ಭಟ್ಕಳ; ಬ್ಯಾಂಕಿನ ಒಂದೂವರೆ ಕೋಟಿ ರೂ. ದುರುಪಯೋಗ ಮಾಡಿ ಮ್ಯಾನೇಜರ್ ಪರಾರಿ: ದೂರು ದಾಖಲು

ಭಟ್ಕಳ: ಬ್ಯಾಂಕ್ ಮ್ಯಾನೇಜರೋರ್ವ ಬ್ಯಾಂಕಿನ ಒಂದೂವರೆ ಕೋಟಿ ರೂ. ದುರುಪಯೋಗ ಮಾಡಿ ಪರಾರಿಯಾ ಗಿರುವ ಘಟನೆ ಭಟ್ಕಳದಲ್ಲಿ ನಡೆದಿದ್ದು, ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯೂ ಇಂಗ್ಲಿಷ್ ಸ್ಕೂಲ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಭಟ್ಕಳ ಇದರ ಬಜಾರ ಶಾಖೆಯ ಮ್ಯಾನೇಜರ್ ಅನುಪ್ ಪೈ ಹಣ ದುರುಪಯೋಗ ಮಾಡಿದ್ದಾನೆ ಎಂದು ದೂರಲಾಗಿದೆ.
ಆರೋಪಿ ಅನುಪ್ ಪೈ ಮೂಲತಃ ಮಂಗಳೂರಿನ ಬೋಳಪುಗುಡ್ಡೆ, ಕಾವೂರು ನಿವಾಸಿ ಎಂದು ತಿಳಿದು ಬಂದಿದೆ. ಈತ ಬ್ಯಾಂಕಿಗೆ ಮೋಸ ಮಾಡುವ ಉದ್ದೇಶದಿಂದ ಬ್ಯಾಂಕ್ ಗ್ರಾಹಕರೊಂದಿಗೆ ಒಳ ಸಂಚು ಮಾಡಿಕೊಂಡು ಬ್ಯಾಂಕಿನ ಸಿಸ್ಟಮ್ ಸಸ್ಪೆನ್ ಖಾತೆಗೆ ಖರ್ಚು ಹಾಕಿ ಬ್ಯಾಂಕನ ಗ್ರಾಹಕರ ಖಾತೆಗೆ ಜಮಾ ಮಾಡುವ ಮೂಲಕ ಬ್ಯಾಂಕಿನ ಸುಮಾರು ಒಂದೂವರೆ ಕೋಟಿ ರೂ. ಹಣವನ್ನು ದುರುಪಯೋಗ ಪಡಿಸಿಕೊಂಡು ಬ್ಯಾಂಕಿಗೆ ಮೋಸ ಮಾಡಿದ್ದಾನೆ ಎಂದು ದೂರಲಾಗಿದೆ. ಸದ್ಯ ಈತ ವಾಸವಿದ್ದ ಭಟ್ಕಳ ರೈಲ್ವೆ ಸ್ಟೇಶನ್ ರೋಡ್ ಸಮೀಪದ ಬಾಡಿಗೆ ಮನೆಗೆ ಪೊಲೀಸರು ಭೇಟಿ ನೀಡಿದ ವೇಳೆ ಆತ ಪರಾರಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
