ಹಿಜಾಬ್ ಕುರಿತು ಯಶ್ಪಾಲ್ ಸುವರ್ಣ ದುರುದ್ದೇಶದ ಹೇಳಿಕೆ : ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಖಂಡನೆ
ಉಡುಪಿ : ಹಿಜಾಬ್ ವಿಷಯಕ್ಕೆ ಸಂಬಂಧಿಸಿದಂತೆ ಉಡುಪಿ ಪದವಿಪೂರ್ವ ಕಾಲೇಜು ಇದರ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಹಾಗೂ ಉಡುಪಿ ಬಿಜೆಪಿ ಮುಂದಾಳು ಯಶ್ಪಾಲ್ ಸುವರ್ಣ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸುವುದರ ಕುರಿತು ತೀರಾ ನಕಾರಾತ್ಮಕ ಹಾಗೂ ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಉದ್ದೇಶದ ಹೇಳಿಕೆಯನ್ನು ಕೊಟ್ಟಿರುತ್ತಾರೆ. ಈ ದುರುದ್ದೇಶದ ಹೇಳಿಕೆಯನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟವು ಖಂಡಿಸುವುದಾಗಿ ತಿಳಿಸಿದೆ.
ಅವರ ಹೇಳಿಕೆ ಸಭ್ಯ ಸಮಾಜಕ್ಕೆ ತಕ್ಕುದಲ್ಲ ಹಾಗೂ ದೇಶದ ಸಂವಿಧಾನಕ್ಕೆ ಅನುರೂಪವಾಗಿ ಪ್ರಜಾತಾಂತ್ರಿಕ ಮಾರ್ಗಗಳ ಮೂಲಕ ರಾಜಕೀಯ ವ್ಯವಸ್ಥೆಯ ಭಾಗವಾಗಿರುತ್ತೇನೆಂಬ ಭರವಸೆ ನೀಡಿ ನೊಂದಣಿಗೊಂಡ ರಾಜಕೀಯ ಪಕ್ಷದ ಸದಸ್ಯನಾಗಿ ಈ ರೀತಿ ಹೇಳಿಕೆ ನೀಡುವುದು ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಗೆ ಮಾಡುವ ದ್ರೋಹವಾಗಿದೆ. ಪಕ್ಷವು ಮೌನವಾಗಿ ಇದನ್ನು ಸಮ್ಮತಿಸುತ್ತದೆ ಎಂದಾದರೆ ಇದು ಅತ್ಯಂತ ಕಳವಳಕಾರಿ. ತನ್ನ ಸದಸ್ಯರ ಅಸಂವಿಧಾನಿಕ ಮತ್ತು ಅನೈತಿಕ ನಡೆಯಿಂದಾಗಿ ಈಗಾಗಲೇ ಸಾಮಾಜಿಕ, ರಾಜಕೀಯ ನೈತಿಕತೆಯನ್ನು ಕಳಕೊಂಡ ಪಕ್ಷದ ಹೀನಾಯ ಸ್ಥಿತಿಯೆಂದೇ ಪರಿಗಣಿಸಬೇಕಾಗುತ್ತದೆ. ಅಧಿಕಾರದಲ್ಲಿರುವ ಪಕ್ಷ ತನ್ನ ಭ್ರಷ್ಟಾಚಾರ, ಅವ್ಯವಹಾರಗಳನ್ನು ಮುಚ್ಚಿಹಾಕಲು ಬಳಸುತ್ತಿರುವ ಅಸ್ತ್ರವೇ ಮುಸ್ಲಿಮ್ ದ್ವೇಷ. ಜನೋಪಯೋಗಿ ಕೆಲಸಗಳು, ಅಭಿವೃದ್ಧಿ ಕೆಲಸಗಳಿಲ್ಲದೆ ಬರಿದಾದ ಸಂದರ್ಭದಲ್ಲಿ ರಾಜಕೀಯ ಲಾಭ ಪಡೆಯಲು ಸುಲಭದ ಮಾರ್ಗ ಮುಸ್ಲಿಮ್ ದ್ವೇಷ. ಇದರ ಹೊರತು ಇವರ ಬಳಿ ಬೇರೆ ಬಂಡವಾಳವಿಲ್ಲ. ಅದ್ದರಿಂದ ಪಕ್ಷದಲ್ಲೂ ಇವರ ಎಳೆದಾಟ- ಮೇಲಾಟಗಳಿಗೂ ಮುಸ್ಲಿಮ್ ಸಮುದಾಯದ ದ್ವೇಷವನ್ನು ಬಳಸಿಕೊಳ್ಳುತ್ತಿದ್ದಾರೆ. ಶಾಸಕ ರಘುಪತಿ ಭಟ್ ಒಂದು ಹೇಳಿಕೆ ಕೊಟ್ಟರೆ ಅದಕ್ಕಿಂತ ಕಟುವಾದ ಹೇಳಿಕೆ ತಾನು ಕೊಟ್ಟು ಪಕ್ಷದಲ್ಲಿ ತಾನು ಹೀರೊಗಿರಿ ಮೆರೆಯಬೇಕೆಂದು ಯಶ್ಪಾಲ್ ಲೆಕ್ಕಾಚಾರ. ಇಂತಹ ನೀತಿಯಿಲ್ಲದ ರಾಜಕೀಯಕ್ಕೆ ಆಯುಷ್ಯ ಕಡಿಮೆ, ತಮ್ಮ ಹಿಂದಿನ ಬಲಪ್ರದರ್ಶನದ ಮೆರೆದಾಟವನ್ನು ಬಿಟ್ಟು ಓರ್ವ ರಾಜಕಾರಣಿಯಾಗಿ ಯಶ್ಪಾಲ್ ಜವಾಬ್ದಾರಿಯುತ ನಡವಳಿಕೆಯನ್ನು ಪ್ರದರ್ಶಿಸಲಿ.
ತನ್ನ ವಾದಕ್ಕೆ ಫ್ರಾನ್ಸನ್ನು ಉದಾಹರಣೆಯಾಗಿ ಬಳಸಿಕೊಳ್ಳುವ ಅವರು ನಮ್ಮದು ಸರ್ವರನ್ನೂ "ಒಳಗೊಳ್ಳುವ ಜಾತ್ಯಾತೀತ ಪ್ರಜಾಪ್ರಭುತ್ವ" ಎನ್ನುದನ್ನು ಮರೆಯದಿರಲಿ. ಫ್ರಾನ್ಸನ್ನು ಉದಾಹರಣೆ ನೀಡುವಾಗ ನ್ಯೂಝಿಲೆಂಡ್, ಇಂಗ್ಲೆಂಡ್, ಐರ್ಲೆಂಡ್, ಕೆನಡಾ ಮುಂತಾದ ಪಾಶ್ಚಾತ್ಯ ದೇಶಗಳಲ್ಲಿ ಪೋಲಿಸ್ ಇಲಾಖೆಗಳಲ್ಲಿಯೂ ಹಿಜಾಬ್'ಗೆ ಅವಕಾಶವಿರುವುದನ್ನು ಏಕೆ ಮರೆತು ಬಿಡುತ್ತಾರೆ ? ಯಶ್ಪಾಲ್ ತನ್ನ ರಾಜಕೀಯಕ್ಕಾಗಿ ದ್ವೇಷ ಬಿತ್ತುದನ್ನು ಬಿಟ್ಟು ಸಕಾರಾತ್ಮಕ ಕೆಲಸಗಳ ಮೂಲಕ ನಾಯಕನಾಗಲಿ ಎಂದು ಮುಸ್ಲಿಮ್ ಒಕ್ಕೂಟದ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.