ನಾಲ್ವರು ನೈರ್ಮಲ್ಯ ಕಾರ್ಮಿಕರ ಸಾವಿನ ಪ್ರಕರಣ: ಎನ್ಎಚ್ಆರ್ಸಿಯಿಂದ ಹರ್ಯಾಣ ಸರಕಾರಕ್ಕೆ ನೋಟಿಸ್
![ನಾಲ್ವರು ನೈರ್ಮಲ್ಯ ಕಾರ್ಮಿಕರ ಸಾವಿನ ಪ್ರಕರಣ: ಎನ್ಎಚ್ಆರ್ಸಿಯಿಂದ ಹರ್ಯಾಣ ಸರಕಾರಕ್ಕೆ ನೋಟಿಸ್ ನಾಲ್ವರು ನೈರ್ಮಲ್ಯ ಕಾರ್ಮಿಕರ ಸಾವಿನ ಪ್ರಕರಣ: ಎನ್ಎಚ್ಆರ್ಸಿಯಿಂದ ಹರ್ಯಾಣ ಸರಕಾರಕ್ಕೆ ನೋಟಿಸ್](https://www.varthabharati.in/sites/default/files/images/articles/2022/04/23/332807-1650733390.jpeg)
ಹೊಸದಿಲ್ಲಿ,ಎ.23: ಹಿಸಾರ್ ಜಿಲ್ಲೆಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ನಾಲ್ವರು ನೈರ್ಮಲ್ಯ ಕಾರ್ಮಿಕರು ಸಾವನ್ನಪ್ಪಿದ ಘಟನೆಯ ಬಗ್ಗೆ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ (ಎನ್ಎಚ್ಆರ್ಸಿ)ವು ಹರ್ಯಾಣದ ಮುಖ್ಯ ಕಾರ್ಯದರ್ಶಿಯವರಿಗೆ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ.
ಚರಂಡಿಗುಂಡಿಗಳಲ್ಲಿ ಸಾವನ್ನಪ್ಪುವಂತಹ ಘಟನೆಗಳನ್ನು ತಪ್ಪಿಸಲು ಸಾಧ್ಯವಿದೆಯಾದರೂ ಆ ಕೆಲಸದ ಬಗೆಗಿರುವ ತಿರಸ್ಕಾರದ ಭಾವನೆಯಿಂದಾಗಿ ಸುರಕ್ಷಿತ ಉಪಕರಣಗಳಿಲ್ಲದೆ ಶೌಚಗುಂಡಿಗಳನ್ನು ಅಪಾಯಕಾರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸುವ ಪ್ರವೃತ್ತಿಯು ಮುಂದುವರಿದಿದೆಯೆಂದು ಎನ್ಎಚ್ಆರ್ಸಿ ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.
ಕಾರ್ಮಿಕರಿಗೆ ಸಮರ್ಪಕವಾದ ಸುರಕ್ಷತಾ ಉಪಕರಣಗಳನ್ನು ಒದಗಿಸುವುದನ್ನು ಖಾತರಿಪಡಿಸಲು ಶೌಚಗುಂಡಿಗಳು, ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ವಚ್ತಗೊಳಿಸುವ ಕೆಲಸಗಳಿಗೆ ಯಂತ್ರಗಳ ಬಳಕೆಗೆ ಆಯೋಗವು ಒತ್ತು ನೀಡಿದೆಯಾದರೂ, ಇಂತಹ ಯಾತನಾಕಾರಿ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತವೆ’’ ಎಂದು ಆಯೋಗವು ತನ್ನ ಹೇಳಿಕೆಯಲ್ಲಿ ಗಮನಸೆಳೆದಿದೆ.
ಹಿಸಾರ್ನ ಬುದ್ಧ ಖೇರಾ ಗ್ರಾಮದಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ನಾಲ್ವರು ನೈರ್ಮಲ್ಯ ಕಾರ್ಮಿಕರು ವಿಷಾನಿಲ ಸೇವನೆಯಿಂದಾಗಿ ಮೃತಪಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಸ್ವಯಂಪ್ರೇರಿತವಾಗಿ ನೋಟಿಸ್ ಜಾರಿಗೊಳಿಸಿರುವುದಾಗಿ ಹೇಳಿದೆ.
ಘಟನೆಯ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ನೀಡಲಾದ ಪರಿಹಾರ ಕುರಿತಾದ ವಿವರಗಳನ್ನು ಒಳಗೊಂಡಂತೆ ಆರು ವಾರಗಳೊಳಗೆ ವರದಿಯನ್ನು ಸಲ್ಲಿಸುವಂತೆ ಆಯೋಗವು ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಮಾಡಿದೆ.
‘‘ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿರಾಸಕ್ತಿಯಿಂದಾಗಿ ಅಮೂಲ್ಯವಾದ ಮಾನವಜೀವಗಳು ಮತ್ತೊಮ್ಮೆ ನಷ್ಟವಾಗಿವೆ. ಅವರ ಮಾನವಹಕ್ಕುಗಳ ವ್ಯಾಪಕವಾಗಿ ಉಲ್ಲಂಘಿಸಲಾಗಿದೆ’’ ಎಂದು ಎನ್ಎಚ್ಆರ್ಸಿ ತಿಳಿಸಿದೆ.
ಮೃತಪಟ್ಟ ಕಾರ್ಮಿಕರೆಲ್ಲರೂ 25ರಿಂದ 28 ವರ್ಷ ವಯೋಮಾನದೊಳಗಿನವರು. ಅಧಿಕಾರಿಗಳು ಸಮರ್ಪಕವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುತ್ತಿದ್ದರೆ ಈ ಧಾರುಣ ಘಟನೆ ನಡೆಯುವುದನ್ನು ತಪ್ಪಿಸಬಹುದಿತ್ತು ಎಂದವರು ಹೇಳಿದ್ದಾರೆ.
‘‘ ಬಡ ಹಾಗೂ ಅಮಾಯಕ ಕಾರ್ಮಿಕರ ಮಾನವಹಕ್ಕುಗಳನ್ನು ನಾಗರಿಕ ಅಧಿಕಾರಿಗಳು ಉಲ್ಲಂಘಿಸುತ್ತಿರುವಂತಹ ಅಜಾಗರೂಕ ಪ್ರವೃತ್ತಿಯನ್ನು ಇಂತಹ ಘಟನೆಗಳು ತೋರಿಸಿಕೊಡುತ್ತವೆ’’ ಎಂದು ಎನ್ಎಚ್ಆರ್ಸಿ ಹೇಳಿಕೆ ತಿಳಿಸಿದೆ. ಶೌಚಗುಂಡಿಗಳನ್ನು ಸ್ವಚ್ಛಗೊಳಿಸುತ್ತಿದ್ದಾಗ ಕಾರ್ಮಿಕರು ಮೃತಪಟ್ಟ ಘಟನೆಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ನಡೆದಿವೆ ಎಂದು ವರದಿ ಹೇಳಿದೆ.