ಯಲಹಂಕದಲ್ಲಿ ರಾಜ್ಯದ ಪ್ರಥಮ ಕ್ರೀಡಾ ವಿಶ್ವವಿದ್ಯಾಲಯ: ಸಚಿವ ಕೆ.ಸಿ.ನಾರಾಯಣಗೌಡ

ಬೆಂಗಳೂರು, ಎ. 26: ‘ರಾಜ್ಯದ ಪ್ರಥಮ ಕ್ರೀಡಾ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಯಲಹಂಕದಲ್ಲಿ 100 ಎಕರೆ ಜಮೀನು ಗುರುತಿಸಲಾಗಿದೆ. 65 ಎಕರೆ ಈಗಾಗಲೇ ಸರಕಾರದ ವಶಕ್ಕೆ ಪಡೆಯಲಾಗಿದೆ. ಇನ್ನೂ 35 ಎಕರೆ ಪಡೆಯಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ' ಎಂದು ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಕ್ಕೂರು ಏರೋಡ್ರೋಮ್ನಲ್ಲಿ ನೂರು ಮಕ್ಕಳಿಗೆ ಪೈಲಟ್ ತರಬೇತಿ ಕೊಡಲಾಗುವುದು. ಆರು ಏರ್ಕ್ರಾಫ್ಟ್ಗಳಲ್ಲಿ 3 ಪೈಲಟ್ಗಳು ತರಬೇತಿ ಕೊಡುತ್ತಿದ್ದಾರೆ. ಹಿಂದೆ ಬಾಕಿ ಉಳಿದ 36 ಮಕ್ಕಳ ತರಬೇತಿಯನ್ನು ಈಗ ಪೂರ್ಣಗೊಳಿಸಲಾಗುತ್ತಿದೆ. ಅತಿಕಡಿಮೆ ವೆಚ್ಚದಲ್ಲಿ ಹಿಂದುಳಿದ ಸಮಾಜಗಳಿಗೆ ಆದ್ಯತೆ ಕೊಡಲಾಗುತ್ತಿದೆ. ರನ್ವೇ ರಿಪೇರಿ ಆಗಿದೆ' ಎಂದು ತಿಳಿಸಿದರು.
‘ಹಳ್ಳಿ ಹಳ್ಳಿಯಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ 504 ಕೋಟಿ ರೂ.ಅನುದಾನ ನೀಡಲಾಗಿದೆ. ಪಾಠದ ಜೊತೆ ಆಟ ಯಶಸ್ವಿಯಾಗಬೇಕು. ಪ್ರತಿ ಶಾಲೆಯಲ್ಲಿ 1ರಿಂದ ಒಂದೂವರೆ ಗಂಟೆ ಆಟ ಆಡಿಸಬೇಕು. 8 ಸಾವಿರ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದ್ದು, ಅದನ್ನು ಕೂಡಲೇ ಭರ್ತಿ ಮಾಡಲು ಚರ್ಚೆ ನಡೆದಿದೆ' ಎಂದು ನಾರಾಯಣಗೌಡ ಮಾಹಿತಿ ನೀಡಿದರು.
‘ಕ್ರೀಡೆಯಲ್ಲಿ ದೇಶವು ಗಮನಾರ್ಹ ಸಾಧನೆ ಮಾಡಬೇಕೆಂಬ ಪ್ರಧಾನಿ ಮೋದಿಯವರ ಕನಸು ಈಗ ನನಸಾಗುತ್ತಿದೆ. ಖೇಲೋ ಇಂಡಿಯಾ ಉದ್ಘಾಟನೆಯಾಗಿದ್ದು, ನಾಲ್ಕು ಕಡೆ ವಿವಿಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಕ್ರೀಡಾ ವಿಭಾಗಕ್ಕೆ ಸಿಎಂ ಶಕ್ತಿಯನ್ನು ತುಂಬುತ್ತಿದ್ದಾರೆ. ಅಮೃತ ದತ್ತು ಯೋಜನೆಯಡಿ 75 ಮಕ್ಕಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಲು ಯೋಜನೆ ಮಾಡುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದಕ್ಕೆ ನೆರವು ನೀಡುತ್ತಿವೆ. 25 ಗ್ರಾಮೀಣ ಮಕ್ಕಳಿಗೆ ಮದ್ರಾಸ್ ಮತ್ತು ಆಂಧ್ರದಲ್ಲಿ ಕೇವಲ ಒಂದು ತಿಂಗಳ ತರಬೇತಿ ನೀಡಿದ್ದರಿಂದ ಅವರು ಸ್ವರ್ಣ ಪದಕ ಪಡೆದುದನ್ನು ಗುರುತಿಸಿದ್ದೇವೆ ಎಂದು ತಿಳಿಸಿದರು.
