ಮುಸ್ಲಿಮರ ವಿರುದ್ಧ ತೀವ್ರ ಹಿಂಸೆಯನ್ನೊಳಗೊಂಡ ವೀಡಿಯೋಗಳನ್ನು ಹೆಚ್ಚಾಗಿ ಪ್ರಕಟಿಸುತ್ತಿರುವ ʼಜಾಮಿಯಾ ಶೂಟರ್ʼ
ಹಿಂಸಾತ್ಮಕ ಚಟುವಟಿಕೆಗಳನ್ನು ಕಡೆಗಣಿಸುತ್ತಿರುವ ಪೊಲೀಸರು

ಹೊಸದಿಲ್ಲಿ, ಮೇ 1: ಮುಸ್ಲಿಮ್ ಪುರುಷರ ಅಪಹರಣ ಮತ್ತು ಅವರ ಮೇಲೆ ಹಲ್ಲೆಯನ್ನು ತೋರಿಸುವ ‘ಸಂಗೀತ’ವೀಡಿಯೊಗಳನ್ನು ಅಪ್ಲೋಡ್ ಮಾಡುವುದು ‘ಜಾಮಿಯಾ ಶೂಟರ್’ಎಂದೇ ಕುಖ್ಯಾತನಾಗಿರುವ ಹಿಂದುತ್ವ ಉಗ್ರಗಾಮಿಯ ಕೋಮುದ್ವೇಷದ ಬದುಕಿನ ಇತ್ತೀಚಿನ ತಿರುವಾಗಿದೆ, ಆದರೂ ಪೊಲೀಸರು ಆತನ ಹಿಂಸಾತ್ಮಕ ಚಟುವಟಿಕೆಗಳನ್ನು ಕಡೆಗಣಿಸುತ್ತಲೇ ಇದ್ದಾರೆ.
ಕಾನೂನು ಕಾರಣಗಳಿಂದಾಗಿ ಈ ಯುವಕನನ್ನು ಹೆಸರಿಸಲಾಗಿಲ್ಲ. ಎರಡು ವರ್ಷಗಳ ಹಿಂದೆ ಆಗಿನ್ನೂ ಅಪ್ರಾಪ್ತ ವಯಸ್ಕನಾಗಿದ್ದ. ಈತ 2020, ಜ.30ರಂದು ಜಾಮಿಯಾದ ನಿರಾಯುಧ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವ ಮೂಲಕ ಮೊದಲ ಬಾರಿಗೆ ಸುದ್ದಿಯಾಗಿದ್ದ. ಆಗಿನಿಂದ ಹಲವಾರು ಮುಸ್ಲಿಮ್ ವಿರೋಧಿ ದ್ವೇಷಭಾಷಣಗಳನ್ನು ಮಾಡಿರುವ ಈತ ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಪರಿವರ್ತಿಸಲು ಸಾಮೂಹಿಕ ಹಿಂಸಾಚಾರವನ್ನು ಪ್ರತಿಪಾದಿಸುತ್ತ ಹಿಂದುತ್ವದ ಪೋಸ್ಟರ್ ಬಾಯ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಖ್ಯೆಯಲ್ಲಿ ಫಾಲೋವರ್ಗಳನ್ನು ಹೊಂದಿದ್ದಾನೆ. ಈತ ಉಗ್ರಗಾಮಿ ಹಿಂದುತ್ವ ನಾಯಕ ದೀಪಕ್ ತ್ಯಾಗಿ ಅಲಿಯಾಸ್ ಯತಿ ನರಸಿಂಹಾನಂದನ ಸಹವರ್ತಿಯೂ ಆಗಿದ್ದಾನೆ.
