ಬಿ.ಸಿ.ರೋಡ್ 'ಕರಾವಳಿ ಕಲೋತ್ಸವ - 2022'ಕ್ಕೆ ಚಾಲನೆ

ಬಂಟ್ವಾಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು “ಚಿಣ್ಣರಲೋಕ ಲೋಕದ ಕಲಾವಿದರ ಸೇವಾ ಟ್ರಸ್ಟ್ ಬಂಟ್ವಾಳ ಇದರ ಆಶ್ರಯದಲ್ಲಿ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ 'ಕರಾವಳಿ ಕಲೋತ್ಸವ - 2022'ಕ್ಕೆ ಶುಕ್ರವಾರ ಸಂಜೆ ಸಂಭ್ರಮದ ಚಾಲನೆ ನೀಡಲಾಯಿತು.
ಕೀರ್ತಿ ಶೇಷ ಡಾ. ಲಕ್ಷ್ಮೀನಾರಾಯಣ ಆಳ್ವ ವೇದಿಕೆ, ಚಿಣ್ಣರ ಚಿತ್ರಕಲೆ ಪ್ರದರ್ಶನ, ಅಮ್ಯೂಸ್ ಮೆಂಟ್ ಪಾರ್ಕ್, ವಿವಿಧ ಮಳಿಗೆಗಳು ಹಾಗೂ ಕರಾವಳಿ ಕಲೋತ್ಸವ - 2022 ನ್ನು ಉದ್ಘಾಟನೆಗೈದು ಚಿಣ್ಣರಲೋಕ ನಿರಾಶ್ರಿತರ ಸೇವಾಶ್ರಮದ ನೀಲಿ ನಕ್ಷೆ ಅನಾವರಣಗೊಳಿಸಿದ ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಕಲೆಗೆ ಜಾತಿ, ಧರ್ಮದ ಪರೆದೆ ಇಲ್ಲ, ದ.ಕ. ಜಿಲ್ಲೆಯ ಕಲಾವಿದರು ಕಲೆ, ಕ್ರೀಡೆ, ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾದ ಛಾಪು ಮೂಡಿಸಿದ್ದಾರೆ, ಭೂತರಾಧನೆ, ನಾಗಮಂಡಲ, ಯಕ್ಷಗಾನ ಹೀಗೆ ಪ್ರತಿಯೊಂದು ಕಾರ್ಯಕ್ರಮ ರಾತ್ರಿಪೂರ್ತಿ ನೋಡಲು ಸಾಧ್ಯವಾಗುವುದಿದ್ದರೆ ಅದು ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮಾತ್ರ ಎಂದರು.
ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಸಭಾಧ್ಯಕ್ಷತೆ ವಹಿಸಿದ್ದರು. ಚಿಣ್ಣರ ಅಧ್ಯಕ್ಷೆ ಕು. ಜನ್ಯ ಪ್ರಸಾದ್, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲಸಾರ್, ಸಂಸ್ಕಾರ ಭಾರತೀಯ ಜಿಲ್ಲಾಧ್ಯಕ್ಷ ತಾರನಾಥ ಕೊಟ್ಟಾರಿ ತೇವು, ಉದ್ಯಮಿ ದೇವಿಚರಣ್, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಸದಸ್ಯ,ಕಲಾವಿದ ಚೇತಕ್ ಪೂಜಾರಿ, ನಿವೃತ್ತ ಬಾಂಕ್ ಉದ್ಯೋಗಿ ಬೇಬಿಕುಂದರ್, ಚಿಣ್ಣರಲೋಕ ಲೋಕದ ಕಲಾವಿದರ ಸೇವಾ ಟ್ರಸ್ಟ್ ನ ಮಂಗಳೂರು ಸಂಚಾಲಕಿ ವಿಶಾಲಾಕ್ಷಿ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ 'ಕರಾವಳಿ ಸೌರಭ' ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಾಲ ಪ್ರತಿಭೆಗಳಾದ ಕು.ಕ್ಷಿತಿ ಕೆ.ರೈ ಧರ್ಮಸ್ಥಳ , ಕು.ಶೃತಿ ದೇವಾಡಿಗ ಬಿ.ಸಿ.ರೋಡು ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ಪ್ರಧಾನಗೈದು ಅಭಿನಂದಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗುರುಕಿರಣ್, ಸಂಗೀತ ಎಂಬುದು ಕರಾವಳಿಯಲ್ಲಿ ಜನ್ಮಜಾತವಾಗಿದೆ. ಎಲ್ಲರ ರಕ್ತದಲ್ಲೇ ಸಂಗೀತವಿದೆ. ಕಾಲೇಜು ಜೀವನದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತದೆ. ಊರಿನವರು ಕೊಡುವ ಪ್ರಶಸ್ತಿ ಅತ್ಯಂತ ಹತ್ತಿರವಾಗುತ್ತದೆ. ಜನರನ್ನು ಸೇರಿಸುವ ಈ ಕಲೋತ್ಸವ ಜನರ ಸೇವೆ ಮಾಡಿದಂತಾ ಗುತ್ತದೆ ಎಂದು ಹೇಳಿದರು.
ಸ್ವಾಗತ ಸಮಿತಿ ಅಧ್ಯಕ್ಷ ಸರಪಾಡಿ ಆಶೋಕ ಶೆಟ್ಟಿ ಸ್ವಾಗತಿಸಿದರು. ಟ್ರಸ್ಟ್ ನ ಪ್ರಧಾನ ಸಂಚಾಲಕ ಮೋಹನದಾಸ್ ಕೊಟ್ಟಾರಿ ಪ್ರಸ್ತಾವಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಜಾನಪದ ದಿಬ್ಬಣ: ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಒಂದು ತಿಂಗಳ ಕಾಲ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆಯಲಿ ರುವ ಕರಾವಳಿ ಕಲೋತ್ಸವದ ಜಾನಪದ ದಿಬ್ಬಣಕ್ಕೆ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಚೆಂಡೆ ನುಡಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ ಜೈನ್, ಸ್ಥಾಪಕ, ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ, ಚಿಣ್ಣರ ಅಧ್ಯಕ್ಷೆ ಜನ್ಯಪ್ರಸಾದ್, ಸ್ವಾಗತ ಸಮಿತಿ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ, ಉಪಾಧ್ಯಕ್ಷ ಪ್ರಕಾಶ್ ಬಿ.ಶೆಟ್ಟಿ ಶ್ರೀಶೈಲ, ಪದಾಧಿಕಾರಿಗಳಾದ ತೀರ್ಥಪ್ರಸಾದ್ ಅನಂತಾಡಿ, ಮುಹಮ್ಮದ್ ನಂದಾವರ, ಶೈಲಜಾ ರಾಜೇಶ್, ದೇವಪ್ಪ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
ಗೊಂಬೆ ಕುಣಿತ, ಚೆಂಡೆ ವಾದನ, ನೃತ್ಯ ಪ್ರಾಕಾರಗಳು, ಡೊಳ್ಳು ಕುಣಿತ, ಮೊದಲಾದ ಆಕರ್ಷಣೆಗಳು ಮೆರವಣಿ ಗೆಯಲ್ಲಿ ಕಂಡುಬಂದವು.







