ಎಫ್ಐಆರ್ ರದ್ದು ಕೋರಿದ್ದ ರಾಣಾ ದಂಪತಿ ಅರ್ಜಿ ವಜಾ
![ಎಫ್ಐಆರ್ ರದ್ದು ಕೋರಿದ್ದ ರಾಣಾ ದಂಪತಿ ಅರ್ಜಿ ವಜಾ ಎಫ್ಐಆರ್ ರದ್ದು ಕೋರಿದ್ದ ರಾಣಾ ದಂಪತಿ ಅರ್ಜಿ ವಜಾ](https://www.varthabharati.in/sites/default/files/images/articles/2022/04/26/333059-1650912052.jpg)
photo:twitter/@dna
ಮುಂಬೈ,ಎ.25: ಹನುಮಾನ್ ಚಾಲೀಸಾ ವಿವಾದಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಪಕ್ಷೇತರ ಸಂಸದ ರವಿ ರಾಣಾ ಮತ್ತು ಅವರ ಶಾಸಕಿ ಪತ್ನಿ ನವನೀತ್ ರಾಣಾ ಅವರು ಬಂಧನವನ್ನು ಪ್ರತಿರೋಧಿಸಿದ್ದಕ್ಕಾಗಿ ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯವು ಸೋಮವಾರ ವಜಾಗೊಳಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸದ ಎದುರು ತಾವು ಹನುಮಾನ್ ಚಾಲೀಸಾ ಪಠಿಸುವುದಾಗಿ ಪ್ರಕಟಿಸಿದ ಬಳಿಕ ರಾಣಾ ದಂಪತಿಯನ್ನು ಶನಿವಾರ ರಾತ್ರಿ ಪೊಲೀಸರು ಬಂಧಿಸಿದ್ದರು. ರಾಣಾ ದಂಪತಿಯ ಹೇಳಿಕೆ ನಗರದಲ್ಲಿ ಮತ್ತು ದಂಪತಿಯ ನಿವಾಸದ ಎದುರು ಶಿವಸೈನಿಕರಿಂದ ಪ್ರತಿಭಟನೆಗಳಿಗೆ ಕಾರಣವಾಗಿತ್ತು.
ಹನುಮಾನ್ ಚಾಲೀಸಾ ವಿವಾದಕ್ಕೆ ಸಂಬಂಧಿಸಿದಂತೆ ಐಪಿಸಿ ಮತ್ತು ಬಾಂಬೆ ಪೊಲೀಸ್ ಕಾಯ್ದೆಯಡಿ ರಾಣಾ ದಂಪತಿ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಸರಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಇನ್ನೊಂದು ಎಫ್ಐಆರ್ ಅನ್ನೂ ದಾಖಲಿಸಿದ್ದಾರೆ.
ರವಿವಾರ ಮಹಾರಾಷ್ಟ್ರ ಸರಕಾರವು ದಂಪತಿಯ ವಿರುದ್ಧ ದೇಶದ್ರೋಹ ಕಾನೂನನ್ನು ಹೇರಿದೆ. ಬಾಂದ್ರಾ ಮಹಾನಗರ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪೊಲೀಸ್ ಕಸ್ಟಡಿ ಅರ್ಜಿಯನ್ನು ತಿರಸ್ಕರಿಸಿ ದಂಪತಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