ವಿವಿಧ ಸ್ಥಳಗಳಲ್ಲಿ ಮುಸ್ಲಿಮರ ಅಪಹರಣ, ಅವರ ಮೇಲೆ ಹಲ್ಲೆ ಮತ್ತು ಸಶಸ್ತ್ರ ಬೆದರಿಕೆಗಳನ್ನು ತೋರಿಸುವ ‘ಸಂಗೀತ ವೀಡಿಯೊ’ಗಳನ್ನು ಹೆಚ್ಚಿಸುವುದು ಈತನ ಇತ್ತೀಚಿನ ಚಟುವಟಿಕೆಗಳಲ್ಲಿ ಸೇರಿದೆ. ಹರ್ಯಾಣದಲ್ಲಿ ಇತ್ತೀಚಿಗೆ ನಡೆದಿದ್ದ ಮುಸ್ಲಿಂ ವಿರೋಧಿ ಮಹಾಪಂಚಾಯತ್ ಗಳಲ್ಲಿ ಪಾಲ್ಗೊಂಡಿದ್ದ ಈತನ ಕೆಲವು ಸಹವರ್ತಿಗಳು ಈ ‘ಸಂಗೀತ ’ ವೀಡಿಯೊಗಳನ್ನು ಅಪ್ಲೋಡ್ ಮಾಡಿದ್ದು, ಇಂತಹ ಕನಿಷ್ಠ ನಾಲ್ಕು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ಗುಂಪುಗಳು ಮುಸ್ಲಿಮರ ವಿರುದ್ಧ ಹಿಂಸಾಚಾರವನ್ನು ತೋರಿಸುವ ವೀಡಿಯೋಗಳನ್ನು ನಿಯಮಿತವಾಗಿ ಅಪ್ಲೋಡ್ ಮಾಡುತ್ತಿದ್ದರೂ ಅವುಗಳನ್ನು ಮನರಂಜನೆಗಾಗಿ ಮಾಡಲಾಗಿದೆ ಎಂದು ಕಂಡುಬರುವುದು ವಿಭಿನ್ನ ಅಂಶವಾಗಿದೆ. ಜಾಮಿಯಾ ಶೂಟರ್ ತನ್ನ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಪೋಸ್ಟ್ ಮಾಡಿರುವ ‘ಸಂಗೀತ ’ ವೀಡಿಯೊಗಳಲ್ಲೊಂದು ‘ಚಮಕ್ ರಹಿ ತಲ್ವಾರ್ ಹೈ, ಚಮಕ್ ರಹಾ ತ್ರಿಶೂಲ ಹೈ. ಹಿಂದು ಕೋ ಕಮಜೋರ್ ಸಮಝನಾ ದುಶ್ಮನ್ ಕೀ ಭೂಲ್ ಹೈ (ತಲ್ವಾರ್ ಮತ್ತು ತ್ರಿಶೂಲ ಹೊಳೆಯುತ್ತಿವೆ. ಹಿಂದುಗಳನ್ನು ದುರ್ಬಲರು ಎಂದು ಭಾವಿಸುವುದು ಶತ್ರುಗಳ ತಪ್ಪು)’ ಎಂಬ ಸಾಹಿತ್ಯವನ್ನು ಹೊಂದಿದೆ.
ಜಾಮಿಯಾ ಶೂಟರ್ ತನ್ನ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಅಪ್ಲೋಡ್ ಮಾಡಿರುವ ಮುಸ್ಲಿಮರ ಮೇಲೆ ಹಲ್ಲೆ, ಹಿಂಸಾಚಾರ, ಅವರ ಅಪಹರಣ ಮತ್ತು ಪಿಸ್ತೂಲು ತೋರಿಸಿ ಮುಸ್ಲಿಮ್ ಮಹಿಳೆಯರು ಮತ್ತು ಮಕ್ಕಳನ್ನು ಬೆದರಿಸುತ್ತಿರುವ ವೀಡಿಯೊಗಳನ್ನು ಮೋನು ಮನೇಸರ್ ಎಂಬಾತನ ಖಾತೆಯಲ್ಲಿಯೂ ಶೇರ್ ಮಾಡಿಕೊಳ್ಳಲಾಗಿದೆ.
ಮನೇಸರ್ ಸ್ವಘೋಷಿತ ಗೋರಕ್ಷಕನಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಫಾಲೋವರ್ ಗಳನ್ನು ಹೊಂದಿದ್ದಾನೆ. 2021, ಜುಲೈನಲ್ಲಿ ಹರ್ಯಾಣದಲ್ಲಿ ನಡೆದಿದ್ದ ಮುಸ್ಲಿಂ ವಿರೋಧಿ ಮಹಾಪಂಚಾಯತ್ ನಲ್ಲಿ ಮನೇಸರ್ ನನ್ನು ‘ಗೋ ರಕ್ಷಣೆಗಾಗಿ ಗುಂಡುಗಳನ್ನು ಹಾರಿಸುವ ಮತ್ತು ಗುಂಡೇಟುಗಳನ್ನು ತಿನ್ನುವ ’ ವ್ಯಕ್ತಿಯನ್ನಾಗಿ ಪರಿಚಯಿಸಲಾಗಿತ್ತು.
