ಪಿಎಸ್ಐ ಪರೀಕ್ಷೆಯಲ್ಲಿ ಅವ್ಯವಹಾರ ಪ್ರಕರಣ; ಆರೋಪಿಗಳ ಹೆಡೆಮುರಿ ಕಟ್ಟುವಂತೆ ಆದೇಶ: ಆರಗ ಜ್ಞಾನೇಂದ್ರ
![ಪಿಎಸ್ಐ ಪರೀಕ್ಷೆಯಲ್ಲಿ ಅವ್ಯವಹಾರ ಪ್ರಕರಣ; ಆರೋಪಿಗಳ ಹೆಡೆಮುರಿ ಕಟ್ಟುವಂತೆ ಆದೇಶ: ಆರಗ ಜ್ಞಾನೇಂದ್ರ ಪಿಎಸ್ಐ ಪರೀಕ್ಷೆಯಲ್ಲಿ ಅವ್ಯವಹಾರ ಪ್ರಕರಣ; ಆರೋಪಿಗಳ ಹೆಡೆಮುರಿ ಕಟ್ಟುವಂತೆ ಆದೇಶ: ಆರಗ ಜ್ಞಾನೇಂದ್ರ](https://www.varthabharati.in/sites/default/files/images/articles/2022/04/23/332792-1650730010.jpg)
ಉಡುಪಿ : ಪಿಎಸ್ಐ ಪರೀಕ್ಷೆಯಲ್ಲಿ ಅವ್ಯವಹಾರ ಗೊತ್ತಾದ ತಕ್ಷಣ ಸಿಓಡಿ ತನಿಖೆಗೆ ಆದೇಶ ನೀಡಲಾಗಿದೆ. ಉತ್ತಮ ತಂಡ ರಚನೆ ಮಾಡಿದ್ದೇವೆ. ಆಮೂಲಾಗ್ರ ತನಿಖೆ ಮಾಡಿ ಆರೋಪಿಗಳ ಹೆಡೆಮುರಿ ಕಟ್ಟುವಂತೆ ಆದೇಶಿಸಿದ್ದೇನೆ. ಪಿಎಸ್ಐ ಪರೀಕ್ಷೆ ಹಗರಣವನ್ನು ನಾವು ಪ್ರಾಮಾಣಿಕವಾಗಿ ತನಿಖೆ ಮಾಡುತ್ತಿದ್ದೇವೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸಾಲಿಗ್ರಾಮದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಇಬ್ಬರು ಕಾಂಗ್ರೆಸಿಗರು ನಿನ್ನೆ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಘಟನೆಯ ಬಳಿಕ ನಮ್ಮ ಬಳಿ ಆಡಿಯೋ ಇದೆ ಎಂದು ಪತ್ರಿಕಾಗೋಷ್ಠಿ ಕರೆದಿದ್ದಾರೆ. ಈ ಮೊದಲು ಇದೇ ವಿಚಾರವಾಗಿ ವಿಧಾನ ಸಭೆಯಲ್ಲಿ ಪ್ರಶ್ನೆ ಕೇಳಿದ್ದಾರೆ. ಆವತ್ತು ಯಾಕೆ ಆಡಿಯೋ ವಿಚಾರ ಬಹಿರಂಗವಾಗಿಲ್ಲ? ಎಂದು ಪ್ರಶ್ನಿಸಿದರು.
ಹುಬ್ಬಳ್ಳಿ ಹೊತ್ತಿ ಉರಿಯುತ್ತಿತ್ತು
ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿ ಘಟನೆ ನಡೆದ ಒಂದು ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದೇವೆ. ಬಳಿಕ ರಾತ್ರಿ ಸುಮಾರು1500 ಮಂದಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಪೊಲೀಸ್ ಪಡೆ ಕಡಿಮೆ ಇದ್ದರೂ ಬಹಳ ಚೆನ್ನಾಗಿ ಪ್ರಕರಣವನ್ನು ನಿಭಾಯಿಸಲಾಗಿದೆ. ಇಲ್ಲವಾದರೆ ಹುಬ್ಬಳ್ಳಿ ಹೊತ್ತಿ ಉರಿಯುತ್ತಿತ್ತು. ಇನ್ನೊಂದು ಕೆಜೆ ಹಳ್ಳಿ ಡಿಜೆ ಹಳ್ಳಿ ಆಗುವುದನ್ನು ತಪ್ಪಸಿದ ಪೊಲೀಸರು ಅಭಿನಂದನಾರ್ಹರು ಎಂದರು.