ಹಳೆ ಕುಸ್ತಿಪಟುಗಳಿಗೆ ಮಾಸಾಶನವನ್ನು 1 ಸಾವಿರ ರೂ.ಹೆಚ್ಚಿಸಲಾಗಿದೆ. ಗ್ರಾಮೀಣ ಗರಡಿ ಮನೆಗಳ ಪುನರ್ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಕಂಠೀರವ ಸ್ಟುಡಿಯೋದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಹಾಳಾಗಿತ್ತು. ಅದನ್ನು ಮರುನಿರ್ಮಿಸಲು 5 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ತುಮಕೂರಿನಲ್ಲಿ 4.5 ಕೋಟಿ ರೂ.ವೆಚ್ಚದಲ್ಲಿ ದೊಡ್ಡ ಕ್ರೀಡಾ ಕಾಂಪ್ಲೆಕ್ಸ್ ನಿರ್ಮಿಸಲಾಗುತ್ತಿದೆ. ಕೇಂದ್ರ ಸರಕಾರವೂ ಇದಕ್ಕೆ ಅನುದಾನ ನೀಡಿದೆ. ಬೆಂಗಳೂರು ಹಾಗೂ ಮಂಡ್ಯದಲ್ಲಿ ಮಕ್ಕಳ ಕ್ರೀಡಾ ಸಾಮರ್ಥ್ಯ ಪರೀಕ್ಷಾ ಕೇಂದ್ರ ಆರಂಭಿಸಲಾಗುವುದು ಎಂದು ಅವರು ಹೇಳಿದರು.
‘ಎಲ್ಲ ಜಿಲ್ಲೆಯಲ್ಲಿ ಹೆಣ್ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್ ಸಿದ್ಧಪಡಿಸಲಾಗುವುದು. 10ರಿಂದ 15 ಹಾಸ್ಟೆಲ್ ಆರಂಭಗೊಂಡಿದೆ. ಈಜುಕೊಳ ನಿರ್ವಹಣೆ, ಕ್ರೀಡಾ ಸೌಲಭ್ಯ ನೀಡಲು ಖಾಸಗಿ-ಸಾರ್ವಜನಿಕ ಸಹಭಾಗಿತ್ವವನ್ನು (ಪಿಪಿಪಿ) ಬಳಸಿಕೊಳ್ಳಲಾಗುವುದು. ಸ್ಥಳೀಯ ಸಂಸ್ಥೆಗಳ ಸಹಕಾರದಡಿ ಇದು ನಡೆಯಲಿದೆ. ಕ್ರೀಡೆಗೆ ಹೆಚ್ಚಿನ ಶಕ್ತಿ ತುಂಬಿ ರಾಜ್ಯವನ್ನು ದೇಶದ ಮೊದಲ ಸ್ಥಾನಕ್ಕೆ ಒಯ್ಯಲಾಗುವುದು' ಎಂದು ನಾರಾಯಣಗೌಡ ನುಡಿದರು.
