೆಂಗಳೂರಿಗೆ ಬಂದರು' ಎಂದು ಹೇಳಿದರು.
‘ಪ್ರೊ.ನಂಜುಂಡಸ್ವಾಮಿಯವರ ಪರಿಚಯವಾದದ್ದು 1969ನೆ ಇಸವಿಯಲ್ಲಿ. ಅವರು ಶಾರದಾ ವಿಲಾಸ ಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಅವರು ನಮಗೆ ತರಗತಿಯಲ್ಲಿ ಪಾಠ ಮಾಡಿದ ಗುರುಗಳಾಗಿರಲಿಲ್ಲ. ರಾಜಕೀಯ ಗುರುಗಳಾಗಿದ್ದರು. ನಾನು, ಬಸವರಾಜು, ನರೇಂದ್ರ, ಲಿಂಗಪ್ಪ, ಅಣ್ಣೇಗೌಡ ಯಾವಾಗಲೂ ಎಂಡಿಎನ್ ಜೊತೆ ಇರುತ್ತಿದ್ದೆವು. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆಯುತ್ತಿದ್ದ ಸ್ಟೂಡೆಂಟ್ ಯೂನಿಯನ್ ಚುನಾವಣೆಯನ್ನು ಪ್ರಶ್ನಿಸುವಂತೆ ಎಂಡಿಎನ್ ನಮಗೆ ಸೂಚಿಸಿದ್ದರು. ನಮ್ಮ ಆಗ್ರಹಕ್ಕೆ ಮಣಿದು ಒಂದು ವರ್ಷದ ನಂತರ ಬದಲಾವಣೆ ತರಲಾಯಿತು' ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು.
‘ತರಗತಿ ಮುಗಿದ ಮೇಲೆ ನಂಜುಂಡಸ್ವಾಮಿ ಅವರ ಜೊತೆಯಲ್ಲಿ ಕ್ಯಾಂಟೀನ್ಗೆ ಹೋಗುತ್ತಿದ್ದೆವು. ನಮಗೆ ಚಾರ್ಮಿನಾರ್ ಸಿಗರೇಟ್ ಹಾಗೂ ಅರ್ಧ ಗಂಟೆಗೊಮ್ಮೆ ಚಹಾ ಕೊಡಿಸುತ್ತಿದ್ದರು. ಚರ್ಚಿಸುತ್ತಿದ್ದರು. ಅಲ್ಲಿಯವರೆಗೆ ರಾಜಕಾರಣದ ಗಂಧ-ಗಾಳಿ ಗೊತ್ತಿರಲಿಲ್ಲ. ನಾನು ರಾಜಕೀಯಕ್ಕೆ ಬರಲು ಎನ್ಡಿಎಂ ಕಾರಣಕರ್ತರು. ನಂತರ ಸಮಾಜವಾದಿ ಯುವಜನ ಸಭಾ ಸೇರಿದೆ. ಅಲ್ಲಿಂದ ರಾಜಕೀಯ ಶುರುವಾಯಿತು' ಎಂದು ಅವರು ತಮ್ಮ ನೆನಪುಗಳನ್ನು ಬಿಚ್ಚಿಟ್ಟರು
‘ರೈತ ಚಳವಳಿ ಬಹಳ ಎತ್ತರಕ್ಕೆ ಹೋಗಿತ್ತು. ನನ್ನನ್ನು ಪ್ರಧಾನ ಕಾರ್ಯದರ್ಶಿ ಮಾಡಿದ್ದರು. ಎರಡು ವರ್ಷ ಸಕ್ರಿಯವಾಗಿ ರೈತ ಸಂಘದಲ್ಲಿ ಇದ್ದೆ. ಈ ಧೈರ್ಯಕ್ಕೆ, ಅಧಿಕಾರಿಗಳ ವಿರುದ್ಧ ಮಾತನಾಡಲಿಕ್ಕೆ ಪ್ರೊಫೆಸರ್ ಕಾರಣ. ಸರಕಾರಿ ವಾಹನಗಳನ್ನು ವೈಯಕ್ತಿಕ ಕೆಲಸಗಳಿಗೆ ಅಧಿಕಾರಿಗಳು ಬಳಸಿದರೆ ಚೆಕ್ ಮಾಡಲು ನಮಗೆ ಪ್ರೊಫೆಸರ್ ತಿಳಿಸಿದ್ದರು. ರೈತ ಸಂಘವು ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಆಗ್ರಹಿಸಿದೆವು. ಎನ್.ಡಿ.ಸುಂದರೇಶ್, ಕಡಿದಾಳು ಶಾಮಣ್ಣ ವಿರೋಧಿಸಿದರು. ನಾವು ಚುನಾವಣೆಗೆ ನಿಲ್ಲಬೇಕೆಂದು ಆಗ್ರಹಿಸಿ ವಾಕ್ಔಟ್ ಮಾಡಿದೆವು. ಅದಾದ ಮೇಲೆ ಸಂಪರ್ಕ ಕಡಿಮೆಯಾಯಿತು' ಎಂದು ಸಿದ್ದರಾಮಯ್ಯ ವಿಷಾದಿಸಿದರು.