ಮಹಾ ಪಂಚಾಯತ್ ನಲ್ಲಿ ಮನೇಸರ್ ಕೂಡ ಭಾಷಣ ಮಾಡಿದ್ದು, ಕೊಲೆಗೆ ನೇರ ಕರೆಯು ‘ಲವ್ ಜಿಹಾದ್ ’ಸಮಸ್ಯೆಗೆ ಆತನ ಪರಿಹಾರವಾಗಿದೆ. ಲವ್ ಜಿಹಾದ್ ನಡೆಸುವ ಮುಸ್ಲಿಮ್ ಪುರುಷರನ್ನು ಕೊಲ್ಲಬೇಕು ಎಂದು ಕರೆ ನೀಡಿದ್ದ, ತನ್ನ ತಂಡವು ಕೊಲ್ಲಬೇಕಿರುವ ‘ಲವ್ ಜಿಹಾದಿಗಳ’ ಪಟ್ಟಿಯನ್ನೂ ಆತ ಕೋರಿದ್ದ. ಈ ವೇಳೆ ಆತ ‘ಬಿಗ್ ಬ್ರದರ್’ನ್ನು ಪ್ರಸ್ತಾಪಿಸಿದ್ದ. ಕಾನೂನಿನಿಂದ ತನ್ನ ತಂಡವನ್ನು ರಕ್ಷಿಸುವ ಬಿಜೆಪಿಯನ್ನು ಆತ ಪ್ರಾಯಶಃ ಪ್ರಸ್ತಾಪವಿದ್ದಂತಿತ್ತು.
ಮನೇಸರ್ ಮತ್ತು ಜಾಮಿಯಾ ಶೂಟರ್ ಹಿಂಸಾಚಾರದ ಹಲವಾರು ವೀಡಿಯೊಗಳು ಮತ್ತು ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಮಲೀಲಾ ಮೈದಾನದಲ್ಲಿ ನಡೆದಿದ್ದ ಪಟೌಡಿ ಮಹಾ ಪಂಚಾಯತ್ ನಲ್ಲಿ ಜಾಮಿಯಾ ಶೂಟರ್ ನೇತೃತ್ವದ ನೂರಾರು ಜನರ ಗುಂಪು ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗುತ್ತಿತ್ತು. ಆತ ಅಲ್ಲಿ ಮಾಡಿದ್ದ ದ್ವೇಷ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಆಕ್ರೋಶವನ್ನು ಹುಟ್ಟುಹಾಕಿದ ಬಳಿಕ ಆತನನ್ನು ಬಂಧಿಸಿದ್ದ ಪೊಲೀಸರು, ಬಂಧನದ ಬೆನ್ನಲ್ಲೇ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದರು.
ಇದಕ್ಕೂ ಮುನ್ನ ಮೇ 16ರಂದು ಹರ್ಯಾಣದ ನುಹ್ ನ ಖಲಿಪುರ ಗ್ರಾಮದ ಆಸಿಫ್ ಎಂಬಾತನನ್ನು ಗುಂಪೊಂದು ಅಪಹರಿಸಿ ಕೊಂದಿತ್ತು. ನುಹ್ ಪೊಲೀಸರು ಆಸಿಫ್ ಕೊಲೆ ಪ್ರಕರಣದಲ್ಲಿ ಹಿಂದುಗಳನ್ನು ಆರೋಪಿಗಳನ್ನಾಗಿ ಹೆಸರಿಸಿದಾಗ ಮೇ 30ರಂದು ಕರ್ಣಿ ಸೇನಾ ಹರ್ಯಾಣದ ಇಂದ್ರಿ ಗ್ರಾಮದಲ್ಲಿ ಆಯೋಜಿಸಿದ್ದ ಹಿಂದು ಮಹಾಪಂಚಾಯತ್ ಆಸಿಫ್ ಕೊಲೆಯನ್ನು ಸಮರ್ಥಿಸಿತ್ತು. ಪಂಚಾಯತ್ನಲ್ಲಿ ಫೇಸ್ಬುಕ್ ಲೈವ್ ಮೂಲಕ ಪ್ರಚೋದನಾಕಾರಿ ಭಾಷಣವನ್ನು ಮಾಡಿದ್ದ ಜಾಮಿಯಾ ಶೂಟರ್ ಆಸಿಫ್ ಕೊಲೆ ಪ್ರಕರಣದ ಆರೋಪಿಗಳನ್ನು ಬೆಂಬಲಿಸಲು ಒಟ್ಟಾಗುವಂತೆ ಹಿಂದುಗಳಿಗೆ ಕರೆ ನೀಡಿದ್ದ.
