ಚೀನಿ ಪ್ರಜೆಗಳ ಪ್ರವಾಸಿ ವೀಸಾ ಅಮಾನತು: ಭಾರತೀಯ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿರುವ ಚೀನಾಕ್ಕೆ ತಿರುಗೇಟು
![ಚೀನಿ ಪ್ರಜೆಗಳ ಪ್ರವಾಸಿ ವೀಸಾ ಅಮಾನತು: ಭಾರತೀಯ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿರುವ ಚೀನಾಕ್ಕೆ ತಿರುಗೇಟು ಚೀನಿ ಪ್ರಜೆಗಳ ಪ್ರವಾಸಿ ವೀಸಾ ಅಮಾನತು: ಭಾರತೀಯ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿರುವ ಚೀನಾಕ್ಕೆ ತಿರುಗೇಟು](https://www.varthabharati.in/sites/default/files/images/articles/2022/04/24/332923-1650823149.jpg)
PHOTO COURTESY:TWITTER
ಹೊಸದಿಲ್ಲಿ,ಎ.24: ಭಾರತವು ಚೀನಿ ಪ್ರಜೆಗಳಿಗೆ ಪ್ರವಾಸಿ ವೀಸಾಗಳನ್ನು ಅಮಾನತುಗೊಳಿಸಿದೆ ಎಂದು ಇಂಟರ್ನ್ಯಾಷನಲ್ ಏರ್ ಟ್ರಾನ್ಸಪೋರ್ಟ್ ಅಸೋಸಿಯೇಷನ್ (ಐಎಟಿಎ) ತನ್ನ ಸದಸ್ಯ ರಾಷ್ಟ್ರಗಳಿಗೆ ತಿಳಿಸಿದೆ. 2020ರ ಆರಂಭದಲ್ಲಿ ಕೋವಿಡ್ ಸಾಂಕ್ರಾಮಿಕದ ಸ್ಫೋಟದಿಂದಾಗಿ ಚೀನಾದ ವಿವಿಧ ವಿವಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಮಾರು 22,000 ಭಾರತೀಯ ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಿದ್ದರು. ಆದರೆ ಈ ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ಪೂರ್ಣಗೊಳಿಸಲು ಚೀನಾಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ. ಚೀನಾ ಅವರಿಗೆ ಪ್ರವೇಶವನ್ನು ನಿರಾಕರಿಸುತ್ತಲೇ ಬಂದಿದೆ. ಈ ಬಗ್ಗೆ ಭಾರತವು ಮಾಡಿಕೊಂಡಿದ್ದ ಮನವಿಗಳನ್ನೂ ಅದು ಪರಿಗಣಿಸಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಭಾರತವು ಚೀನಾಕ್ಕೆ ಅದರದೇ ಭಾಷೆಯಲ್ಲಿ ಉತ್ತರಿಸಿರುವಂತಿದೆ.
ಚೀನಿ ಪ್ರಜೆಗಳಿಗೆ ನೀಡಲಾಗಿರುವ ಪ್ರವಾಸಿ ವೀಸಾಗಳು ಮಾನ್ಯತೆಯನ್ನು ಕಳೆದುಕೊಂಡಿವೆ. ಭೂತಾನ,ಭಾರತ,ಮಾಲ್ದೀವ್ಸ್ ಮತ್ತು ನೇಪಾಳದ ಪ್ರಜೆಗಳು, ಭಾರತವು ನೀಡಿರುವ ನಿವಾಸಿ ಪರವಾನಿಗೆಗಳು,ಭಾರತದ ವೀಸಾ ಅಥವಾ ಇ-ವೀಸಾಗಳು,ಭಾರತದ ಸಾಗರೋತ್ತರ ಪ್ರಜೆ (ಒಸಿಐ) ಕಾರ್ಡ್ ಅಥವಾ ಬುಕ್ಲೆಟ್,ಭಾರತೀಯ ಮೂಲದ ವ್ಯಕ್ತಿ (ಒಸಿಐ) ಕಾರ್ಡ್ ಮತ್ತು ರಾಜತಾಂತ್ರಿಕ ಪಾಸ್ಪೋರ್ಟ್ಗಳನ್ನು ಹೊಂದಿರುವ ಪ್ರಯಾಣಿಕರು ಭಾರತವನ್ನು ಪ್ರವೇಶಿಸಲು ಅವಕಾಶವಿದೆ. 10 ವರ್ಷಗಳ ಅವಧಿಯ ಪ್ರವಾಸಿ ವೀಸಾಗಳು ಇನ್ನು ಮಂದೆ ಮಾನ್ಯತೆಯನ್ನು ಹೊಂದಿರುವುದಿಲ್ಲ ಎಂದು ಐಎಟಿಎ ಸುತ್ತೋಲೆಯಲ್ಲಿ ತಿಳಿಸಿದೆ.
ಐಎಟಿಎ ಸುಮಾರು 290 ಸದಸ್ಯರನ್ನು ಹೊಂದಿರುವ ಜಾಗತಿಕ ವಾಯುಯಾನ ಸಂಸ್ಥೆಯಾಗಿದ್ದು,ಶೇ.80ಕ್ಕೂ ಅಧಿಕ ಜಾಗತಿಕ ವಾಯು ಸಂಚಾರಗಳ ಮೇಲೆ ನಿಯಂತ್ರಣವನ್ನು ಹೊಂದಿದೆ.
ಕಟ್ಟುನಿಟ್ಟಾದ ನಿರ್ಬಂಧಗಳ ಮುಂದುವರಿಕೆಯು ಸಾವಿರಾರು ಭಾರತೀಯ ವಿದ್ಯಾರ್ಥಿಗಳ ಶೈಕ್ಷಣಿಕ ವೃತ್ತಿಜೀವನವನ್ನು ಅಪಾಯಕ್ಕೆ ಸಿಲುಕಿಸುತ್ತಿರುವುದರಿಂದ ಈ ವಿಷಯದಲ್ಲಿ ಸೌಹಾರ್ದಯುತ ನಿಲುವನ್ನು ತಳೆಯುವಂತೆ ಭಾರತವು ಚೀನಾವನ್ನು ಆಗ್ರಹಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಮಾ.17ರಂದು ಹೇಳಿದ್ದರು. ‘ಚೀನಾ ಈ ವಿಷಯವನ್ನು ಪರಿಶೀಲಿಸಲಿದೆ ಎಂದು ಆ ದೇಶದ ವಿದೇಶಾಂಗ ಸಚಿವಾಲಯದ ವಕ್ತಾರರು ಫೆ.8ರಂದು ತಿಳಿಸಿದ್ದರು. ಆದರೆ ಈವರೆಗೆ ಚೀನಾ ಯಾವುದೇ ಸ್ಪಷ್ಟ ಉತ್ತರವನ್ನು ನೀಡಿಲ್ಲ. ಭಾರತೀಯ ವಿದ್ಯಾರ್ಥಿಗಳ ಹಿತಾಸಕ್ತಿಯಲ್ಲಿ ಸೌಹಾರ್ದಯುತ ನಿಲುವು ತೆಗೆದುಕೊಳ್ಳುವಂತೆ ಚೀನಾಕ್ಕೆ ನಮ್ಮ ಆಗ್ರಹವನ್ನು ನಾವು ಮುಂದುವರಿಸುತ್ತೇವೆ ’ ಎಂದು ಬಾಗ್ಚಿ ತಿಳಿಸಿದ್ದರು.