‘ಡಾ.ಸುಬ್ರಹ್ಮಣ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಯುವ ನೀತಿಯನ್ನು ಮೊದಲ ಬಾರಿಗೆ ಜಾರಿಗೊಳಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಯುವಜನತೆ ದಾರಿ ತಪ್ಪದಂತೆ ನೋಡಿಕೊಳ್ಳಲಾಗುವುದು. ಉದ್ಯೋಗ ಮಾರ್ಗದರ್ಶನ, ಕೃಷಿ ಸಂಬಂಧಿತ ಉತ್ಪನ್ನಗಳ ಸಂಬಂಧ ತಿಳಿವಳಿಕೆ ನೀಡಲು 2.5 ಲಕ್ಷ ಕೌನ್ಸೆಲರ್ ಗಳು ಸಿದ್ಧರಾಗಿದ್ದಾರೆ. ಶಿಕ್ಷಣ ಪಡೆದ ರೈತರ ಮಕ್ಕಳು ಮತ್ತು ಗ್ರಾಮೀಣ ವಿದ್ಯಾವಂತ ಯುವಕರಿಗೆ ತರಬೇತಿ ಮತ್ತು ಪ್ರೋತ್ಸಾಹ ನೀಡಲು ಉದ್ದೇಶಿಸಿದೆ ಎಂದು ತಿಳಿಸಿದರು. ರೈತರ ಮಕ್ಕಳು ನೇರವಾಗಿ ಸೊಸೈಟಿಗಳಿಗೆ ಉತ್ಪನ್ನ ಮಾರಾಟ ಮಾಡುವಂತಾಗಿದೆ ಎಂದರು.
ರೇಶ್ಮೆಗೂಡಿನ ದರ ಕೋವಿಡ್ ಹಾಗೂ ಲಾಕ್ಡೌನ್ ವೇಳೆ 100ರಿಂದ 150 ರೂ.ಗಳಿಗೆ ಕುಸಿದಿತ್ತು. ಸಾಮಾನ್ಯವಾಗಿ 350 ರೂ. ಇದ್ದ ಗೂಡಿನ ದರ ಈಗ 800 ರೂ.ಗೆ ಏರಿದೆ. ಇವತ್ತು ರೀಲ್ ದರ ಹೆಚ್ಚಾಗಿದ್ದು, 5ರಿಂದ 5.5 ಸಾವಿರ ರೂ.ಇದೆ ಎಂದು ತಿಳಿಸಿದರಲ್ಲದೆ, ರೀಲರ್ಗೆ ಅನ್ಯಾಯ ಆಗಲು ಬಿಡುವುದಿಲ್ಲ. ಹೈದರಾಬಾದ್, ವಾರಣಸಿ, ಚೆನ್ನೈನಲ್ಲಿ ಮಾರಾಟಕ್ಕೂ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಪಕ್ಷದ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಹಾಜರಿದ್ದರು.
ರೇಶ್ಮೆ ಅಭಿವೃದ್ಧಿಗೆ ಅನುದಾನ ಬಂದಿದೆ
ರಾಮನಗರ, ಚನ್ನಪಟ್ಟಣದಲ್ಲಿ ರೇಶ್ಮೆಗೆ ಸಂಬಂಧಿಸಿ ಹೈಟೆಕ್ ಮಾರುಕಟ್ಟೆ ನಿರ್ಮಿಸಲು 141 ಕೋಟಿ ರೂ. ವ್ಯಯಿಸಲಾಗುತ್ತಿದೆ. 75 ಕೋಟಿ ರೂ.ಅನುದಾನ ಕೇಂದ್ರ ಸರಕಾರದಿಂದ ಬಂದಿದೆ. ವಾಸ್ತವ್ಯ, ಲಾಕರ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆಯನ್ನು ಕೊಡಲು ಉದ್ದೇಶಿಸಲಾಗಿದೆ. ಶಿಡ್ಲಘಟ್ಟ, ಹರಿಹರ, ಹಾವೇರಿ, ಕಲಬುರ್ಗಿಯಲ್ಲೂ ಆಧುನಿಕ ರೇಶ್ಮೆ ಮಾರುಕಟ್ಟೆ ನಿರ್ಮಾಣ ನಡೆಯಲಿದೆ. ಕಲಬುರ್ಗಿಯಲ್ಲಿ 30 ಕೋಟಿ ರೂ.ವೆಚ್ಚದಲ್ಲಿ ಮಾರ್ಕೆಟ್ ನಿರ್ಮಿಸಲಾಗುತ್ತದೆ.
-ಕೆ.ಸಿ. ನಾರಾಯಣಗೌಡ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವ







