2027ಕ್ಕೆ ಕರ್ನಾಟಕ ‘ಮಲೇರಿಯಾ ಮುಕ್ತ ರಾಜ್ಯ' ಆಗಬೇಕು: ಸಚಿವ ಡಾ.ಸುಧಾಕರ್

ಸಚಿವ ಡಾ.ಸುಧಾಕರ್
ಬೆಂಗಳೂರು, ಎ. 25: ‘ಮನುಕುಲಕ್ಕೆ ಶಾಪವಾಗಿರುವ ಮಲೇರಿಯಾ ವಿರುದ್ಧ ಸರಕಾರ ವಿವಿಧ ರೀತಿಯಲ್ಲಿ ಹೋರಾಟ ಮಾಡುತ್ತಿದೆ. ಕೇಂದ್ರ ಸರಕಾರ 2030ಕ್ಕೆ ‘ಮಲೇರಿಯಾ ಮುಕ್ತ ಭಾರತ'ಕ್ಕೆ ಶ್ರಮಿಸುತ್ತಿದೆ. ಆದರೆ ಕರ್ನಾಟಕದಲ್ಲಿ ‘2027ರ ಹೊತ್ತಿಗೆ ಮಲೇರಿಯಾ ನಿರ್ಮೂಲನೆ' ಆಗಬೇಕು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಕರೆ ನೀಡಿದ್ದಾರೆ.
ಸೋಮವಾರ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಪಿಎಂಎಸ್ಎಸ್ವೈ ಆಸ್ಪತ್ರೆ ‘ವಿಶ್ವ ಮಲೇರಿಯಾ ದಿನ'ದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಲೇರಿಯಾ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ. ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಜೊತೆಯಾಗಿ ಶ್ರಮಪಟ್ಟರೆ ಆರೋಗ್ಯಯುಕ್ತ ಕರ್ನಾಟಕದ ಕನಸು ನನಸಾಗಬಹುದು' ಎಂದು ಹೇಳಿದರು.
‘ಎ.25ನ್ನು ವಿಶ್ವ ಮಲೇರಿಯಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಾರ್ವಜನಿಕರಲ್ಲಿ ಮಲೇರಿಯಾ ಬಗ್ಗೆ ಅರಿವು ಮೂಡಿಸುವ ಕಾರ್ಯ ಜಾಥಾಗಳ ಮೂಲಕ ನಡೆಯುತ್ತಿದೆ. ಪ್ರತಿಯೊಂದು ತಾಲೂಕುಗಳಲ್ಲೂ ಮಲೇರಿಯಾ ಬಗ್ಗೆ ಅರಿವು ಮೂಡಿಸುವ ಕಾರ್ಯ ವಿಭಿನ್ನವಾಗಿ ನಡೆಯುತ್ತಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರು ಸ್ವಚ್ಛತೆಯ ಮಹತ್ವನ್ನು ಸಾರ್ವಜನಿಕರಿಗೆ ತಿಳಿಸುತ್ತಿದ್ದಾರೆ'ಂದು ಅವರು ಅಭಿಪ್ರಾಯಪಟ್ಟರು.
