ಕಾರ್ಮಿಕರ ಸವಾಲುಗಳನ್ನು ಐಕ್ಯತೆಯಿಂದ ಎದುರಿಸುವುದು ಅಗತ್ಯ: ಬಾಲಕೃಷ್ಣ ಶೆಟ್ಟಿ
ಉಡುಪಿಯ ಸೌಹಾರ್ದತೆಯ ಮೇ ದಿನಾಚರಣೆ
![ಕಾರ್ಮಿಕರ ಸವಾಲುಗಳನ್ನು ಐಕ್ಯತೆಯಿಂದ ಎದುರಿಸುವುದು ಅಗತ್ಯ: ಬಾಲಕೃಷ್ಣ ಶೆಟ್ಟಿ ಕಾರ್ಮಿಕರ ಸವಾಲುಗಳನ್ನು ಐಕ್ಯತೆಯಿಂದ ಎದುರಿಸುವುದು ಅಗತ್ಯ: ಬಾಲಕೃಷ್ಣ ಶೆಟ್ಟಿ](https://www.varthabharati.in/sites/default/files/images/articles/2022/05/1/333684-1651409518.jpg)
ಉಡುಪಿ : ಕಾರ್ಮಿಕರು ವಿವಿಧ ಕ್ಷೇತ್ರಗಳಲ್ಲಿ ಯಾವುದೇ ಜಾತಿ ಧರ್ಮ ಬೇಧ ಇಲ್ಲದೆ ದುಡಿಯುತ್ತಿದ್ದಾರೆ. ಆದರೆ ಇಂದು ಧರ್ಮ ಜಾತಿಯ ಹೆಸರಿನಲ್ಲಿ ಕಾರ್ಮಿಕರ ಐಕ್ಯತೆಯನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ. ಆದುದರಿಂದ ಕಾರ್ಮಿಕರು ತಮ್ಮ ಮುಂದಿನ ಸವಾಲುಗಳನ್ನು ಐಕ್ಯತೆಯಿಂದ ಎದುರಿಸಬೇಕಾಗಿದೆ ಎಂದು ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ಸೌಹಾರ್ದತೆಯ ಮೇ ದಿನಾಚರಣೆಯ ಪ್ರಯುಕ್ತ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕ ಕೆ.ಶಂಕರ್, ಸಿಐಟಿಯು ಮುಖಂಡರಾದ ಶಶಿಧರ್ ಗೊಲ್ಲ, ಕವಿರಾಜ್, ಉಮೇಶ್, ಸರೋಜ, ಭಾರತಿ, ಶೇಖರ್ ಬಂಗೇರ, ಮೋಹನ್, ವಿಮಾ ನೌಕರರ ಸಂಘದ ಪ್ರಭಾಕರ್ ಕುಂದರ್, ಡೆರಿಕ್ ರೆಬೆಲ್ಲೊ, ಉಮೇಶ್, ಎಐಟಿಯುಸಿಯ ಶಶಿಕಲಾ, ಸಂಜೀವ, ಎಐಬಿಇಎಯ ರಮೇಶ್, ವಿದ್ಯಾ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನಾ ಉಡುಪಿ ಸಿಂಡಿಕೇಟ್ ಸರ್ಕಲ್ನಿಂದ ಹುತಾತ್ಮರ ಸ್ಮಾರಕದವರೆಗೆ ಮೆರವಣಿಗೆ ನಡೆಯಿತು.
