ನಮ್ಮ ವಿರುದ್ಧ ಹೋರಾಡುವವರ ವಿರುದ್ಧ ನಾವು ಹೋರಾಡೋಣ: ವಿನ್ಸೆಂಟ್ ಡಿಸೋಜ

ಮಂಗಳೂರು : ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ನಿಯಂತ್ರಿಸದೆ ಏರಿಸಿದವರ, ನಿರುದ್ಯೋಗಿಗಳಿಗೆ ಉದ್ಯೋಗ ನೀಡದವರ, ಶಿಕ್ಷಣ ನೀಡದೆ ವಂಚಿಸಿದವರ, ಕಾರ್ಮಿಕ ಕಾಯ್ದೆಗಳನ್ನು ತಂದು ಕಾರ್ಮಿಕರ ವಿರುದ್ಧ ಹೋರಾಡುವವರ ವಿರುದ್ಧ ನಾವೂ ಹೋರಾಡೋಣ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ (ಎಐಬಿಇಎ) ರಾಷ್ಟ್ರೀಯ ಸಮಿತಿಯ ಸದಸ್ಯ ಹಾಗೂ ದ.ಕ. ಜಿಲ್ಲಾ ಬ್ಯಾಂಕ್ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ವಿನ್ಸೆಂಟ್ ಡಿಸೋಜ ಹೇಳಿದರು.
ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ)ನ ಮಂಗಳೂರು ಘಟಕದ ವತಿಯಿಂದ ನಗರದ ಕಾಮ್ರೇಡ್ ಸಿಂಪ್ಸನ್ ಸೋನ್ಸ್ ಸಭಾಂಗಣದಲ್ಲಿ ರವಿವಾರ ನಡೆದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಇವತ್ತು ಧಾರ್ಮಿಕ ಮತ್ತು ಕೋಮು ವಿಚಾರಗಳನ್ನು ಮುಂದಿಟ್ಟುಕೊಂಡು ಕಾರ್ಮಿಕರ ಒಗ್ಗಟ್ಟನ್ನು ಮುರಿಯಲಾಗು ತ್ತಿದೆ. ಕಾರ್ಮಿಕರ ಒಗ್ಗಟ್ಟಿನ ಹೋರಾಟ ಕ್ಷೀಣಿಸುತ್ತಿದೆ. ಇದನ್ನರಿತ ಸರಕಾರಗಳು ಮಾಲಕ ವರ್ಗದ ನಿರ್ದೆಶನ ದಂತೆ ಕಾರ್ಮಿಕ ಕಾಯ್ದೆಗಳನ್ನು ಮಾಲಕರ ಪರ ಬದಲಾಯಿಸುತ್ತಿದೆ. ಶಿಕ್ಷಣಕ್ಕೆ ಪೂರಕವಾದ ಉದ್ಯೋಗವಿಲ್ಲದೆ, ಸರಕಾರದ ತಪ್ಪು, ಅಪ್ರಬುದ್ದ ನೀತಿಗಳಿಂದಾಗಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ರಾಜಕೀಯ ಪ್ರಜ್ಞಾವಂತಿಕೆಯನ್ನು ಬೆಳೆಸಿಕೊಂಡು ವೈಜ್ಞಾನಿಕ ದೃಷ್ಟಿಕೋನದಿಂದ ಬದುಕಿಗಾಗಿ ಹೋರಾಡಬೇಕು ಎಂದು ಕಾಮ್ರೇಡ್ ವಿನ್ಸೆಂಟ್ ಡಿಸೋಜ ಕರೆ ನೀಡಿದರು.
ಮೇ ದಿನಾಚರಣೆಯ ಅಧ್ಯಕ್ಷತೆಯನ್ನು ಎಐಟಿಯುಸಿ ಜಿಲ್ಲಾಧ್ಯಕ್ಷ ಕಾಮ್ರೇಡ್ ಎಚ್. ವಿ.ರಾವ್ ವಹಿಸಿದ್ದರು. ಸಿಪಿಐ ದ.ಕ, ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ವಿ.ಎಸ್. ಬೇರಿಂಜ, ಬೀಡಿ ಆ್ಯಂಡ್ ಟೊಬೆಕ್ಕೊ ಲೇಬರ್ ಯೂನಿಯನ್ನ (ಎಐಟಿಯುಸಿ) ಅಧ್ಯಕ್ಷ ಸುಲೋಚನಾ ಹರೀಶ್ ಮಾತನಾಡಿದರು.
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ (ಎಐಟಿಯುಸಿ)ದ ಜಿಲ್ಲಾ ಕಾರ್ಯದರ್ಶಿ ಎಂ. ಕರುಣಾಕರ್ ಸ್ವಾಗತಿಸಿದರು. ಸಿಪಿಐ ಮಂಗಳೂರು ತಾಲೂಕು ಜೊತೆ ಕಾರ್ಯದರ್ಶಿ ತಿಮ್ಮಪ್ಪಕಾವೂರು ವಂದಿಸಿದರು.