ಪ್ರಾಕೃತಿಕ ವಿಕೋಪಗಳ ಮುನ್ಸೂಚನೆ ನೀಡಿ ಹೆಚ್ಚಿನ ಹಾನಿ ತಪ್ಪಿಸಿ: ಉಡುಪಿ ಡಿಸಿ

ಉಡುಪಿ, ಎ.25: ಮಳೆಯಿಂದಾಗುವ ಅತಿವೃಷ್ಠಿ ಸೇರಿದಂತೆ ನೈಸರ್ಗಿಕ, ಪ್ರಾಕೃತಿಕ ವಿಕೋಪಗಳ ಬಗ್ಗೆ ಮುನ್ಸೂಚನೆಗಳನ್ನು ಜನರಿಗೆ ಮುಂಚಿತವಾಗಿಯೇ ತಿಳಿಸಿ ಅವುಗಳನ್ನು ಎದುರಿಸುವ ಬಗ್ಗೆ ಅರಿವು ಮೂಡಿಸಿ, ಹಾನಿ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದ್ದಾರೆ.
ಸೋಮವಾರ ಮಣಿಪಾಲದ ಜಿಲ್ಲಾಧಿಕಾರಿ ಸಂಕೀರ್ಣದ ವೀಡಿಯೋ ಕಾನ್ಫರೆನ್ಸ್ ಹಾಲ್ನಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಾಗುವ ಯಾವುದೇ ರೀತಿಯ ನೈಸರ್ಗಿಕ ಅವಘಡಗಳ ಪರಿಣಾಮಕ್ಕೆ ಸ್ಥಳೀಯ ಸಾರ್ವಜನಿಕರು ಒಳಗಾಗುತ್ತಾರೆ. ಇವರುಗಳಿಗೆ ಸರಕಾರದ ವಿವಿಧ ಇಲಾಖೆಗಳು ವಿಕೋಪಗಳ ಬಗ್ಗೆ ನೀಡುವ ಮುನ್ಸೂಚನೆ, ಮಾಹಿತಿಗಳನ್ನು ಸಕಾಲಕ್ಕೆ ತಪ್ಪದೇ ತಲುಪಿಸುವುದರ ಜೊತೆಗೆ ಅವರುಗಳು ಅವುಗಳನ್ನು ಎದುರಿಸುವ ಹಾಗೂ ಸುರಕ್ಷಿತವಾಗಿರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸಿ, ಜೀವಹಾನಿ, ಆಸ್ತಿ ಹಾಗೂ ಮಾನವ ಸಂಕಷ್ಟದ ನಷ್ಟವನ್ನು ಕಡಿಮೆಗೊಳಿಸಬೇಕು ಎಂದರು.
ಪ್ರತಿಯೊಬ್ಬರ ಪ್ರಾಣವೂ ಅಮೂಲ್ಯವಾದುದು. ಹೀಗಾಗಿ ಪ್ರಾಣ ಹಾನಿಗಳು ನೈಸರ್ಗಿಕ ವಿಕೋಪಗಳಲ್ಲಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಹಾಗೂ ನೈಸರ್ಗಿಕ ವಿಕೋಪಕ್ಕೆ ತ್ವರಿತವಾಗಿ ಸ್ಪಂದಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಆಗಿದೆ ಎಂದರು.
ಸಿಡಿಲ ಮಾಹಿತಿಗೆ ಆ್ಯಪ್: ಸರಕಾರ ಗುಡುಗು ಸಿಡಿಲಿನ ಬಗ್ಗೆ ಸಾರ್ವಜನಿಕ ರಿಗೆ ಮಾಹಿತಿ ಒದಗಿಸಲು ಸಿಡಿಲು ಆಪ್ ಅನ್ನು ಅಭಿವೃದ್ಧಿ ಪಡಿಸುವು ದರೊಂದಿಗೆ ಸ್ಥಳೀಯ ವ್ಯಾಪ್ತಿಯಲ್ಲಿ ಗುಡುಗು ಸಿಡಿಲು ಆಗುವ ಬಗ್ಗೆ ನಿಖರ ಮಾಹಿತಿಯನ್ನು ಒದಗಿಸುತ್ತಿದೆ. ಇದರ ಸದುಪಯೋಗ ಪಡಿಸಿಕೊಳ್ಳುವುದ ರೊಂದಿಗೆ ಸೂಕ್ತ ರಕ್ಷಣೆ ಪಡೆಯಬೇಕು ಎಂದರು.