‘ರೈತರೊಂದಿಗೆ ಅಂದಿನ ಮುಖ್ಯಮಂತ್ರಿ ಗುಂಡೂರಾಯರು ಒಂದು ಸಭೆ ಏರ್ಪಾಡು ಮಾಡಿದ್ದರು. ಸರಕಾರದ ಪ್ರಧಾನ ಕಾರ್ಯದರ್ಶಿಯನ್ನು ಉದ್ದೇಶಿಸಿ ಪ್ರೊಫೆಸರ್, ಆ ದೊಡ್ಡ ಕೂಲಿ ಇದ್ದಾನಲ್ಲ, ಆತ ಎದ್ದು ಹೋದರೆ ಮಾತ್ರ ನಾನು ಮಾತನಾಡೋದು ಎಂದು ಮುಖ್ಯಮಂತ್ರಿಗೆ ತಿಳಿಸಿದ್ದರು. ಅಷ್ಟು ಧೈರ್ಯ ಅವರಿಗಿತ್ತು. ಪ್ರಜಾಪ್ರಭುತ್ವ, ಸಮಾಜವಾದ, ಸಂವಿಧಾನ, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅವರದ್ದೇ ಆದ ಚಿಂತನೆಗಳಿದ್ದವು. ಅವರ ಎಲ್ಲ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ಆಗದಿದ್ದರೂ ಕೆಲವೊಂದು ವಿಚಾರಗಳನ್ನು ಮೈಗೂಡಿಸಿಕೊಂಡಿದ್ದೇವೆ. ಇಂದಿಗೂ ನಂಜುಂಡಸ್ವಾಮಿಯವರ ಚಿಂತನೆಗಳು ಬಹಳ ಪ್ರಸ್ತುತವಾಗಿವೆ' ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ರೈತರ ಕೈಗೆ ಛಾಟಿ ಕೊಟ್ಟರು: ಮಾಜಿ ಅಡ್ವೋಕೆಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಮಾತನಾಡಿ, ಪ್ರೊಫೆಸರ್ ಎಂಡಿಎನ್ ಅವರ ಧೈರ್ಯ ಹಾಗೂ ಪ್ರಭಾವಕ್ಕೆ ಸಂಬಂಧಿಸಿದಂತೆ ಘಟನೆಯೊಂದನ್ನು ಮೆಲುಕು ಹಾಕಿದರು. ರೈತ ಸಂಘದ ಪ್ರಾರಂಭದ ದಿನಗಳಲ್ಲಿ ನರಗುಂದ, ನವಲಗುಂದದಲ್ಲಿ ಗೋಲಿಬಾರ್ ಆಗಿ ಮೂರು ಜನ ರೈತರನ್ನು ಕೊಲ್ಲಲಾಯಿತು. ಆ ಸನ್ನಿವೇಶದಲ್ಲಿ ಶಿವಮೊಗ್ಗದಲ್ಲಿ ಎಂ.ಡಿ.ಸುಂದರೇಶ್, ಕಡಿದಾಳ್ ಶಾಮಣ್ಣ ನೇತೃತ್ವದಲ್ಲಿ ಪ್ರತಿಭಟನಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕಚೇರಿ ಬಳಿ ಹಮ್ಮಿಕೊಳ್ಳಲಾಗಿತ್ತು. ರೈತರ ದೊಡ್ಡ ಸಮಾವೇಶ ನಡೆಯುತ್ತಿದ್ದ ಸಂದರ್ಭದಲ್ಲಿ ಸರಕಾರದ ಎಲ್ಲ ದರ್ಪ, ದೌಲತ್ತು ಪ್ರದರ್ಶಿಸಬಹುದಾಗಿದ್ದ ಒಬ್ಬ ಪೊಲೀಸ್ ಅಧಿಕಾರಿ ಕುದುರೆ ಮೇಲೆ ಬಂದ. ಆತನ ಕೈಯಲ್ಲಿ ಒಂದು ಛಾಟಿ ಇರುತ್ತದೆ. ದಾರಿಯುದ್ದಕ್ಕೂ ಜನರ ಮೇಲೆ ಝಳಪಿಸುತ್ತಿದ್ದ. ಪ್ರೊಫೆಸರ್ ನೋಡಿದರು. ಪೊಲೀಸ್ ಸೂಪರಿಂಟೆಂಡೆಂಟ್, ಡೆಪ್ಯೂಟಿ ಕಮಿಷನರ್ ಎಲ್ಲರೂ ಇದ್ದರು. ಆಗ ನಂಜುಂಡಸ್ವಾಮಿಯವರು ಒಂದು ಮಾತು ಹೇಳಿದರು.
