ಮಂಗಳೂರು: ಆಲದ ಮರದಡಿ 'ಇಫ್ತಾರ್ ಮುಸ್ಸಂಜೆ'
ಶಾಂತಿ ಸಮಾನತೆಗಾಗಿ ವಿಶಿಷ್ಟ ಕಾರ್ಯಕ್ರಮ

ಮಂಗಳೂರು : ನ್ಯಾಯವಾದಿ, ಸಾಮಾಜಿಕ ಹೋರಾಟಗಾರ ದಿನೇಶ್ ಹೆಗ್ಡೆ ಉಳೆಪಾಡಿ ನೇತೃತ್ವದ ಸಹಕಾರ ನ್ಯಾಯ ಕೂಟ ಮಂಗಳೂರು ಇದರ ವತಿಯಿಂದ ಶಾಂತಿ ಸಮಾನತೆಗಾಗಿ 'ಇಫ್ತಾರ್ ಮುಸ್ಸಂಜೆ' ಕಾರ್ಯಕ್ರಮವು ಶುಕ್ರವಾರ ನಗರದ ಬಲ್ಮಠ ಸಹೋದಯ ಸಭಾಂಗಣದ ಹತ್ತಿರದ ಹೆಬಿಕ್ ತಾಂತ್ರಿಕ ತರಬೇತಿ ಸಂಸ್ಥೆಯ ಆವರಣದ ಆಲದ ಮರದಡಿಯಲ್ಲಿ ವಿಶಿಷ್ಟವಾಗಿ ನಡೆಯಿತು.
ಹಿಂದೂ, ಮುಸ್ಲಿಂ, ಕ್ರೈಸ್ತರು, ಜೈನರು ಜೊತೆಗೂಡಿ ಇಫ್ತಾರ್ ಮುಸ್ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧರ್ಮ ಸಮನ್ವಯಕ್ಕೆ ಸಾಕ್ಷಿಯಾದರು. ಗೋಪಾಡ್ಕರ್ ಕಲ್ಪನೆಯ ವೇದಿಕೆಯಲ್ಲೇ ಮಗ್ರಿಬ್ ಬಾಂಗ್ ಕರೆ ಕೊಡಲಾಯಿತು. ಅದರೊಂದಿಗೆ ಉಪವಾಸಿಗರು ವೃತ ತೊರೆದರೆ, ಇತರರು ಸಹಭಾಗಿಗಳಾದರು. ಈ ಸಂದರ್ಭ ನಾದ ಮಣಿನಾಲ್ಕೂರು ಭಾವೈಕ್ಯ ಸಾರುವ ಕತ್ತಲ ಹಾಡುಗಳನ್ನು ಹಾಡಿದರು.
ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪ್ಪಾಡಿ ಸ್ವಾಗತಿಸಿದರು. ಚಿಂತಕ ಅರವಿಂದ ಚೊಕ್ಕಾಡಿ ಕಾರ್ಯಕ್ರಮದ ಸಮನ್ವಯಕಾರರಾಗಿ ಸಹಕರಿಸಿದ್ದರು. ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ವಂದಿಸಿದರು.
ಇಸ್ಲಾಂ ಧರ್ಮದ ಬಗ್ಗೆ ಕೆಲವರಿಗೆ ಅಪನಂಬಿಕೆ ಇದೆ. ಮುಸ್ಲಿಮರ ಬಗ್ಗೆಯೂ ಅಸಹಿಷ್ಣುತೆ ಇದೆ. ಪರಸ್ಪರ ಅರ್ಥ ಮಾಡಿಕೊಂಡರೆ ಇಂತಹ ಅಪನಂಬಿಕೆ ದೂರವಾಗಬಹುದು. ಅಸಹಿಷ್ಣುತೆ ಕಡಿಮೆಯಾಗಬಹುದು. ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪ್ಪಾಡಿ ಇಂತಹ ವೇದಿಕೆಯ ಮೂಲಕ ಧರ್ಮಗಳ ಸಮನ್ವಯತೆಗೆ ನಾಂದಿ ಹಾಡಿರುವುದು ಅಭಿನಂದನೀಯ. ಇಸ್ಲಾಂ ಯಾವತ್ತೂ ಮತಾಂತರಕ್ಕೆ ಆಸ್ಪದ ನೀಡುವುದಿಲ್ಲ. ಜಿಹಾದ್ಗೂ ಕರೆ ನೀಡುವುದಿಲ್ಲ. ಇಸ್ಲಾಮನ್ನು ಅರ್ಥ ಮಾಡದವರು ಮಾತ್ರ ಇಂತಹ ವಿಷಯಗಳಿಗೆ ಸಂಕುಚಿತ ಅರ್ಥ ಕಲ್ಪಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಾರೆ. ಯುವ ತಲೆಮಾರುಗಳನ್ನು ದಾರಿ ತಪ್ಪಿಸುವ ವರ್ಗವೇ ಇದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಮುಸ್ಲಿಮರನ್ನು ಕಂಡರೆ ಸಂಶಯಿಸುವ ಗುಂಪುಗಳಿಗೆ ಈ ವೇದಿಕೆಯೇ ಸೌಹಾರ್ದದ ಮುನ್ನುಡಿ ಬರೆಯುವಂತಾಗಲಿ ಎಂದು ಸುನ್ನಿ ಯುವಜನ ಸಂಘದ ರಾಜ್ಯಾಧ್ಯಕ್ಷರಾದ ಡಾ.ಎಂ.ಎಸ್.ಎಂ. ಝೈನಿ ಕಾಮಿಲ್ ತಿಳಿಸಿದರು.
