ಆಂಧ್ರಪ್ರದೇಶ: ವಿದ್ಯಾರ್ಥಿನಿಯ ಹತ್ಯೆ ಪ್ರಕರಣ; ಆರೋಪಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ
ಹೈದರಾಬಾದ್, ಎ. 29: ಆಂಧ್ರಪ್ರದೇಶದಲ್ಲಿ ಕಳೆದ ವರ್ಷ ಆಗಸ್ಟ್ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ ಹಾಗೂ ಇರಿದು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಗುಂಟೂರ್ನ ಫಾಸ್ಟ್ ಟ್ರಾಕ್ ಸೆಷನ್ಸ್ ನ್ಯಾಯಾಲಯ ದೋಷಿಗೆ ಮರಣದಂಡನೆ ವಿಧಿಸಿದೆ. ಇದು ನ್ಯಾಯಾಲಯ ಅತಿ ತ್ವರಿತವಾಗಿ ದೋಷಿ ಎಂದು ಪರಿಗಣಿಸಿದ ಹಾಗೂ ಶಿಕ್ಷೆ ನೀಡಿದ ಪ್ರಕರಣಗಳಲ್ಲಿ ಒಂದು. ಆಂಧ್ರಪ್ರದೇಶದ ಗುಂಟೂರಿನಲ್ಲಿ ಸಾರ್ವಜನಿಕರು ನೋಡುತ್ತಿರುವಂತೆ ಬ್ಯುಸಿ ರಸ್ತೆಯಲ್ಲಿ ಕುಂಚಾಲಾ ಶಶಿಕೃಷ್ಣ ತೃತೀಯ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಇರಿದು ಹತ್ಯೆಗೈದಿದ್ದ.
ಗುಂಟೂರಿನ ತ್ವರಿತ ಫಾಸ್ಟ್ ಟ್ರಾಕ್ ಸೆಷನ್ಸ್ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದ್ದು, ಶಶಿಕೃಷ್ಣ ದೋಷಿ ಎಂದು ಘೋಷಿಸಿದೆ ಹಾಗೂ ಆತನಿಗೆ ಮರಣದಂಡನೆ ವಿಧಿಸಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ತೀರ್ಪನ್ನು ಪ್ರಶಂಸಿಸಿದ್ದಾರೆ. ಅಲ್ಲದೆ, ಮಹಿಳೆಯರ ವಿರುದ್ಧದ ಅಪರಾಧವನ್ನು ಅಂತ್ಯಗೊಳಿಸುವ ನಿಟ್ಟಿನ ಹೋರಾಟದಲ್ಲಿ ಇದು ಚಾರಿತ್ರಿಕ ಹೆಜ್ಜೆ ಎಂದು ಹೇಳಿದ್ದಾರೆ.