ಕನ್ನಡಿಗರ ಬಗ್ಗೆ ಅಜಿತ್ ಪವಾರ್ ಹೇಳಿಕೆಗೆ ಕುಮಾರಸ್ವಾಮಿ ಖಂಡನೆ

ಬೆಂಗಳೂರು, ಮೇ 1: ‘ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತೊಮ್ಮೆ ಉದ್ಧಟತನ ಮೆರೆದಿದ್ದಾರೆ. ಹಿಂದೆ, ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆಗಳನ್ನು ನೀಡಿದ್ದ ಅವರು, ಪುನಃ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಇದು ಖಂಡನೀಯ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಕರ್ನಾಟಕದ ಗಡಿಭಾಗದಲ್ಲಿ ಮರಾಠಿ ಭಾಷಿಗರು ಇರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ನಮ್ಮ ಸರಕಾರದ ಬೆಂಬಲವಿದೆ ಎಂದು ಪುಣೆಯಲ್ಲಿ ಅವರಿಂದು ‘ಅಪರಿಪಕ್ವ' ಹೇಳಿಕೆ ನೀಡಿದ್ದಾರೆ. ಹಾಗೆ ನೋಡಿದರೆ, ಕನ್ನಡಿಗರೇ ಹೆಚ್ಚಿರುವ ಅನೇಕ ಪ್ರದೇಶಗಳು ಮಹಾರಾಷ್ಟ್ರಕ್ಕೂ ಸೇರ್ಪಡೆಯಾಗಿವೆ ಎಂಬುದನ್ನು ಪವಾರ್ ಮರೆಯಬಾರದು' ಎಂದು ತಿರುಗೇಟು ನೀಡಿದ್ದಾರೆ.
‘1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. 1950ರಲ್ಲಿ ಭಾರತ ಗಣರಾಜ್ಯವಾಗಿ ಅವತರಿಸಿತು. ಅದಾದ ಮೇಲೆ ಭಾಷಾವಾರು ಪ್ರಾಂತ್ಯಗಳು ರಾಜ್ಯಗಳಾದವು. ಸ್ವಾತಂತ್ರ್ಯದ ‘ಅಮೃತ ಮಹೋತ್ಸವ' ಈ ಕಾಲದಲ್ಲೂ ಅಜಿತ್ ಪವಾರ್ ಇನ್ನೂ ಗಡಿ ಬಗ್ಗೆಯೇ ಮಾತನಾಡುತ್ತಿದ್ದಾರೆ ಎಂದರೆ, ಅವರ ಮಿದುಳು ಹಿಮ್ಮುಖವಾಗಿ ಚಲಿಸುತ್ತಿರಬೇಕಷ್ಟೇ' ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ತಮ್ಮ ರಾಜ್ಯದ ಅಭಿವೃದ್ಧಿ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಗಡಿ ಜನರ ಬಗ್ಗೆ ಕಳಕಳಿಯೂ ಇಲ್ಲ. ಎಂದೋ ಮುಗಿದ ವಿಷಯ ಇಟ್ಟುಕೊಂಡು ‘ರಾಜಕೀಯ ಪ್ರಹಸನ' ನಡೆಸುತ್ತಿದ್ದಾರಷ್ಟೇ. ‘ಚೀನಾ ಮನಃಸ್ಥಿತಿಯ ಆಕ್ರಮಣಶೀಲ' ಮನೋಭಾವದಿಂದ ಅಜಿತ್ ಪವಾರ್ ಹೊರಬರುವುದು ಒಳ್ಳೆಯದು. ಸಹೋದರತ್ವ ಭಾವದಿಂದ ಬದುಕಬೇಕಾದ ಎರಡೂ ಭಾಷೆಗಳ ಜನರನ್ನು ದಿಕ್ಕು ತಪ್ಪಿಸಲು ಮತ್ತೆಮತ್ತೆ ಗಡಿ ವಿಷಯ ಕೆದಕುತ್ತಾ, ಆ ಗಡಿ ಪ್ರದೇಶಗಳು ಅಭಿವೃದ್ಧಿಯನ್ನೇ ಕಾಣದಂತೆ ನೋಡಿಕೊಳ್ಳುವ ರಾಜಕೀಯ ಹುನ್ನಾರವಷ್ಟೇ ಇದು. ಇಂಥ ಪ್ರವೃತ್ತಿ ಭಾರತದ ಐಕ್ಯತೆ ಮತ್ತು ಒಕ್ಕೂಟ ವ್ಯವಸ್ಥೆಗೇ ಗಂಡಾಂತರಕಾರಿ' ಎಂದು ಅವರು ಎಚ್ಚರಿಸಿದ್ದಾರೆ.