ನಮ್ಮಲ್ಲಿ ಮತಗಳು, ಪಥಗಳು ಹಲವು ಇರಬಹುದು. ಆದರೆ ಸಮನ್ವಯತೆಗೆ, ಭಾತೃತ್ವಕ್ಕೆ ಎಂದೂ ಧಕ್ಕೆಯಾಗಬಾರದು. ಸಮಾನತೆ, ಸರಳತೆ ದೇಶದ ಭವ್ಯ ಸಂಸ್ಕೃತಿಯಾಗಿದೆ ಎಂಬುದನ್ನು ಅರ್ಥ ಮಾಡಿಕೊಂಡು ಹಿಂದಿಗಿಂತಲೂ ಈಗ ಸಮನ್ವಯತೆಯ ಅಗತ್ಯವನ್ನು ಮನಗಂಡು ಸೌಹಾರ್ದದ ಬದುಕು ಕಟ್ಟುವ ಕೆಲಸಕ್ಕೆ ಮುಂದಾಗಬೇಕಿದೆ ಎಂದು ರಾಮಕೃಷ್ಣ ಮಿಷನ್ ಮಂಗಳೂರು ಇದರ ಸಂಯೋಜಕರಾದ ರಂಜನ್ ಬೆಳ್ಳರ್ಪಾಡಿ ತಿಳಿಸಿದರು.
ಪರಸ್ಪರ ಧರ್ಮಗಳನ್ನು ಗೌರವಿಸಿ ಸಮಾಜದಲ್ಲಿ ಭಾವೈಕ್ಯತೆ ಬೆಸೆಯುವುದು ಎಲ್ಲರ ಕರ್ತವ್ಯವಾಗಿದೆ. ನಾವು ಪರಸ್ಪರ ಕ್ಷಮಿಸೋಣ, ಪ್ರೀತಿಸೋಣ. ಸಹೋದರತೆ ಬೆಳೆಸೋಣ, ದೇಶ ಕಟ್ಟೋಣ ಎಂದು ಸಿಎಸ್ಐ ಶಾಂತಿ ಕೆಥೆಡ್ರಲ್ ಮಂಗಳೂರು ಇದರ ಸಭಾಪಾಲಕರಾದ ರೆ. ಎಂ. ಪ್ರಭುರಾಜ್ ಹೇಳಿದರು.
ಧರ್ಮ ಯಾವುದೇ ಇರಲಿ, ಅವುಗಳ ಗುರಿ ಒಂದೇ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಾನು ಶ್ರೇಷ್ಠ ಎನ್ನುವುದು ತಪ್ಪಲ್ಲ. ಆದರೆ ನಾನೇ ಶ್ರೇಷ್ಠ ಎನ್ನುವುದು ತಪ್ಪು. ಅದು ಸಮಸ್ಯೆಗೆ ನಾಂದಿ ಹಾಡುತ್ತದೆ. ದೇಶದ 121 ಕೋಟಿ ಜನಸಂಖ್ಯೆಯಲ್ಲಿ ಗರಿಷ್ಠ 1 ಕೋಟಿಯಷ್ಟು ಜನರು ಸೌಹಾರ್ದ ಕದಡಬಹುದು, ಅಶಾಂತಿ ಸೃಷ್ಟಿಸಬಹುದು. ಆದರೆ ದೇಶದ 120 ಕೋಟಿ ಜನರು ಸೌಹಾರ್ದ ಬಯಸುತ್ತಾರೆ ಎಂಬುದನ್ನು ನಾವು ಮರೆಯಬಾದರು. ಈ ವೇದಿಕೆಯೇ ಆ ಸೌಹಾರ್ದತೆಗೆ ಸಾಕ್ಷಿಯಾಗಲಿ ಎಂದು ನಿವೃತ್ತ ಮುಖ್ಯ ಶಿಕ್ಷಕರಾದ ಮುನಿರಾಜ ರೆಂಜಾಳ ಹೇಳಿದರು.