ಕಟೀಲು ದೇವಳದ ಮುಂದೆ ಸೀಯಾಳ ಹಾಕುವ ವಿಚಾರದಲ್ಲಿ ಹಲ್ಲೆ ಆರೋಪ: ಬಜ್ಪೆ ಪೊಲೀಸ್ ಇನ್ಸ್ಪೆಕ್ಟರ್ ಸಹಿತ ನಾಲ್ವರ ಅಮಾನತು

ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್
ಮಂಗಳೂರು, ಎ.25: ಕಟೀಲು ದೇವಳದ ಎದುರು ಸೀಯಾಳ ಹಾಕುವ ವಿಚಾರಕ್ಕೆ ಸಂಬಂಧಿಸಿ ಮೂವರು ಯುವಕರನ್ನು ಠಾಣೆಗೆ ಕರೆಯಿಸಿ ಹಲ್ಲೆ ನಡೆಸಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬಜ್ಪೆ ಇನ್ಸ್ಪೆಕ್ಟರ್ ಹಾಗೂ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಈ ಬಗ್ಗೆ ಸೋಮವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಮೂವರು ಯುವಕರ ಮೇಲೆ ಹಲ್ಲೆಗೈದ ಆರೋಪ ಎದುರಿಸುತ್ತಿರುವ ಬಜ್ಪೆ ಇನ್ಸ್ಪೆಕ್ಟರ್ ಸಂದೇಶ್, ಸಿಬ್ಬಂದಿಯಾದ ಪ್ರವೀಣ್, ಸುನೀಲ್ ಹಾಗೂ ಇಮ್ತಿಯಾಝ್ ರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಟೀಲು ಸಮೀಪದ ಮೂವರು ಯುವಕರಿಗೆ ಇನ್ಸ್ಪೆಕ್ಟರ್ ಸಹಿತ ನಾಲ್ವರು ಪೊಲೀಸರು ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಈ ಆರೋಪದ ಬಗ್ಗೆ ಎಸಿಪಿ ಮಹೇಶ್ ಕುಮಾರ್ ವಿಚಾರಣೆ ನಡೆಸಿ ನೀಡಿದ ವರದಿಯ ಆಧಾರದಲ್ಲಿ ಇಲಾಖಾ ಶಿಸ್ತಿನ ಕ್ರಮ, ವಿಚಾರಣೆ ಬಾಕಿಯಿರಿಸಿ ನಾಲ್ಕು ಮಂದಿಯನ್ನು ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥಾ ವಿಭಾಗದ ಉಪಪೊಲೀಸ್ ಆಯುಕ್ತ ಹರಿರಾಂ ಶಂಕರ್ ನೇತೃತ್ವದಲ್ಲಿ ಈ ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಲು ಸೂಚಿಸಲಾಗಿದೆ. ಗಾಯಗೊಂಡ ಮೂವರು ಯುವಕರಲ್ಲಿ ಇಬ್ಬರನ್ನು ವೆನ್ಲಾಕ್ ಗೆ, ಇನ್ನೊಬ್ಬರನ್ನು ಕಟೀಲು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.
ಪ್ರಕರಣ ವಿವರ: ಕಟೀಲು ದೇವಸ್ಥಾನದಲ್ಲಿ ಕೆಲವು ಅಂಗಡಿಗಳನ್ನು ಕೆಲ ದಿನಗಳ ಹಿಂದೆ ಮಂಗಳೂರು ಉಪವಿಭಾಗದ ಸಹಾಯಕ ದಂಡಾಧಿಕಾರಿ ತೆರವು ಮಾಡಿದ್ದರು. ಆದರೂ ಕೆಲವು ಅಂಗಡಿಗಳು ತೆರೆದಿದ್ದವು. ಈ ಅಂಗಡಿಗಳಿಗೆ ಸೀಯಾಳ ಹಾಕುವ ವ್ಯಕ್ತಿಯನ್ನು ಮೂವರು ಯುವಕರು ಎ.23ರಂದು ಪ್ರಶ್ನಿಸಿದ್ದರು ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಸೀಯಾಳ ಹಾಕುವ ವ್ಯಕ್ತಿಯು ಬಜ್ಪೆ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಎ.24ರಂದು ಮೂವರು ಯುವಕರನ್ನು ಠಾಣೆಗೆ ಕರೆಸಿ ವಿಚಾರಣೆಗೊಳಪಡಿಸಿದ್ದರು.
ಈ ನಡುವೆ ವಿಚಾರಣೆಯ ನೆಪದಲ್ಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಮೂವರು ಯುವಕರು ಆರೋಪಿಸಿದ ಕಾರಣ ಸಂಘಪರಿವಾರದ ಕಾರ್ಯಕರ್ತರು ರವಿವಾರ ಬಜ್ಪೆ ಠಾಣೆಯ ಮುಂದೆ ಮೊನ್ನೆ ಜಮಾಯಿಸಿ ಪ್ರತಿಭಟಿಸಿದ್ದರು. ಇದೀಗ ಪೊಲೀಸ್ ಆಯುಕ್ತರು ಸಂಘ ಪರಿವಾರದ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಪೊಲೀಸರನ್ನು ಅಮಾನತುಗೊಳಿಸಿ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದ್ದಾರೆ ಎಂಬ ಆರೋಪ ಸಂಘಟನೆಗಳಿಂದ ಕೇಳಿ ಬಂದಿದೆ.
