ಪರಿಶಿಷ್ಟ ಪಂಗಡದವರ ಮೀಸಲಾತಿ ಏರಿಕೆ ವಿಚಾರ; ನಿವೃತ್ತ ನ್ಯಾ. ನಾಗಮೋಹನದಾಸ್ ವರದಿ ಜಾರಿಗೆ ಒತ್ತಾಯ
ಮಂಗಳೂರು : ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಏರಿಕೆ ಮಾಡುವ ಕುರಿತಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ದಾಸ್ರವರ ಏಕ ಸದಸ್ಯ ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾತನಾಡಿದ ಸಮಿತಿಯ ಮುಖಂಡ ಬಿ. ಶಿವಪ್ಪ, 2022ರ ಮಾರ್ಚ್ 30ರಂದು ರಾಜ್ಯದ ವಿಧಾನಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿದೆ. ಆಡಳಿತ ಹಾಗೂ ವಿಪಕ್ಷ ನಾಯಕರೂ ಸೇರಿದಂತೆ ವರದಿ ಜಾರಿಗೆ ಒತ್ತಾಯಿಸಲಾಗಿದೆ. ಮುಖ್ಯಮಂತ್ರಿಯವರ ನಿರ್ದೇಶನದ ಮೇರೆಗೆ ರಾಜ್ಯ ಸಚಿವರ ಮತ್ತು ಶಾಸಕರ ನಿಯೋಗ ಫ್ರೀಡಂ ಪಾರ್ಕ್ನಲ್ಲಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀಗಳು ನಡೆಸುತ್ತಿದ್ದ ಆರೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ೧೫ ದಿನಗಳ ಒಳಗೆ ಬೇಡಿಕೆ ಈಡೇರಿಸುವುದಾಗಿ ಆಶ್ವಾಸನೆ ನೀಡಿ ೨೪ ದಿನಗಳು ಕಳೆದರೂ ತೀರ್ಮಾನವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
೨೦೧೧ರ ಜನಗಣತಿ ಪ್ರಕಾರ ಕರ್ನಾಟಕ ರಾಜ್ಯದ ಒಟ್ಟು ಜನಸಂಖ್ಯೆ ೬,೨೦,೯೫,೨೯೭ರಷ್ಟಿದ್ದು, ಪರಿಶಿಷ್ಟ ಜಾತಿಯ ಜನಸಂಖ್ಯೆ ೧,೦೪,೭೪,೯೯೨ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ ೪೨,೪೮,೯೮೭ ಆಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಯವರು ಶೇ. ೧೭.೧೫ ಮತ್ತು ಪರಿಶಿಷ್ಟ ಪಂಗಡದವರು ಶೇ. ೭ರಷ್ಟಿದ್ದಾರೆ. ಪ್ರಸ್ತುತ ೧೯೫೮ರಲ್ಲಿ ನಿಗದಿಯಾಗಿದ್ದ ಶೇ. ೩ರ ಮೀಸಲಾತಿ ಪ್ರಮಾಣ ಇಂದಿಗೂ ಜಾರಿಯಲ್ಲಿದೆ.
ಮುಖ್ಯವಾಗಿ ಪರಿಶಿಷ್ಟ ಪಂಗಡದವರಿಗೆ ಶೈಕ್ಷಣಿಕ ಸಂಸ್ಥೆಗಳ ಪ್ರವೇಶ ಮತ್ತು ರಾಜ್ಯ ಸರಕಾರದ ಸೇವೆಯಲ್ಲಿ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಶೇ. ೭.೫ಕ್ಕೆ ಏರಿಕೆ ಮಾಡಬೇಕೆಂದು ಕಳೆದ ಹಲವಾರು ದಶಕಗಳಿಂದ ರಾಜ್ಯ ಸರಕಾರವನ್ನು ಒತ್ತಾಯಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ೨೦೨೧ರ ಫೆಬ್ರವರಿ 9ರಂದು ನಡೆದ ಜಾತ್ರಾ ಮಹೋತ್ಸವದಲ್ಲಿ ಸಮುದಾಯದ ಬೇಡಿಕೆಯ ಬಗ್ಗೆ ಅಂದಿನ ಮುಖ್ಯಮಂತ್ರಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ರವರ ಆಯೋಗದ ವರದಿ ಬಂದ ಕೂಡಲೇ ಮೀಸಲಾತಿ ಹೆಚ್ಚಿಸುವ ಆಶ್ವಾಸನೆ ನೀಡಿದ್ದರು. ಬಳಿಕ ಇದೀಗ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆದ ಬಳಿಕವು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರು ಭೇಟಿ ಮಾಡಿ ಮೀಲಾತಿ ಹೆಚ್ಚಿಸುವ ಬಗ್ಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಅವರು ಹೇಳಿದರು.
ಇದೀಗ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಬೇಡಿಕೆ ನ್ಯಾಯಸಮ್ಮತವಾಗಿರುವುದರಿಂದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗ ಮೋಹನದಾಸ್ ಆಯೋಗದ ವರದಿ ಜಾರಿಗೊಳಿಸಲು ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದವರು ಹೇಳಿದರು.
ಗೋಷ್ಠಿಯಲ್ಲಿ ಕೆ.ಎಸ್. ಮೃತ್ಯುಂಜಯ, ಕೆ.ಎಚ್. ಮಲ್ಲೇಶಪ್ಪ, ಯೋಗೀಶ್, ಸಿದ್ದೇಶ್ ಉಪಸ್ಥಿತರಿದ್ದರು.