ಬೆಂಗಳೂರು | ಕಿಡ್ನಿ ದಾನ ಮಾಡಿದರೆ ಹಣ ನೀಡುವುದಾಗಿ ಆಮಿಷವೊಡ್ಡಿ ವಂಚನೆ: ವಿದೇಶಿಯರು ಬಲೆಗೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.25: ಪ್ರತಿಷ್ಠಿತ ಆಸ್ಪತ್ರೆಗಳ ನಕಲಿ ವೆಬ್ಸೈಟ್ ಬಳಸಿ ಮೂತ್ರಪಿಂಡ(ಕಿಡ್ನಿ) ದಾನ ಮಾಡಿದರೆ 4 ಕೋಟಿ ನೀಡುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಗೆ ವಂಚಿಸಿದ್ದ ಆರೋಪದಡಿ ಮೂವರು ವಿದೇಶಿಯರನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಿನಿಮಿರಾಕಲ್, ಕೋವಾ ಕೋಲಿಂಚ್ ಹಾಗೂ ಮ್ಯಾಥ್ಯೂ ಇನ್ನೋಸೆಂಟ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಹ್ಮಣೇಶ್ವರರಾವ್ ತಿಳಿಸಿದರು.
ಕಿಡ್ನಿ ಸಂಬಂಧಿತ ವ್ಯವಹಾರದ ಹೆಸರಿನಲ್ಲಿ ಲಕ್ಷಾಂತರ ರೂ.ಗಳನ್ನು ಬಂಧಿತ ಮೂವರು ವಿದೇಶಿ ಪ್ರಜೆಗಳು ಪಡೆದು ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ. ಕಿಡ್ನಿ ಕೊಳ್ಳುವ ಹಾಗೂ ಮಾರುವವರನ್ನು ಗುರಿಯಾಗಿಸಿಕೊಂಡ ಮೂವರು ಇತ್ತೀಚಿಗೆ ಸಾಗರ್ ಅಪೆÇೀಲೋ ಆಸ್ಪತ್ರೆಯ ಹೆಸರಿನಲ್ಲಿ ನಕಲಿ ವೆಬ್ಸೈಟ್ ಸೃಷ್ಟಿಸಿ ಕಿಡ್ನಿ ದಾನ ಮಾಡುವವರಿಗೆ ಮೊದಲಿಗೆ 2 ಹಾಗೂ ಬಳಿಕ 2 ಕೋಟಿ ನೀಡುವುದಾಗಿ ಜಾಹೀರಾತು ಹಾಕಿದ್ದರು.
ಈ ಸಂಬಂಧ ಸಾಗರ್ ಅಪೋಲೋ ಆಸ್ಪತ್ರೆಯ ನಿರ್ದೇಶಕ ಮಹೇಂದ್ರ ಅವರು ಎಚ್ಎಸ್ಆರ್ ಲೇಔಟ್ನ ಸಿಇಎನ್ ಠಾಣೆಗೆ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ಕೈಗೊಂಡ ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ನೇತೃತ್ವದ ಎಸಿಪಿ ಸುಧೀರ ಹೆಗಡೆ ಸಿಎನ್ಎನ್ ಠಾಣೆಯ ಇನ್ಸ್ಪೆಕ್ಟರ್ ಯೋಗೇಶ್ ಮತ್ತವರ ಸಿಬ್ಬಂದಿ ಖಚಿತವಾದ ಮಾಹಿತಿಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಮೃತಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಮೂವರು ವಿದೇಶಿಗರು ಪತ್ತೆಯಾಗಿದ್ದು ತನಿಖೆ ವೇಳೆ ಬೃಹತ್ ವಂಚನೆಯ ರಾಕೆಟ್ ಪತ್ತೆಯಾಗಿದೆ. ಬ್ಯಾಪ್ಟಿಸ್ಟ್, ಕಾವೇರಿ ಆಸ್ಪತ್ರೆ ಸೇರಿದಂತೆ ಪ್ರಸಿದ್ಧ ಆಸ್ಪತ್ರೆಗಳ ನಕಲಿ ವೆಬ್ಸೈಟ್ನ್ನು ಆರೋಪಿಗಳು ಸೃಷ್ಟಿಸಿರುವುದನ್ನು ಬಾಯ್ಬಿಟ್ಟಿದ್ದಾರೆ.
ವಾಟ್ಸ್ ಆ್ಯಪ್ ಮುಖಾಂತರ ನೋಂದಣಿ ಹಾಗೂ ವಿವಿಧ ಮಾದರಿಯ ಶುಲ್ಕ ನೆಪದಲ್ಲಿ ಕಿಡ್ನಿ ಕೊಳ್ಳುವ ಹಾಗೂ ಮಾರುವವರನ್ನು ಗುರಿಯಾಗಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದರು. ಎಲ್ಲವನ್ನೂ ಮೊಬೈಲ್ ಮುಖಾಂತರವೇ ನಡೆಸುತಿದ್ದ ಆರೋಪಿಗಳು ಕೋಟಿ ಹಣದ ಆಸೆ ಹುಟ್ಟಿಸಿ ಕೊನೆಗೆ ಬ್ಯಾಂಕ್ನಲ್ಲಿ ಹಣ ಠೇವಣಿ ಆಗಿದೆ ಅದರಿಂದ ನಿಮ್ಮ ಖಾತೆಗೆ ಬರಬೇಕು ಬಂದರೆ ಬರಲಿರುವ ಹಣದ ಶೇ.30ರಷ್ಟು ಹಣ ಕೊಡಬೇಕೆಂದು ಆಮಿಷ ಒಡ್ಡುತ್ತಿದ್ದರು ಎನ್ನುವ ಮಾಹಿತಿ ಗೊತ್ತಾಗಿದೆ ಎಂದು ಅವರು ಹೇಳಿದರು.







