ದುರಂತ ಮರುಕಳಿಸಿದರೆ ಮಲ್ಪೆ ಸೈಂಟ್ ಮೇರಿಸ್ ಪ್ರವೇಶ ನಿಷೇಧಿಸುವ ಎಚ್ಚರಿಕೆ
ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಪೌರಾಯುಕ್ತರಿಂದ ಹೇಳಿಕೆ

ಉಡುಪಿ : ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಐವರು ಪ್ರವಾಸಿಗರು ಮೃತಪಟ್ಟ ಬಳಿಕ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಲ್ಪೆ ಅಭಿವೃದ್ಧಿ ಸಮಿತಿಯ ಸಭೆ ಕರೆದು ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.
ಮುಂದೆ ಇಂತಹ ಅನಾಹುತ ಸಂಭವಿಸಿದರೆ ದ್ವೀಪಕ್ಕೆ ಪ್ರವಾಸಿಗರ ಪ್ರವೇಶವನ್ನೇ ನಿಷೇಧಿಸುವುದಾಗಿ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಉಡುಪಿ ನಗರಸಭೆ ಪೌರಾಯುಕ್ತ ಡಾ. ಉದಯ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ರಮೇಶ್ ಕಾಂಚನ್ ಪ್ರಶ್ನೆಗೆ ಪೌರಾಯುಕ್ತರು ಉತ್ತರಿಸಿದರು.
ಅಪಾಯಕಾರಿ ಸ್ಥಳದಲ್ಲಿ ತಡೆಬೇಲಿ ಹಾಕಲಾಗಿದೆ. ಇದನ್ನು ಭೇದಿಸಿ ಸಮುದ್ರಕ್ಕೆ ಇಳಿದವರಿಗೆ ದಂಡ ವಿಧಿಸಲಾಗುತ್ತಿದೆ. ದ್ವೀಪದ ನಾಲ್ಕು ಕಡೆ ಸುರಕ್ಷಿತ ಸ್ಥಳದಲ್ಲಿ ಸೆಲ್ಫಿ ಪಾಯಿಂಟ್ ಗುರುತಿಸಲಾಗಿದೆ. ಪ್ರವೇಶ ದ್ವಾರದಲ್ಲಿಯೇ ಪ್ರವಾಸಿಗರಿಗೆ ಸಮುದ್ರದ ಅಪಾಯದ ಅರಿವು ಮೂಡಿಸಲಾಗುತ್ತದೆ. ದ್ವೀಪದಲ್ಲಿ ಒಮ್ಮೇಗೆ 500ಕ್ಕಿಂತ ಹೆಚ್ಚು ಪ್ರವಾಸಿಗರು ಇರಬಾರದೆಂಬ ಷರತ್ತು ಗುತ್ತಿಗೆದಾರರಿಗೆ ವಿಧಿಸ ಲಾಗಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.
ರಸ್ತೆ ವಿಚಾರದಲ್ಲಿ ವಾಗ್ವಾದ
ಕಿನ್ನಿಮುಲ್ಕಿ ವಾರ್ಡಿನ ಮಿಷನ್ ಕಂಪೌಂಡ್ನಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ 15 ಲಕ್ಷ ರೂ. ನೀಡಲಾಗಿದೆ. ಈ ಕಾಮಗಾರಿ ಅಗತ್ಯ ಇದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಬಿಜೆಪಿ ಸದಸ್ಯ ಕೃಷ್ಣರಾವ್ ಕೊಡಂಚ ಒತ್ತಾಯಿಸಿದರು. ಈ ವಿಚಾರವು ಸಭೆಯಲ್ಲಿ ಸಾಕಷ್ಟು ಗದ್ದಲಕ್ಕೆ ಕಾರಣ ವಾಯಿತು.
ಓಟು ಬ್ಯಾಂಕ್ ರಾಜಕೀಯಕ್ಕಾಗಿ ಅಗತ್ಯ ಇಲ್ಲದ ಈ ರಸ್ತೆಗೆ ಕಾಂಕ್ರೀಟ್ ಮಾಡಲಾಗುತ್ತಿದೆ ಎಂದು ಕೊಡಂಚ ಆರೋಪಿಸಿದರು. ಕೊಡಂಚರ ಹೇಳಿಕೆಗೆ ಆ ವಾರ್ಡಿನ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಆಕ್ಷೇಪ ವ್ಯಕ್ತಪಡಿಸಿ, ನಿಮ್ಮ ವಾರ್ಡಿ ನಲ್ಲಿ ಸಾಕಷ್ಟು ಸಮಸ್ಯೆ ತುಂಬಿರುವಾಗ ಇನ್ನೊಬ್ಬರ ವಾರ್ಡಿನ ಬಗ್ಗೆ ಚಿಂತೆ ಮಾಡು ವುದು ಬೇಡ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಇದರಿಂದ ಸದಸ್ಯರುಗಳ ಮಧ್ಯೆ ವಾಗ್ವಾದ ನಡೆದು ಗದ್ದಲದ ವಾತಾವರಣ ಉಂಟಾಯಿತು.
