ಬೈಬಲ್ ಕಡ್ಡಾಯಗೊಳಿಸಿದ್ದಾರೆಂದು ಆರೋಪಿಸಿ ವಿವಾದ: ಕ್ಲಾರೆನ್ಸ್ ಶಾಲೆಗೆ ನೋಟಿಸ್ ನೀಡಲು ಸಚಿವ ಬಿ.ಸಿ ನಾಗೇಶ್ ಸೂಚನೆ

ಶಿಕ್ಷಣ ಸಚಿವ ಬಿ.ಸಿ ನಾಗೇಶ್
ಬೆಂಗಳೂರು, ಎ.25: ನಗರದ ಕ್ಲಾರೆನ್ಸ್ ಪ್ರೌಢ ಶಾಲೆಯಲ್ಲಿ ಬೈಬಲ್ ಕಡ್ಡಾಯಗೊಳಿಸಿದ್ದಾರೆಂದು ಆರೋಪಿಸಿರುವ ವಿವಾದಕ್ಕೆ ಸಂಬಧಿಸಿ 'ಶಾಲೆಯ ವಿರುದ್ಧ ನೋಟಿಸ್ ಜಾರಿ ಮಾಡಲು ಸೂಚಿಸಿದ್ದೇನೆ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಕ್ಲಾರೆನ್ಸ್ ಶಾಲೆಯ ವೆಬ್ ಸೈಟ್ ನಲ್ಲಿ ಬೈಬಲ್ ಬಗ್ಗೆ ತೆಗೆದುಕೊಂಡಿರುವ ನಿಲುವು ಕರ್ನಾಟಕ ಶಿಕ್ಷಣ ಕಾಯ್ದೆಯ ಉಲ್ಲಂಘನೆಯಾಗಿದೆ, ಯಾವುದೇ ಶಿಕ್ಷಣ ಸಂಸ್ಥೆಗಳು ಶಾಲೆಗಳಲ್ಲಿ ಧಾರ್ಮಿಕ ವಿಚಾರಗಳನ್ನು ಬೋಧನೆ ಮಾಡುವಂತಿಲ್ಲ, ಇದು ಕರ್ನಾಟಕ ಶಿಕ್ಷಣ ಕಾಯ್ದೆಗೆ ವಿರುದ್ಧವಾಗಿದೆ ಎಂದು ಹೇಳಿದರು.
ಈ ಸಂಬಂಧ ಶಿಕ್ಷಣ ಇಲಾಖೆ ಮೂಲಕ ಶಾಲೆಯಿಂದ ಪ್ರತಿಕ್ರಿಯೆ ಪಡೆಯಲು ನೋಟಿಸ್ ಜಾರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಪಠ್ಯದಲ್ಲಿ ಭಗವತ್ಗೀತೆ ಅಳವಡಿಕೆ ವಿಚಾರಲ್ಲಿ ಮಾತನಾಡಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಈ ವಿಷಯದಲ್ಲಿ ಮಾತನಾಡುತ್ತಿಲ್ಲ ಎಂದು ಶಿಕ್ಷಣ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ... ಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಡ್ಡಾಯಗೊಳಿಸಿದ್ದಾರೆಂದು ಆರೋಪಿಸಿ ವಿವಾದ: ಪೊಲೀಸ್ ಭದ್ರತೆ