‘2006ರಲ್ಲಿ ಕೇಂದ್ರದ ಯುಪಿಎ ಸರಕಾರದಲ್ಲಿ ಗೃಹ ಸಚಿವರಾಗಿದ್ದ ತಮ್ಮದೇ ರಾಜ್ಯದ ನಾಯಕರನ್ನು ‘ಕೀಲಿಕೈ' ಮಾಡಿಕೊಂಡು ಇದೇ ಅಜಿತ್ ಪವಾರ್ರಂಥ ನಾಯಕರು ನಡೆಸಿದ ಕಿತಾಪತಿ ಕಾರಣಕ್ಕೆ, ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ನಾನು, ಅವರೆಲ್ಲರಿಗೂ ಸಡ್ಡು ಹೊಡೆದು ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸುವ ಐತಿಹಾಸಿಕ ನಿರ್ಧಾರ ಕೈಗೊಂಡೆ' ಎಂದು ಅವರು ತಿಳಿಸಿದ್ದಾರೆ.
‘ಬೆಳಗಾವಿ ಬಗ್ಗೆ ಬೇಳೆ ಬೇಯಿಸಿಕೊಳ್ಳುವ ‘ಒಡಕು ಪ್ರವೃತ್ತಿ'ಯನ್ನು ಮರಾಠಿ ನಾಯಕರು ಬಿಡಬೇಕು. ಇಲ್ಲವಾದರೆ, ದೇಶದ ಉದ್ದಗಲಕ್ಕೂ ಈಗಲೂ ಬೂದಿಮುಚ್ಚಿದ ಕೆಂಡದಂತಿರುವ ಇಂತಹ ಸೂಕ್ಷ್ಮ ವಿಷಯಗಳು ಮುಂಚೂಣಿಗೆ ಬಂದು ದೇಶವೇ ಛಿದ್ರವಾಗುವ ಅಪಾಯವಿದೆ. ಇದನ್ನು ಅರ್ಥ ಮಾಡಿಕೊಂಡು, ಕೇಂದ್ರವು ಇಂತಹ ‘ಆಕ್ರಮಣಶೀಲ' ಮನಃಸ್ಥಿತಿಯುಳ್ಳವರ ಕಿವಿ ಹಿಂಡಬೇಕು' ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
‘ಎಲ್ಲ ಭಾಷಿಕರು ಎಲ್ಲ ರಾಜ್ಯಗಳಲ್ಲೂ ಇದ್ದಾರೆ. ಕರ್ನಾಟಕದಲ್ಲಿ ಮರಾಠಿ ಭಾಷಿಕರಿದ್ದಾರೆ. ಅವರ ಒಳಿತಿನ ಬಗ್ಗೆ ಅಜಿತ್ ಪವಾರ್ ಮಾತನಾಡಲಿ. ನಮ್ಮ ರಾಜ್ಯ ಸರಕಾರದ ಜತೆಯೂ ಚರ್ಚಿಸಲಿ. ಈ ನೆಲದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡಿಗರೇ ಎನ್ನುವ ವಿಶಾಲ ಭಾವ ನಮ್ಮದು. ಇದನ್ನು ಪವಾರ್ ಅರ್ಥ ಮಾಡಿಕೊಳ್ಳಬೇಕು'
-ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ







