ಮುಂಡಾಜೆ: ಮನೆಗೆ ನುಗ್ಗಿ ನಗ-ನಗದು ಕಳವು

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಒಂಜರೆಬೈಲು ನಿವಾಸಿ ಹರ್ಷ ಭಟ್ ಎಂಬವರ ಮನೆಯಲ್ಲಿ ಶನಿವಾರ ತಡರಾತ್ರಿ ಕಳ್ಳತನ ನಡೆದಿದೆ.
ಮುಂಬಾಗಿಲಿನ ಚಿಲಕನ್ನು ತೆಗೆದು ಒಳ ಪ್ರವೇಶಿಸಿ ಮನೆಯಲ್ಲಿದ್ದ ಆರು ಪವನ್ ಚಿನ್ನ ಹಾಗೂ 14 ಸಾವಿರ ರೂಪಾಯಿ ನಗದು ದೋಚಿದ್ದಾರೆ. ರಾತ್ರಿ 2 ಗಂಟೆ ಸುಮಾರಿಗೆ ಮನೆಮಂದಿಗೆ ಎಚ್ಚರವಾದಾಗ ಮುಂಬಾಗಿಲ ಸಮೀಪ ಓರ್ವ ಕಂಡುಬಂದಿದ್ದು ಆಗ ಮನೆಮಂದಿ ಬೊಬ್ಬೆ ಹೊಡೆದಾಗ ಓಡಿ ಹೋಗಿದ್ದಾನೆಂದು ಮನೆಯವರು ಹೇಳುತ್ತಿದ್ದಾರೆ.
ಮನೆಯಲ್ಲಿ ಒಟ್ಟು 5 ಜನ ಇದ್ದು, 2 ಬೆಡ್ ರೂಮ್ ಗಳಲ್ಲಿ ಮಲಗಿದ್ದರು. ಇನ್ನೊಂದು ಬೆಡ್ ರೂಮಿಗೆ ನುಗ್ಗಿ ರೂಮಿನಲ್ಲಿದ್ದ ಕಪಾಟಿನ ಬೀಗದ ಕೈ ಉಪಯೋಗಿಸಿ ನಗ ನಗದು ದೋಚಿದ್ದಾರೆ. ಈ ಮನೆಯು ಮುಂಡಾಜೆಯಿಂದ ಧರ್ಮಸ್ಥಳಕ್ಕೆ ಹೋಗುವ ಹೆದ್ದಾರಿಯ ತೀರಾ ಸಮೀಪದಲ್ಲಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪಿ ಎಸ್ ಐ ಕೃಷ್ಣಕಾಂತ ಪಾಟೀಲ್ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಪೋಲಿಸ್ ಶ್ವಾನದಳವನ್ನು ಕರೆ ತರಲಾಗಿದ್ದು ಶ್ವಾನವು ಮನೆಯಿಂದ 500 ಮೀ.ದೂರದವರೆಗೆ ಮುಖ್ಯರಸ್ತೆಯಲ್ಲಿ ಕ್ರಮಿಸಿ ವಾಪಸಾಗಿದೆ.