ಹುಬ್ಬಳ್ಳಿ ಗಲಾಟೆ ರಾಜ್ಯ ಸರಕಾರ ವೈಫಲ್ಯತೆ ಹೇಗೆ ಆಗುತ್ತೆ? ಕಾಂಗ್ರೆಸಿಗರು ಒಂದು ಕೋಮನ್ನು ಎತ್ತಿಕಟ್ಟಿ, ಅವರ ತಪ್ಪುಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಪಿಎಫ್ಐ ಸಂಘಟನೆಯ ಬಹುತೇಕ ಕೇಸ್ ಹಿಂಪಡೆದಿರುವುದು ಕಾಂಗ್ರೆಸ್. ಹುಬ್ಬಳ್ಳಿ ಪ್ರಕರಣದಲ್ಲಿ ಈವರೆಗೆ 738 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಗಲಾಟೆಯಾಗಿ ಭಾಗಿಯಾದ ಸಮಾಜ ಘಾತುಕ ಶಕ್ತಿಗಳನ್ನು ಬೇರು ಸಹಿತ ಕೀಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಬೇರೆ ಯುಪಿ ಬೇರೆ
ರಾಜ್ಯದಲ್ಲೂ ಬುಲ್ಡೋಜರ್ ಓಡುತ್ತಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ಬೇರೆ ಉತ್ತರ ಪ್ರದೇಶವೇ ಬೇರೆ. ಅಲ್ಲಿನ ಪರಿಸ್ಥಿತಿ ನಮ್ಮ ರಾಜ್ಯದಲ್ಲಿ ಇಲ್ಲ. ಆದಿತ್ಯನಾಥ ಬರುವ ಮೊದಲು ರೌಡಿಗಳೇ ಆಡಳಿತ ಮಾಡಿದ್ದರು. ಅವರು ಬಂದ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ. ಅಗತ್ಯವಾದಾಗ ದಂಡಪ್ರಯೋಗ ಮಾಡುವುದೂ ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ಕಾನೂನು ಸಂವಿಧಾನಕ್ಕೆ ಬೆಲೆ ಕೊಡುವ ಸಮುದಾಯ ಇದ್ದರೆ ಈ ರೀತಿಯ ಸಮಸ್ಯೆ ಉದ್ಭವಿಸಲ್ಲ. ಯಾವುದೇ ನಿಯಮಕ್ಕೆ ಬೆಲೆ ಕೊಡದವರಿಗೆ ಆ ರೀತಿಯೇ ಪಾಠ ಕಲಿಸಬೇಕಾಗುತ್ತದೆ. ಆದರೆ ಸದ್ಯಕ್ಕೆ ಕರ್ನಾಟಕದಲ್ಲಿ ಆ ರೀತಿಯ ಸ್ಥಿತಿ ಇಲ್ಲ. ಸರಕಾರ ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ. ಅಂತಹ ಹಂತಕ್ಕೆ ಹೋದಾಗ ಅದನ್ನೂ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಉತ್ತರ ಪತ್ರಿಕೆಗಳ ಪರಿಶೀಲನೆ: ಆರಗ ಜ್ಞಾನೇಂದ್ರ
ಪಿಎಸ್ಐ ನೇಮಕಾತಿ ಅವ್ಯವಹಾರಕ್ಕೆ ಸಂಬಂಧಿಸಿ ಎಲ್ಲ ಆಯಾಮ ಗಳಲ್ಲಿಯೂ ತನಿಖೆ ನಡೆಯುತ್ತಿದೆ. ಈ ವೇಳೆಯಲ್ಲಿ ಸರಕಾರದ ಬೇರೆ ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಯಾವುದಾದರೂ ಅಕ್ರಮಗಳು ಬೆಳಕಿಗೆ ಬಂದರೂ, ಅದರ ವಿರುದ್ಧವೂ ವಿಸ್ತ್ರತ ತನಿಖೆ ನಡೆಸಲಾಗುವುದು. ಪರೀಕ್ಷೆ ಬರೆದು ಉತ್ತೀರ್ಣವಾಗಿರುವ 545 ಅಭ್ಯರ್ಥಿಗಳ ಓಎಂಆರ್ ಉತ್ತರ ಪತ್ರಿಕೆಗಳ ಪರಿಶೀಲನೆ ನಡೆಸಲಾಗುವುದು ಎಂದು ಗ್ರಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಕ್ರೀಡಾಕೂಟಕ್ಕೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಅವರು ಮಾತನಾಡುತಿದ್ದರು. ಹುಬ್ಬಳ್ಳಿ ಗಲಭೆಗೆ ಬಾಂಗ್ಲಾ ಸಂಪರ್ಕ ಇದೆ ಎನ್ನುವುದು ಸೇರಿದಂತೆ ಎಲ್ಲ ವಿಚಾರಗಳ ಕುರಿತು ವಿಸ್ತ್ರತ ತನಿಖೆ ನಡೆಸಲಾಗುತ್ತದೆ. ಗಲಭೆಯಲ್ಲಿ ಪೊಲೀಸ್ ಇಲಾಖೆಯ, ದೇವಸ್ಥಾನದ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿಗಳು ನಷ್ಟವಾಗಿದೆ. ಗಲಭೆಗೆ ಕಾರಣರಾಗಿರುವವರಿಂದ ನಷ್ಟ ವಸೂಲಾತಿಯ ಬಗ್ಗೆ ಕಾನೂನು ಆಯಾಮ ಗಳನ್ನು ಅಧ್ಯಯನ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಗಂಗೊಳ್ಳಿಯಲ್ಲಿ ಮುತಾಲಿಕ್ ಕಾರ್ಯಕ್ರಮವನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ಉಡುಪಿಯಲ್ಲಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಸಿದ ಅವರು, ವಿವಿಧ ಆಯಾಮಗಳಲ್ಲಿ ಉಡುಪಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.