ಚುನಾವಣಾ ವೆಚ್ಚದ ವಿವರ ನೀಡದ ಪುರಸಭೆ ಸದಸ್ಯರ ಅನರ್ಹತೆ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು, ಎ.26: ಆನೇಕಲ್ ಪುರಸಭೆ ಸದಸ್ಯ ಸ್ಥಾನದಿಂದ ತಮ್ಮನ್ನು ಅನರ್ಹಗೊಳಿಸಿರುವ ಚುನಾವಣಾ ಆಯೋಗದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್, ಚುನಾವಣಾ ವೆಚ್ಚದ ಕುರಿತು ಚುನಾವಣಾಧಿಕಾರಿಗೆ ನಿಖರವಾದ ಲೆಕ್ಕ ನೀಡದಿದ್ದರೆ ಕರ್ನಾಟಕ ಮುನಿಸಿಪಾಲಿಟೀಸ್ ಕಾಯ್ದೆ-1964ರ ಪ್ರಕಾರ ಚುನಾವಣಾ ಆಯೋಗವು ಸದಸ್ಯರನ್ನು 3 ವರ್ಷಗಳ ಕಾಲ ಅನರ್ಹಗೊಳಿಸಬಹುದು ಎಂದು ತೀರ್ಪು ನೀಡಿದೆ.
ಆನೇಕಲ್ ಪುರಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವ ಆದೇಶ ರದ್ದುಪಡಿಸಬೇಕು ಎಂದು ಕೋರಿ ಕೆ. ಶ್ರೀನಿವಾಸ್, ಎಸ್. ಲಲಿತಾ ಹಾಗೂ ಸಿ.ಕೆ. ಹೇಮಲತಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ತೀರ್ಪು ಪ್ರಕಟಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಚುನಾವಣೆಯಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ತರಲು ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ನಿಖರ ಲೆಕ್ಕ ಇಡಲು ಕಾನೂನುಗಳನ್ನು ರೂಪಿಸಲಾಗಿದೆ. ಹಾಗೆಯೇ ಸಾರ್ವಜನಿಕ ನಂಬಿಕೆಯನ್ನು ಕಾಪಾಡಲು ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಲೆಕ್ಕಗಳನ್ನಿಟ್ಟು, ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ. ಇದನ್ನು ಪಾಲಿಸದೇ ಅನರ್ಹಗೊಂಡಾಗ ಕ್ಷುಲ್ಲಕ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಕರ್ನಾಟಕ ಮುನಿಸಿಪಾಲಿಟೀಸ್ ಆಕ್ಟ್-1964ರ ಸೆಕ್ಷನ್ 16ಅ ಪ್ರಕಾರ ಚುನಾಯಿತ ಸದಸ್ಯರು ಚುನಾವಣಾ ವೆಚ್ಚದ ನಿಖರ ಮಾಹಿತಿಯನ್ನು 30 ದಿನಗಳಲ್ಲಿ ಆರ್.ಒಗೆ ಸಲ್ಲಿಸದಿದ್ದರೆ ಅನರ್ಹಗೊಳಿಸಬಹುದಾಗಿದೆ. 1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 77(1), 78 ಹಾಗೂ 1961ರ ಚುನಾವಣಾ ನಡವಳಿಕೆ ನಿಯಮ 61 ಪ್ರಕಾರವೂ ವೆಚ್ಚದ ವಿವರ ಸಲ್ಲಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟು ಅರ್ಜಿದಾರರ ಮನವಿ ತಿರಸ್ಕರಿಸಿದೆ.
ಸ್ವಾತಂತ್ರ್ಯ ಹೋರಾಟಗಾರನ ಜೈಲು ಡೈರಿ ಉಲ್ಲೇಖ: ತೀರ್ಪಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಿ. ರಾಜಗೋಪಾಲಾಚಾರಿ 1922ರಲ್ಲಿ ಜೈಲಿನಲ್ಲಿದಾಗ ಡೈರಿಯಲ್ಲಿ ಬರೆದ ಸಾಲುಗಳನ್ನೂ ನ್ಯಾಯಮೂರ್ತಿ ದೀಕ್ಷಿತ್ ಉಲ್ಲೇಖಿಸಿದ್ದಾರೆ. ಚುನಾವಣೆಗಳು ಮತ್ತು ಅವರ ಭ್ರμÁ್ಟಚಾರ, ಅನ್ಯಾಯ, ಸಂಪತ್ತಿನ ದಬ್ಬಾಳಿಕೆ, ಅದಕ್ಷ ಆಡಳಿತ ನಮಗೆ ಸ್ವಾತಂತ್ರ್ಯ ಸಿಕ್ಕ ನಂತರವೂ ನಮ್ಮ ಬದುಕನ್ನು ನರಕವಾಗಿಸುತ್ತವೆ ಎಂಬ ಮಾತನ್ನು ತೀರ್ಪಿನಲ್ಲಿ ವಿಶ್ಲೇಷಿಸಿದ್ದಾರೆ.