ಶಾಲೆಯ ಪ್ರಾರಂಭದ ದಿನಗಳಲ್ಲಿಯೇ ಪ್ರಕೃತಿ ವಿಕೋಪ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಎಲ್ಲಾ ರೀತಿಯ ಮುನ್ನೆಚ್ಚರಿಕ ಕ್ರಮಗಳ ಬಗ್ಗೆ ವಿದ್ಯಾರ್ಥಿ ಗಳಿಗೆ ಅರಿವು ಮೂಡಿಸಿ. ಅವುಗಳನ್ನು ತಮ್ಮ ನೆರೆಹೊರೆ ಹಾಗೂ ಕುಟುಂಬದವರೊಂದಿಗೆ ಹಂಚಿಕೊಳ್ಳುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಆರೋಗ್ಯ ಇಲಾಖೆಯವರು ಪ್ರಾಕೃತಿಕ ವಿಕೋಪದಿಂದ ತೊಂದರೆಗೆ ಒಳಗಾದವರಿಗೆ ಪ್ರಥಮ ಚಿಕಿತ್ಸೆ ನೀಡುವ ಕುರಿತು ಪ್ರಾಯೋಗಿಕ ತರಬೇತಿಗಳನ್ನು ಸಂಘ ಸಂಸ್ಥೆಯವರಿಗೆ, ಆಶಾ ಕಾರ್ಯಕರ್ತೆಯರಿಗೆ ನೀಡಿ, ಅವರುಗಳ ಮೂಲಕ ಇತರೆ ಸಾರ್ವಜನಿಕರಿಗೆ ತಲುಪಿಸುವ ಕಾರ್ಯಗಳು ಆಗಬೇಕು ಎಂದ ಅವರು, ಇವುಗಳಿಂದ ತೊಂದರೆ ಉಂಟಾದವರಿಗೆ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಔಷಧಗಳನ್ನು ದಾಸ್ತಾನು ಇಟ್ಟುಕೊಳ್ಳಬೇಕು. ಘಟನೆ ಸಂಭಸಿದರೆ ತಕ್ಷಣ ಸಮೀಪದ 108ಕ್ಕೆ ಮಾಹಿತಿ ನೀಡುವುದು ಒಳಿತು ಎಂದರು.
ಮೆಸ್ಕಾಂ ಇಲಾಖೆ ಜೋರಾದ ಮಳೆ-ಗಾಳಿಯ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದರ ಜೊತೆಗೆ ಯಾವುದೇ ರೀತಿಯ ವಿದ್ಯುತ್ ಅವಘಡಗಳು ಆಗದಂತೆ ಎಚ್ಚರವಹಿಸಬೇಕು. ರಸ್ತೆ ಬದಿಯಲ್ಲಿ ಅಸುರಕ್ಷಿತ ಮರಗಳಿದ್ದಲ್ಲಿ ಅವುಗಳನ್ನು ತೆರವುಗೊಳಿಸುವ ಕಾರ್ಯ ಶೀಘ್ರದಲ್ಲಿ ಕೈಗೊಳ್ಳ ಬೇಕು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಿರ್ಜಲೀಕರಣದ ಎಚ್ಚರಿಕೆ: ಜಿಲ್ಲೆಯಲ್ಲಿ ಸಾಮಾನ್ಯ ಉಷ್ಣಾಂಶಕ್ಕಿಂತ 6 ಡಿಗ್ರಿ ಉಷ್ಣಾಂಶ ಹೆಚ್ಚಾದಲ್ಲಿ, ಬಿಸಿಗಾಳಿಯು ವಾತಾವರಣದಲ್ಲಿ ಉಂಟಾಗಿ, ಮನುಷ್ಯನ ದೇಹದಲ್ಲಿ ನಿರ್ಜಲೀಕರಣವಾಗಿ ಸಾವು ಸಂಭವಿಸುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಉಷ್ಣಾಂಶ ಈ ಪ್ರಮಾಣದಲ್ಲಿ ಹೆಚ್ಚಾದಾಗ ಈ ಬಗೆಯೂ ಸಹ ಕೈಗೊಳ್ಳಬೇಕಾದ ಎಲ್ಲಾ ರೀತಿಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದರು.