ಕುಂದಾಪುರದಲ್ಲೂ ಸಭೆ: ಸಿಐಟಿಯು ಕುಂದಾಪುರ ವತಿಯಿಂದ ರವಿವಾರ ಶಾಸ್ತ್ರೀ ವೃತ್ತದಲ್ಲಿ ನಡೆದ ಕಾರ್ಮಿಕರ ದಿನಾಚರಣೆ ಬಹಿರಂಗ ಸಭೆಯನ್ನುದ್ದೇಶಿಸಿ ಸಿಐಟಿಯು ರಾಜ್ಯ ಸಮಿತಿ ಸದಸ್ಯ ಎಚ್.ನರಸಿಂಹ ಮಾತನಾಡಿ, ಕೇಂದ್ರ ಬಿಜೆಪಿ ಸರಕಾರದ ಕಾರ್ಮಿಕ ವಿರೋಧಿ ನೀತಿಗಳಿಂದ ಕಾರ್ಮಿಕ ಕುಟುಂಬಗಳು ಇಂದು ಬೀದಿಗೆ ಬಿದ್ದಿವೆ. ಕರಾವಳಿ ಭಾಗದಲ್ಲಿ ಸಹಸ್ರಾರು ಕುಟುಂಬಗಳಿಗೆ ಆಸರೆ ಯಾಗಿದ್ದ ಹೆಂಚು ಉದ್ಯಮಗಳಿಂದು ಅಳಿವಿನ ಅಂಚಿನಲ್ಲಿದೆ. ಶೇ.೧೨ರಷ್ಟು ಜಿಎಸ್ಟಿಯನ್ನು ಅಳಿವಿನ ಅಂಚಿನಲ್ಲಿರುವ ಹೆಂಚು ಉದ್ಯಮಕ್ಕೆ ಹಾಗೂ ಬಟ್ಟೆ ವ್ಯಾಪಾರಸ್ಥರ ಮೇಲೆ ವಿಧಿಸಿ ನಾಶ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಬೀಡಿ ಸಂಘಟನೆಯ ಮುಖಂಡ ಮಹಾಬಲ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ರಾಜ್ಯ ಸಮಿತಿ ಸದಸ್ಯ ಸುರೇಶ ಕಲ್ಲಾಗರ ಮಾತನಾಡಿದರು. ಸಿಡಬ್ಲ್ಯೂಎಫ್ಐ ಸಂಘಟನೆಯ ದಾಸ ಭಂಡಾರಿ, ಪುರಸಭೆ ಮಾಜಿ ಆಧ್ಯಕ್ಷ ವಿ.ನರಸಿಂಹ, ಬೀಡಿ ಯೂನಿಯನ್ನ ಮುಖಂಡರಾದ ಬಲ್ಕೀಸ್, ಅಂಗನವಾಡಿ ಸಂಘಟನೆಯ ಭಾಗ್ಯ ಎಸ್., ಲಕ್ಷ್ಮಣ ಬರೆಕಟ್ಟು, ಚಂದ್ರಶೇಖರ್, ಸಂತೋಷ ಹೆಮ್ಮಾಡಿ, ರಾಜು ದೇವಾಡಿಗ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಕುಂದಾಪುರ ನಗರದ ಪ್ರಮುಖ ರಸ್ತೆಯಲ್ಲಿ ವಿವಿಧ ವರ್ಗಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಕಾಲ್ನಡಿಗೆ ಜಾಥ ನಡೆಸಿದರು. ಸಿಐಟಿಯು ಸಂಘಟನೆಯ ಆಟೋ ಚಾಲಕರು ರ್ಯಾಲಿ ನಡೆಸಿದರು.
ಅದೇ ರೀತಿ ಕಾರ್ಕಳದ ಬಸ್ ನಿಲ್ದಾಣದ ಬಳಿ ಮತ್ತು ಬ್ರಹ್ಮಾವರದಲ್ಲಿ ಮೇ ದಿನಾಚರಣೆ ಯನ್ನು ಹಾಗೂ ಬೈಂದೂರು ಸಿಐಟಿಯು ಕಚೇರಿಯಿಂದ ಮೆರವಣಿಗೆ ಹೊರಟು ಪೇಟೆಯಲ್ಲಿ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
![](https://www.varthabharati.in/sites/default/files/images/galllery/2022/05/1/UD-M1 KUNDAPURA.jpg)