ಉಡುಪಿ ಕಲ್ಸಂಕ ಜಂಕ್ಷನ್ನಲ್ಲಿ 30 ಕೋಟಿ ರೂ. ವೆಚ್ಚದ ಸರ್ಕಲ್ ನಿರ್ಮಾಣ ಪ್ರಸ್ತಾಪ: ರಘುಪತಿ ಭಟ್

ಉಡುಪಿ : ತೀರ್ಥಹಳ್ಳಿ-ಮಲ್ಪೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಕಲ್ಸಂಕ ಜಂಕ್ಷನ್ನಲ್ಲಿ ಅತಿಯಾದ ವಾಹನ ದಟ್ಟಣೆಯಿಂದ ಸಾರ್ವಜನಿಕವಾಗಿ ಉಂಟಾಗುತ್ತಿರುವ ಸಮಸ್ಯೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕಲ್ಸಂಕ ಜಂಕ್ಷನ್ನಲ್ಲಿ ಸರ್ಕಲ್ ರಚಿಸುವ ಬಗ್ಗೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಇಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ಗಳ ಜೊತೆ ಸಭೆ ನಡೆಸಿ ಚರ್ಚಿಸಿದರು.
ಈ ತೀರ್ಥಹಳ್ಳಿ- ಮಲ್ಪೆರಾಷ್ಟ್ರೀಯ ಹೆದ್ದಾರಿ ೧೬೯ಎ ಹಾದು ಹೋಗುವ ಪರ್ಕಳ ಪೇಟೆಯಿಂದ ಮಣಿಪಾಲ, ಉಡುಪಿ ನಗರದವರೆಗೆ ನಗರ ಪ್ರದೇಶವಾಗಿದ್ದು, ಉಡುಪಿ ಕೃಷ್ಣಮಠವನ್ನು, ಮಲ್ಪೆಯನ್ನು ಹಾಗೂ ಬೆಂಗಳೂರು- ಮಂಗಳೂರು- ಮುಂಬೈ ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ವಾಹನಗಳು ಈ ರಸ್ತೆಯಲ್ಲಿ ಹಾದು ಹೋಗುತ್ತಿರುತ್ತದೆ. ಕೃಷ್ಣಮಠಕ್ಕೆ ಬರುವ ಯಾತ್ರಿಕರ ವಾಹನಗಳು ಈ ಕಲ್ಸಂಕ ಜಂಕ್ಷನ್ನಲ್ಲಿ ತಿರುವನ್ನು ಪಡೆಯುತ್ತಿದೆ.
ಉಡುಪಿ ಕಲ್ಸಂಕ ಜಂಕ್ಷನ್ನಲ್ಲಿ ಅತಿಯಾದ ವಾಹನ ದಟ್ಟಣೆ ಉಂಟಾ ಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ವಾಹನಗಳು ತಡೆಯಿಲ್ಲದೆ ಸಂಚರಿಸುವಂತಾ ಗಲು ಶಾಸಕ ರಘುಪತಿ ಭಟ್, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸರ್ಕಲ್ ರಚಿಸುವ ಬಗ್ಗೆ ತಿಳಿಸಿದ್ದಾರೆ. ಈ ಯೋಜನೆಯ ಅಂದಾಜು ವೆಚ್ಚಗಳ ಸಹಿತ ಪ್ರಾಯೋಗಿಕ ನೀಲನಕ್ಷೆ ಯನ್ನು ತಯಾರಿಸಿ ರಾಷ್ಟ್ರೀಯ ಹೆದ್ದಾರಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜ್ ನಾಯ್ಕ್ ಹಾಗೂ ಸಹಾಯಕ ಅಭಿಯಂತರ ಮಂಜುನಾಥ್ ನಾಯಕ್ ವಿವರಗಳನ್ನು ನೀಡಿ ಚರ್ಚಿಸಿದರು.
ಈ ನೀಲನಕ್ಷೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಸೂಚಿಸಿ ಸಾರ್ವಜನಿಕ ವಾಗಿ ಯಾವುದೇ ಸಮಸ್ಯೆಗಳು ಉಂಟಾಗದೆ ಎಲ್ಲಾ ದಿಕ್ಕುಗಳಿಂದ ಬರುವ ವಾಹನಗಳು ಈ ಕಲ್ಸಂಕ ಜಂಕ್ಷನ್ನಲ್ಲಿ ಯಾವುದೇ ತಡೆಯಿಲ್ಲದೆ ಸಂಚರಿಸುವಂತಾಗಲು 30 ಕೋಟಿ ರೂ. ವೆಚ್ಚದ ಸಮರ್ಪಕವಾದ ಸರ್ಕಲ್ ನಿರ್ಮಾಣಕ್ಕೆ ಸೂಕ್ತ ಪ್ರಸ್ತಾವನೆ ತಯಾರಿಸುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು.







