ದಿಲ್ಲಿ: ಮಹಿಳೆಯನ್ನು ಹಿಂಬಾಲಿಸಿ ಮಕ್ಕಳ ಎದುರೇ ಇರಿದು ಕೊಲೆಗೈದ ಆರೋಪಿ
![ದಿಲ್ಲಿ: ಮಹಿಳೆಯನ್ನು ಹಿಂಬಾಲಿಸಿ ಮಕ್ಕಳ ಎದುರೇ ಇರಿದು ಕೊಲೆಗೈದ ಆರೋಪಿ ದಿಲ್ಲಿ: ಮಹಿಳೆಯನ್ನು ಹಿಂಬಾಲಿಸಿ ಮಕ್ಕಳ ಎದುರೇ ಇರಿದು ಕೊಲೆಗೈದ ಆರೋಪಿ](https://www.varthabharati.in/sites/default/files/images/articles/2022/04/22/332588-1650606572.jpeg)
ಹೊಸದಿಲ್ಲಿ: ನೈಋತ್ಯ ದಿಲ್ಲಿಯಲ್ಲಿ ಗುರುವಾರ ಹಾಡಹಗಲೇ ದುಷ್ಕರ್ಮಿಯೊಬ್ಬ ಮಹಿಳೆಯೊಬ್ಬರನ್ನು ಹಿಂಬಾಲಿಸಿ ಅವರ ಮಕ್ಕಳ ಎದುರೇ ಇರಿದು ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ಕೃತ್ಯದ ನಂತರ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
" ಸಾಗರ್ ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಗೆ ಚೂರಿ ಇರಿತವಾಗಿದೆ ಎಂದು ಮಧ್ಯಾಹ್ನ 2:00 ಗಂಟೆಗೆ ನಮಗೆ ಪಿಸಿಆರ್ ಕರೆ ಬಂತು. ನಾವು ತಕ್ಷಣ ಸ್ಥಳಕ್ಕೆ ತಲುಪಿದ್ದೇವೆ. ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು"ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ANIಗೆ ತಿಳಿಸಿದ್ದಾರೆ.
"ಮಹಿಳೆಯು ತನ್ನ ಮಕ್ಕಳೊಂದಿಗೆ ಮನೆಗೆ ಹೋಗುತ್ತಿದ್ದಾಗ ಆರೋಪಿಯು ಮಹಿಳೆಯನ್ನು ಹಿಂಬಾಲಿಸುತ್ತಿರುವುದು ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಮಧ್ಯಾಹ್ನ 2:10 ರ ಸುಮಾರಿಗೆ ಆರೋಪಿ ಮಹಿಳೆಗೆ ಇರಿದು ಪರಾರಿಯಾಗಲು ಯಶಸ್ವಿಯಾಗಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ನಂತರ ಮಹಿಳೆ ಹಾಗೂ ಆರೋಪಿಯು ಈ ಹಿಂದೆ ನೆರೆಹೊರೆಯವರಾಗಿದ್ದರು ಎಂದು ತಿಳಿದುಬಂದಿದೆ. ಆದರೆ, ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.