ವಿಶ್ವ ಮಲೇರಿಯಾ ದಿನವನ್ನು ಆರಂಭದಲ್ಲಿ ‘ಆಫ್ರಿಕಾ ಮಲೇರಿಯಾ ದಿನ' ಎಂದು ಆಚರಣೆ ಮಾಡಲಾಗುತ್ತಿತ್ತು. ಬಿಸಿಲಿರುವ ಪ್ರದೇಶಗಳಲ್ಲಿ ಮಲೇರಿಯಾ ಹೆಚ್ಚಾಗಿತ್ತು. ಹೀಗಾಗಿ ಆಫ್ರಿಕಾ ದೇಶಗಳಲ್ಲಿ, ಏಷ್ಯಾ ಖಂಡದಲ್ಲಿ ಮಲೇರಿಯಾ ಸೋಂಕು ಹೆಚ್ಚಿದೆ. ಅಮೆರಿಕಾದಲ್ಲಿ ಪ್ರವಾಸಿಗರಿಂದಾಗಿ ಅಪರೂಪಕ್ಕೆ ಮಲೇರಿಯಾ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. ಐರೋಪ್ಯ ದೇಶಗಳಲ್ಲಿ ಮಲೇರಿಯಾ ಪ್ರಕರಣಗಳು ಅತೀ ಕಡಿಮೆ ಪ್ರಮಾಣದಲ್ಲಿ ದಾಖಲಾಗುತ್ತವೆ. ಏಷ್ಯಾ ಖಂಡದಲ್ಲಿ ಮಲೇರಿಯಾದಿಂದಾಗುವ ಸಾವುಗಳ ಪೈಕಿ ಅತೀ ಹೆಚ್ಚು ಸಾವು ಭಾರತದಲ್ಲೇ ಆಗುತ್ತದೆ. ಇದು ಗಂಭೀರ ವಿಚಾರ ಎಂದು ಹೇಳಿದರು.
ಸ್ವಚ್ಛ ಭಾರತ್ ಎಲ್ಲದಕ್ಕೂ ಅಡಿಪಾಯ: ‘ಪ್ರಧಾನಿ ಮೋದಿ, ಸ್ವಚ್ಛ ಭಾರತ್ ಅಭಿಯಾನ ಆರಂಭಿಸಿದಾಗ ವಿರೋಧಿಗಳು ಗೇಲಿ ಮಾಡಿದ್ದರು. ಸ್ವಚ್ಛ ಭಾರತದ ಉದ್ದೇಶವೇ ಬೇರೆ ಆಗಿದೆ. ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ಸರಿಯಾಗಬೇಕಾದರೆ ಶುಚಿತ್ವ ಬಹುಮುಖ್ಯ. ಐದಾರು ದಶಕಗಳಲ್ಲಿ ಯಾರಿಗೂ ಅರ್ಥವಾಗದೆ ಇದ್ದಿದ್ದು, ಪ್ರಧಾನಿಗೆ ಅರ್ಥವಾಯಿತು, ಹೀಗಾಗಿ ಸ್ವಚ್ಛ ಭಾರತವನ್ನು ಆಂದೋಲನದ ರೀತಿಯಲ್ಲಿ ಕೈಗೊಂಡರು. ಈ ಹಿಂದೆ ಗ್ರಾಮೀಣ ಪ್ರದೇಶದ ಶೇ.70-80ರಷ್ಟು ಮನೆಗಳಲ್ಲಿ ಶೌಚಾಲಯಗಳು ಇರುತ್ತಿರಲಿಲ್ಲ. ಬಯಲು ಶೌಚಾಲಯದ ಮೊರೆ ಹೋಗಬೇಕಿತ್ತು. ಇದು ಸಾಮಾಜಿಕ ಪೀಡುಗಾಗಿತ್ತು. ಜೊತೆಗೆ ಆರೋಗ್ಯಕ್ಕೆ ಮಾರಕವಾಗಿರುತ್ತಿತ್ತು. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಏಳು ವರ್ಷಗಳಲ್ಲಿ 12 ಕೋಟಿ ಶೌಚಾಲಯ ನಿರ್ಮಾಣವಾಗಿದೆ. ಶುಚಿತ್ವದ ಬಗ್ಗೆ ಮನೆ ಮನೆಯಲ್ಲೂ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ತಪಾಸಣೆಗೆ ಮಹತ್ವ ನೀಡಿ: ‘ಜ್ವರ ಅಥವಾ ಬೇರೆ ರೋಗ ಲಕ್ಷಣ ಕಂಡು ಬಂದಾಗ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ರೋಗವನ್ನು ಬೇಗನೆ ಪತ್ತೆ ಹಚ್ಚಬಹುದು. ಚಿಕಿತ್ಸೆಯನ್ನು ಬೇಗನೆ ಆರಂಭಿಸಬಹುದು. ಸರಕಾರ ಎಲ್ಲ ಪ್ರಾಥಮಿಕ, ಸಮುದಾಯ, ತಾಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆಗೆ ಬೇಕಾದಂತಹ ವ್ಯವಸ್ಥೆಗಳನ್ನು ಮಾಡಿದೆ. ಸಾರ್ವಜನಿಕರು ಈ ವ್ಯವಸ್ಥೆಯನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳು ಸರಕಾರದ ಜೊತೆ ಕೈ ಜೋಡಿಸಬೇಕು.
ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ವೈದ್ಯರುಗಳು ಮಲೇರಿಯಾ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲ ಪಡಿಸಬೇಕು. ಕರ್ನಾಟಕವನ್ನು ಮಲೇರಿಯಾ ಮುಕ್ತ ರಾಜ್ಯವನ್ನಾಗಿ ಮಾಡಬೇಕು. ಪ್ರಧಾನಿಗಳು 2030ಕ್ಕೆ ಮಲೇರಿಯಾ ಮುಕ್ತ ಭಾರತಕ್ಕೆ ಕರೆ ಕೊಟ್ಟಿದ್ದಾರೆ. ಆದರೆ ಕರ್ನಾಟಕ 2027ರ ಹೊತ್ತಿಗೆ ಮಲೇರಿಯಾವನ್ನು ಮುಕ್ತ ವಾಗಬೇಕು. ಅದಕ್ಕಾಗಿ ತಯಾರಿ, ಸಿದ್ಧತೆಗಳು ಮತ್ತು ವಿಶೇಷ ಕಾರ್ಯಯೋಜನೆಗಳು ಬೇಗನೆ ಸಿದ್ಧವಾಗಬೇಕು ಎಂದು ಹೇಳಿದರು.
ಕಟ್ಟಕಡೆಯ ವ್ಯಕ್ತಿಯೂ ಗುಣಮಟ್ಟದ ಚಿಕಿತ್ಸೆ ಪಡೆಯಬೇಕು
‘ಕೆಲ ಆರೋಗ್ಯ ಕಾರ್ಯಕರ್ತರಿಂದ ಸರಕಾರಕ್ಕೆ ಇರುಸು-ಮುರುಸು ಉಂಟಾಗುವ ಘಟನೆ ನಡೆದಿದ್ದು, ಸರಕಾರದ ಗಮನಕ್ಕೆ ಬಂದಿದೆ. ಅದಕ್ಕಾಗಿ ಕ್ರಮಗೊಳ್ಳಲಾಗಿದೆ. ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಸರಕಾರ ಏಳನೆ ವೇತನ ಆಯೋಗದ ವರದಿಯಂತೆ ವೇತನ ನೀಡುತ್ತಿದೆ. ಆರೋಗ್ಯ ಕಾರ್ಯಕರ್ತರು ತಮ್ಮ ಕೆಲಸವನ್ನು ಮಹತ್ವ ಕೊಟ್ಟು ಮುಗಿಸಬೇಕು. ಬಡ ಜನರ ಸೇವೆ ಮಾಡಬೇಕು. ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಹೆಚ್ಚು-ಹೆಚ್ಚು ಸೇವೆಗಳನ್ನು ನೀಡಲಾಗುತ್ತಿದೆ. ವೈದ್ಯರ ನೇಮಕವಾಗಿದೆ. ರಾಜ್ಯದ ಕಟ್ಟಕಡೆಯ ವ್ಯಕ್ತಿ ವಿಶ್ವಾಸ ಮತ್ತು ನಂಬಿಕೆಯಿಂದ ಸರಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆಯಬೇಕು'
-ಡಾ.ಕೆ.ಸುಧಾಕರ್ ಆರೋಗ್ಯ ಸಚಿವ