ಸಭೆಯಲ್ಲಿ ಕುಂದಾಪುರ ಡಿಎಫ್ಓ ಆಶೀಶ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ವೀಣಾ, ಕುಂದಾಪುರ ಉಪವಿಭಾಗಾಧಿಕಾರಿ ರಾಜು, ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಸಿಡಿಲಿನಿಂದ ಪಾರಾಗಲು ಕೆಲವು ಸೂಚನೆ
ಮುಂಗಾರು ಪೂರ್ವದಲ್ಲಿ ಕಾರ್ಮೋಡ ಕವಿದು ಗಾಳಿ ಬೀಸುವುದು ಹೆಚ್ಚಾದಾಗ ಸಾಮಾನ್ಯವಾಗಿ ಸಿಡಿಲುಗಳು ಹೊಡೆಯುತ್ತವೆ. ಇಂತಹ ಸಮಯ ದಲ್ಲಿ ಜನಸಮಾನ್ಯರು ಮನೆ ಬಾಗಿಲು ಕಿಟಕಿಗಳನ್ನು ಮುಚ್ಚುವುದರೊಂದಿಗೆ ಮನೆಯ ಒಳಗೆ ಇರಬೇಕು. ಎಲೆಕ್ಟ್ರಾನಿಕ್ ಪೀಠೋಪಕರಣಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು.
ಬಯಲು ಪ್ರದೇಶಗಳಿದ್ದರೆ ತಕ್ಷಣವೇ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತು ಕೊಳ್ಳಬೇಕು. ನಿಲ್ಲುವುದು ಬೇಡ, ತಲೆಯನ್ನು ಮೊಳಕಾಲುಗಳ ನಡುವೆ ಹುದುಗಿಸಿಕೊಳ್ಳಿ. ಇದು ಮಿಂಚಿನಿಂದ ಮೆದುಳು ಮತ್ತು ಹೃದಯಕ್ಕೆ ಆಗುವ ಹಾನಿ ತಪ್ಪಿಸುತ್ತದೆ. ಮರಗಳಿದ್ದ ಪ್ರದೇಶದಲ್ಲಿ ಇದ್ದರೆ ಅಲ್ಲಿಂದ ಬೇಗನೆ ಹೊರಬರುವುದು ಒಳ್ಳೆಯದು. ಕೆರೆಯಲ್ಲಿ ಈಜುವುದು, ಸ್ನಾನ ಮಾಡುವುದು ಬೇಡ. ನೀರಿನಲ್ಲಿದ್ದರೆ ತಕ್ಷಣ ಹೊರಬನ್ನಿ.
ವಿದ್ಯುತ್ಕಂಬ, ಎಲೆಕ್ಟ್ರಿಕಲ್ ಟವರ್, ಮೊಬೈಲ್ ಟವರ್, ಟ್ರಾನ್ಸ್ಫಾರಂ ಮುಂತಾದವುಗಳ ಹತ್ತಿರವೂ ಇರಬೇಡಿ. ಮೊಬೈಲ್, ಕಂಪ್ಯೂಟರ್ಗಳ ಬಳಕೆ ಬೇಡ. ವಾಹನಗಳಲ್ಲಿ ಪ್ರಯಾಣಿಸುತ್ತಿದಲ್ಲಿ ಕಿಟಕಿಯ ಗಾಜುಗಳನ್ನು ಮುಚ್ಚಿಕೊಳ್ಳುವುದರ ಜೊತೆಗೆ ವಾಹನದಬಾಡಿಯನ್ನು ಸಂಪರ್ಕಿಸದೇ ಇರುವುದು ಒಳಿತು ಎಂದರು.
ಎಪ್ರಿಲ್, ಮೇ, ಜೂನ್ ತಿಂಗಳಲ್ಲಿ ಜೋರಾದ ಗಾಳಿ- ಮಳೆಯಿಂದ ಸಾಮಾನ್ಯವಾಗಿ ಮಧ್ಯಾಹ್ನದ ನಂತರ ಗುಡುಗು ಸಿಡಿಲು ಹೆಚ್ಚು ಇದ್ದು, ಗ್ರಾಮಾಂತರ ಪ್ರದೇಶಗಳ ಬಯಲು ಪ್ರದೇಶಗಳಲ್ಲಿ, ಎತ್ತರದ ಮರ ಗಿಡಗಳಿಗೆ ಹೊಡೆಯುತ್ತವೆ. ಪ್ರಸ್ತುತ 2019-20ರಲ್ಲಿ ದೇಶದಲ್ಲಿ 1.38 ಕೋಟಿ ಸಿಡಿಲು ಬಡಿದ ಘಟನೆ ವರದಿಯಾಗಿದ್ದು, 2020-21ರಲ್ಲಿ 1.85 ಕೋಟಿ ಸಿಡಿಲು ಬಡಿದು ಶೇ.34ರಷ್ಠು ಹೆಚ್ಚು ಘಟನೆ ಸಂಭವಿಸಿದೆ. ಪ್ರಸ್ತುತ ಸಾಲಿನಲ್ಲಿಯೂ ಇವು ಹೆಚ್ಚುವ ಸಾಧ್ಯತೆ ಇವೆ. ಈ ಬಗ್ಗೆ ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಳ್ಳುವುದು ಒಳ್ಳೆಯದು.