ಅವರು ದನ ತಿಂತಾರೆ ಅಂತ ಮುಸ್ಲಿಂ ವ್ಯಾಪಾರಿಗಳನ್ನು ವಾಪಸ್ ಕಳಿಸಿದೆವು : ಮಹೇಶ್ ಕಟೀಲು
"ಶುಕ್ರವಾರ ರಾತ್ರಿ ದೇವಸ್ಥಾನದ ಬಳಿ ಮುಸ್ಲಿಮರಿಗೆ ಸೇರಿದ್ದ ವಾಹನವೊಂದು ದೇವಸ್ಥಾನಕ್ಕೆ ಎಳೆನೀರು ಹಾಕಲು ಬಂದಿದ್ದರು. ದನ ತಿನ್ನುವ ಕಾರಣ ನೀವು ದೇವಸ್ಥಾನದಲ್ಲಿ ಎಳನೀರು ಹಾಕುವುದು ಬೇಡ ಎಂದು ಅವರನ್ನು ನಾವು ವಾಪಸ್ ಕಳುಹಿಸಿದ್ದೆವು. ಈ ಕಾರಣಕ್ಕೆ ಎಳನೀರು ವಾಹನದವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮರುದಿನ ನನ್ನನ್ನು ಠಾಣೆಗೆ ಕರೆಸಿ ದೌರ್ಜನ್ಯ ಎಸಗಿದ್ದಾರೆ" ಎಂದು ಮಹೇಶ ಕಲ್ಲಕುಮೇರು ಕಟೀಲು ಎಂಬಾತ ‘ವಾರ್ತಾಭಾರತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕೆಯೊಂದಿಗೆ ಮಾತನಾಡಿದ ದೀಪಕ್ ಕಟೀಲು, ದನದ ಮಾಂಸ ತಿನ್ನುವ ನೀವು ದೇವಸ್ಥಾನಕ್ಕೆ ಎಳನೀರು ಹಾಕಬೇಡಿ ಮೊದಲೇ ಹೇಳಿದ್ದೆವು. ಶುಕ್ರವಾರ ರಾತ್ರಿಯೂ ಎಳನೀರಿನ ವಾಹನ ಬಂದಾಗ ಅವರನ್ನು ಮಹೇಶ, ವಿಜ್ಞೇಶ, ಯಶ್ ಎಂಬವರು ವಾಪಸ್ ಕಳುಹಿಸಿದ್ದಾರೆ. ಈ ವಿಚಾರವಾಗಿ ಎಳನೀರಿನ ವಾಹನದವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮರುದಿನ ಮಹೇಶ್ನನ್ನು ಠಾಣೆಗೆ ಕರೆಸಿ ಪೊಲೀಸರು ಹಲ್ಲೆ ನಡೆಸಿದ್ದಾರೆ. ಅವರನ್ನು ಬಿಡಿಸಲೆಂದು ಠಾಣೆಗೆ ಹೋದ ನಾನು ಹಾಗೂ ಚರಣ್ ರ ನಮ್ಮ ಬಟ್ಟೆ ಬಿಚ್ಚಿಸಿ ಹೊಡೆದರು. ನಮ್ಮ ತಾಯಿ, ಅಕ್ಕ ತಂಗಿಯ ಬಗ್ಗೆ ಅವಾಚ್ಯವಾಗಿ ಬೈಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಕ್ಕಿಂತ ದೊಡ್ಡ ದೊಡ್ಡ ಕೇಸುಗಳು ಆದಾಗೆಲ್ಲ ನಾವು ಬಜ್ಪೆ ಠಾಣೆಗೆ ಹೋಗಿದ್ದೇವೆ. ಬಿಡಿಸಿಕೊಂಡು ಬಂದಿದ್ದೇವೆ. ಅದೇರೀತಿ ಮಹೇಶ್ ನನ್ನು ಬಿಡಿಸಿಕೊಂಡು ಬರಲೆಂದು ನಾವು ಹೋದಾಗ ಪೊಲೀಸರು ಹೊಡೆದಿದ್ದಾರೆ ಎಂದು ಆರೋಪಿಸಿದರು.
ನಾನು ಸಂವಿಧಾನಕ್ಕೆ ಮೊದಲೇ ಭಗವದ್ಗೀತೆಯನ್ನು ಓದಿದ್ದೇನೆ. ನನಗೂ ಗೊತ್ತಿದೆ. ಭಗವದ್ಗೀತೆಯಲ್ಲಿ ಇರುವುದೇನು ಅಂತ ಗೊತ್ತಿದೆ. ತಪ್ಪಿರುವುದನ್ನು ಹೇಳಬೇಕು. ಅದನ್ನೇ ನಾನಿಲ್ಲಿ ಹೇಳಿದ್ದೇನೆ ಎಂದು ದೀಪಕ್ ಹೇಳಿದ್ದಾರೆ.