ನನ್ನ ವಿರುದ್ಧ ಪ್ರಕರಣ ದಾಖಲಿಸಲು ಬಿಜೆಪಿ ಹೇಡಿತನದ ಕೆಲಸ ಮಾಡಿದೆ: ಜಿಗ್ನೇಶ್ ಮೆವಾನಿ
"ನಾನು ತಲೆಬಾಗುವುದಿಲ್ಲ, ನನ್ನ ಟ್ವೀಟ್ ಬಗ್ಗೆ ಹೆಮ್ಮೆ ಇದೆ’’ ಎಂದ ಗುಜರಾತ್ ಶಾಸಕ
![ನನ್ನ ವಿರುದ್ಧ ಪ್ರಕರಣ ದಾಖಲಿಸಲು ಬಿಜೆಪಿ ಹೇಡಿತನದ ಕೆಲಸ ಮಾಡಿದೆ: ಜಿಗ್ನೇಶ್ ಮೆವಾನಿ ನನ್ನ ವಿರುದ್ಧ ಪ್ರಕರಣ ದಾಖಲಿಸಲು ಬಿಜೆಪಿ ಹೇಡಿತನದ ಕೆಲಸ ಮಾಡಿದೆ: ಜಿಗ್ನೇಶ್ ಮೆವಾನಿ](https://www.varthabharati.in/sites/default/files/images/articles/2022/04/30/333536-1651295130.jpg)
ಜಿಗ್ನೇಶ್ ಮೇವಾನಿ (Photo: Twitter/@kanhaiyakumar)
ಗುವಾಹಟಿ: ನನ್ನ ವಿರುದ್ಧ ಪ್ರಕರಣ ದಾಖಲಿಸಲು ಮಹಿಳೆಯೊಬ್ಬರನ್ನು ಬಳಸಿಕೊಳ್ಳುವ ಮೂಲಕ ಆಡಳಿತಾರೂಢ ಬಿಜೆಪಿ ಹೇಡಿತನದ ಕೆಲಸ ಮಾಡಿದೆ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರು ಆರೋಪಿಸಿದ್ದಾರೆ.
ಅಸ್ಸಾಂ ಪೊಲೀಸ್ನ ಮಹಿಳಾ ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮೇವಾನಿ ಅವರಿಗೆ ಅಸ್ಸಾಂನ ನ್ಯಾಯಾಲಯವು ಶುಕ್ರವಾರ ಜಾಮೀನು ನೀಡಿದ ಕೆಲವೇ ಗಂಟೆಗಳ ನಂತರ ಮೆವಾನಿ ಈ ಹೇಳಿಕೆ ನೀಡಿದರು.
"ನಾನು ತಲೆಬಾಗುವುದಿಲ್ಲ'' ಎಂದು ಪುಷ್ಪಾ ಚಲನಚಿತ್ರವನ್ನು ಉಲ್ಲೇಖಿಸಿ ಮೆವಾನಿ NDTV ಗೆ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಟ್ವೀಟ್ಗಳ ಪ್ರಕರಣದಲ್ಲಿ ಅಸ್ಸಾಂನ ಮತ್ತೊಂದು ನ್ಯಾಯಾಲಯದಿಂದ ಜಾಮೀನು ಪಡೆದ ನಂತರ ಮೇವಾನಿ ಅವರನ್ನು ಎಪ್ರಿಲ್ 25 ರಂದು ಹಲ್ಲೆ ಪ್ರಕರಣದಲ್ಲಿ ಬಂಧಿಸಲಾಯಿತು.
"ನನ್ನ ಬಂಧನವು ಸರಳವಾದ ವಿಷಯವಲ್ಲ. ಇದು ಪಿಎಂಒ (ಪ್ರಧಾನ ಮಂತ್ರಿ ಕಚೇರಿ) ಯಲ್ಲಿನ ರಾಜಕೀಯ ಮೇಲಧಿಕಾರಿಗಳ ಸೂಚನೆಯ ಮೇರೆಗೆ ನಡೆದಿರಬೇಕು" ಎಂದು ಮೇವಾನಿ ಇಂದು NDTV ಗೆ ತಿಳಿಸಿದರು.
"ನಾನು ಮಾಡಿದ ಟ್ವೀಟ್ನ ಬಗ್ಗೆ ನನಗೆ ಈಗಲೂ ಹೆಮ್ಮೆ ಇದೆ. ಟ್ವೀಟ್ನಲ್ಲಿ, ಕೋಮು ಸಂಘರ್ಷಗಳು ಸಂಭವಿಸದಂತೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ನಾನು ಪ್ರಧಾನ ಮಂತ್ರಿಯವರನ್ನು ಕೇಳಿದೆ ... ಭಾರತದ ಪ್ರಜೆಯಾಗಿ, ಇದನ್ನು ಕೇಳುವ ಹಕ್ಕು ನನಗೆ ಇದೆ. ಒಬ್ಬ ಶಾಸಕನಾಗಿ. ನಮ್ಮ ಕರ್ತವ್ಯ ಏನು? ಶಾಂತಿ ಕಾಪಾಡಲು ಜನರನ್ನು ಒತ್ತಾಯಿಸುವುದು, ಹಾಗಾಗಿ ನಾನು ಅದನ್ನು ಮಾಡಿದ್ದೇನೆ’’ ಎಂದು ಮೇವಾನಿ ಹೇಳಿದರು.