‘ಜಿಲ್ಲಾಧಿಕಾರಿ ಆದಿಯಾಗಿ ಖಾಕಿ ಧರಿಸಿರುವ ನೀವೆಲ್ಲ ಪ್ರಜಾ ಸೇವಕರು. ಪ್ರಜೆಗಳು ನಿಮ್ಮನ್ನು ನೇಮಕ ಮಾಡಿಕೊಂಡಿದ್ದಾರೆ. ಸಾರ್ವಜನಿಕರ ಸೇವಕರಂತೆ ನೀವು ನಡೆದುಕೊಳ್ಳಬೇಕು. ಈ ದರ್ಪ-ದೌಲತ್ತು ನಡೆಸುವ ಛಾಳಿಯನ್ನು ಬಿಡಿ. ಯಾರು ಈ ಅಧಿಕಾರಿ, ಇವನ ಕೈಗೆ ಚಾಟಿ ಕೊಟ್ಟಿದ್ದು ಯಾರು? ಡಿಸಿಯವರೇ ನಿಮಗೆ ಐದು ನಿಮಿಷ ಸಮಯ ಕೊಡುತ್ತೇನೆ. ಇನ್ನೈದು ನಿಮಿಷದಲ್ಲಿ ಆ ಅಧಿಕಾರಿ ಕೈಯಿಂದ ಆ ಛಾಟಿಯನ್ನು ಕಿತ್ತುಕೊಳ್ಳದೆ ಹೋದರೆ ಆರನೇ ನಿಮಿಷಕ್ಕೆ ರೈತರು ಆ ಕೆಲಸವನ್ನು ಮಾಡುತ್ತಾರೆಂದು ಎಚ್ಚರಿಕೆ ನೀಡಿದರು. ಈ ಮಾತು ಕೇಳಿದ ತಕ್ಷಣ ರೈತರು ಎದ್ದು ನಿಂತರು. ಆ ಅಧಿಕಾರಿ ಎಲ್ಲಿ ಓಡಿ ಹೋದನೋ ಗೊತ್ತಿಲ್ಲ. ಆ ರೀತಿ ನಂಜುಂಡಸ್ವಾಮಿಯವರು ಸರಕಾರದ ಕೈಯಲ್ಲಿದ್ದ ಚಾಟಿಯನ್ನು ಕಿತ್ತುಕೊಂಡು ರೈತರ ಕೈಗೆ ಕೊಟ್ಟರು' ಎಂದು ಪ್ರೊ.ರವಿವರ್ಮಕುಮಾರ್ ತಿಳಿಸಿದರು.
ನಂಜುಂಡಸ್ವಾಮಿಯವರ ಪುತ್ರಿ, ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ಕೃತಿಯ ಸಂಪಾದಕರಾದ ಡಾ. ನಟರಾಜ್ ಹುಳಿಯಾರ್, ರವಿಕುಮಾರ್ ಬಾಗಿ, ಮೇಲ್ಮನೆ ಸದಸ್ಯ ಪ್ರಕಾಶ್ ರಾಠೋಡ್, ಶಾಸಕ ಈ.ತುಕಾರಾಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬಾರುಕೋಲು ಹೆಗಲಿಗೇರಿಸಿದ ಸಿದ್ದರಾಮಯ್ಯ
ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ಬಳಸುತ್ತಿದ್ದ ಬಾರುಕೋಲನ್ನು ಚುಕ್ಕಿ ನಂಜುಂಡಸ್ವಾಮಿಯವರು ಸಿದ್ದರಾಮಯ್ಯನವರಿಗೆ ನೀಡಿದರು. ಆ ಬಾರುಕೋಲನ್ನು ಹೆಗಲಿಗೇರಿಸಿಕೊಂಡ ಸಿದ್ದರಾಮಯ್ಯ, ‘ಪ್ರೊ.ಎಂ.ಡಿ.ಎನ್ ಅವರು ಸರಕಾರ ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಛಾಟಿಯನ್ನು ಬೀಸುತ್ತಿದ್ದರು’ ಎಂದು ಸ್ಮರಿಸಿದರು. ಅಲ್ಲದೆ, ಬಾರುಕೋಲನ್ನು ಹೆಗಲಿಗೇರಿಸಿ ಪ್ರೊ.ಎನ್ಡಿಎಂ ಅವರ ಹೋರಾಟವನ್ನು ಮೆಲುಕು ಹಾಕಿದರು.






.jpeg)