ಮಠದಬೆಟ್ಟು ಸಮಸ್ಯೆ ಪರಿಹಾರ
ಮಠದಬೆಟ್ಟುವಿನಲ್ಲಿ ಸೇತುವೆ ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ತ್ಯಾಜ್ಯ ನೀರಿನ ಸಮಸ್ಯೆ ಎದುರಾಗಿದ್ದು, ಇದೀಗ ಇಂದ್ರಾಣಿ ಹೊಳೆಯನ್ನು ಹಾಕಿರುವ ತಡೆ ಯನ್ನು ತೆರವುಗೊಳಿಸಿ ಡ್ರೈನೇಜ್ ನೀರು ಹರಿಯುವಂತೆ ಮಾಡಲಾಗಿದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.
ಕಿನ್ನಿಮುಲ್ಕಿ ವಾರ್ಡಿನ ಕೆಲವು ಎತ್ತರ ಪ್ರದೇಶಗಳಿಗೆ ನೀರು ಬರುತ್ತಿಲ್ಲ. ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ ಎಂದು ಅಮೃತಾ ಕೃಷ್ಣಮೂರ್ತಿ ತಿಳಿಸಿದರು. ಮಳೆಗಾಲ ಹತ್ತಿರ ಬರುತ್ತಿರುವುದರಿಂದ ಅಪಾಯಕಾರಿ ಸ್ಥಿತಿಯಲ್ಲಿ ರುವ ಮರದ ಕೊಂಬೆಗಳನ್ನು ಕಡಿಯುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಗೋಪಾಲಪುರ ವಾರ್ಡಿನ ಮನೆಯೊಂದರಲ್ಲಿ ಸ್ಥಳೀಯರಿಗೆ ತೊಂದರೆ ಉಂಟು ಮಾಡಿ ಕುರಿ ಸಾಕುತ್ತಿದ್ದು, ಇದರ ವಿರುದ್ಧ ಕ್ರಮ ಜರಗಿಸು ವಂತೆ ಮಂಜುಳಾ ನಾಯಕ್ ಒತ್ತಾಯಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಹಾಜರಿದ್ದರು.
ವಾರಾಹಿ ಪೈಪ್ಲೈನ್: ಅಧಿಕಾರಿಗೆ ತೀವ್ರ ತರಾಟೆ
ವಾರಾಹಿಯಿಂದ ಉಡುಪಿ ನಗರಕ್ಕೆ ನೀರು ಪೂರೈಸುವ ಯೋಜನೆಗಾಗಿ ನಡೆಸ ಲಾಗುತ್ತಿರುವ ಪೈಪ್ಲೈನ್ ಕಾಮಗಾರಿಯಲ್ಲಿನ ಅವ್ಯವಸ್ಥೆ ಬಗ್ಗೆ ಸರ್ವ ಸದಸ್ಯರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆ ತೆಗೆದುಕೊಂಡರು.
300ಕೋಟಿ ರೂ. ವೆಚ್ಚದ ಈ ಯೋಜನೆಯ ಪೈಪ್ಲೈನ್ ಕಾಮಗಾರಿಯನ್ನು ಸಂಬಂಧಪಟ್ಟವರು ಸರಿಯಾಗಿ ನಿರ್ವಹಿಸುತ್ತಿಲ್ಲ. ಈ ಬಗ್ಗೆ ದೂರು ನೀಡಿದರೂ ಸ್ಪಂದಿಸುವವರಿಲ್ಲ ಎಂದು ಪ್ರಭಾಕರ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಹಲವು ಕಡೆ ರಸ್ತೆಯನ್ನು ಅಗೆದು ಬಿಡಲಾಗಿದೆ. ಮುಂದೆ ಮಳೆ ಬಂದರೆ ಇಡೀ ರಸ್ತೆ ಕುಸಿಯುವ ಸಾಧ್ಯತೆ ಇದೆ ಎಂದು ರಮೇಶ್ ಕಾಂಚನ್ ದೂರಿದರು. ಹೀಗೆ ಸೆಲಿನಾ ಕರ್ಕಡ, ಕೃಷ್ಣರಾವ್ ಕೊಡಂಚ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
‘ಈ ಯೋಜನೆಯನ್ನು ನಗರಸಭೆ ನೋಡಿಕೊಳ್ಳುತ್ತಿದೆ. ಈ ಸಂಬಂಧ ಯಾವುದೇ ದೂರು ಇದ್ದರೂ ಲಿಖಿತವಾಗಿ ನೀಡಿ. ನಾನು ಕೂಡ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡುತ್ತೇನೆ. ಮುಂದಿನ ಸಭೆಗೆ ಪೈಪ್ಲೈನ್ ಕಾಮಗಾರಿ ನಡೆಸು ತ್ತಿರುವ ಕಾರ್ಯನಿರ್ವಹಕ ಇಂಜಿನಿಯರ್ರನ್ನು ಸಭೆಗೆ ಕರೆಸಿಕೊಳ್ಳಲಾಗುವುದು’ ಎಂದು ಪೌರಾಯುಕ್ತರು ತಿಳಿಸಿದರು.