ಮುಸ್ಲಿಂ ಮಹಿಳೆಯರನ್ನು ಅಪಹರಿಸಿ ಲವ್ ಜಿಹಾದ್ ಸೇಡು ತೀರಿಸಿಕೊಳ್ಳುವಂತೆಯೂ ಹಿಂದುಗಳನ್ನು ಕೇಳಿಕೊಂಡಿದ್ದ ಆತ, ‘ಸಲ್ಮಾಳನ್ನು ಅಪಹರಿಸಲು ನಮಗೆ ಸಾಧ್ಯವಿಲ್ಲವೇ ’ಎಂದು ಪ್ರಶ್ನಿಸಿದ್ದ.
ಈ ದ್ವೇಷ ಭಾಷಣಕ್ಕಾಗಿ ಜಾಮಿಯಾ ಶೂಟರ್ ವಿರುದ್ಧ ಐಪಿಸಿಯ ವಿವಿಧ ಕಲಮ್ ಗಳಡಿ ಪ್ರಕರಣ ದಾಖಲಾಗಿತ್ತು. ಆ ಸಂದರ್ಭದಲ್ಲಿ ಗುರ್ಗಾಂವ್ ನ್ಯಾಯಾಲಯವು ʼಘಟನೆಯ ವೀಡಿಯೋ ನೋಡಿ ತನ್ನ ಆತ್ಮಸಾಕ್ಷಿಗೆ ಆಘಾತವುಂಟಾಗಿದೆ. ಅವಕಾಶ ಸಿಕ್ಕಿದರೆ ತಮ್ಮ ಧಾರ್ಮಿಕ ದ್ವೇಷದಿಂದ ಅಮಾಯಕರನ್ನು ಕೊಲ್ಲಲು ಸಾಮೂಹಿಕ ನರಮೇಧವನ್ನು ಕೈಗೊಳ್ಳುವ ಇಂತಹ ವ್ಯಕ್ತಿಗಳನ್ನು ಭಾರತೀಯ ಸಮಾಜವು ನಿಗ್ರಹಿಸುವುದು ಅಗತ್ಯವಾಗಿದೆ. ಕಟಕಟೆಯಲ್ಲಿ ನಿಂತಿರುವ ಆರೋಪಿಯು ಸೀದಾಸಾದಾ, ಏನೂ ಗೊತ್ತಿಲ್ಲದ ಅಮಾಯಕ ಯುವಕನಲ್ಲ. ಆತ ಹಿಂದೆ ಏನೆಲ್ಲ ಮಾಡಿದ್ದಾನೆ ಎನ್ನುವುದಕ್ಕೆ ಆತನ ಚಟುವಟಿಕೆಗಳು ಸಾಕ್ಷಿಯಾಗಿವೆ. ಈಗ ಆತ ಯಾವುದೇ ಹೆದರಿಕೆಯಿಲ್ಲದೆ ತನ್ನ ದ್ವೇಷವನ್ನು ಸಾಧಿಸಲು ಸಮರ್ಥನಾಗಿದ್ದಾನೆ ಮತ್ತು ಆತ ತನ್ನ ದ್ವೇಷ ಸಾಧನೆಯಲ್ಲಿ ಜನರಲ್ಲಿ ತೊಡಗಿಸಿಕೊಳ್ಳಬಲ್ಲʼ ಎಂದು ಕಿಡಿ ಕಾರಿತ್ತು.
ಒಂದು ತಿಂಗಳ ಬಳಿಕ ಕೋಮು ದ್ವೇಷದ ಹೇಳಿಕೆಗಳನ್ನು ನೀಡಬಾರದು ಎಂಬ ಷರತ್ತಿನ ಮೇಲೆ ಜಾಮಿಯಾ ಶೂಟರ್ ಜಾಮೀನು ಬಿಡುಗಡೆಗೊಂಡಿದ್ದ. ಆದಾಗ್ಯೂ ಆತ ಹಲವಾರು ಸಂದರ್ಭಗಳಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಪದೇ ಪದೇ ಕರೆಗಳನ್ನು ನೀಡಿದ್ದಾನೆ.
ಜಾಮೀನು ಬಿಡುಗಡೆಗೊಂಡ ಎರಡು ತಿಂಗಳ ಬಳಿಕ ಜಾಮಿಯಾ ಶೂಟರ್, ನಟಿ ಉರ್ಫಿ ಜಾವೇದ್ ವಿರುದ್ಧ ದ್ವೇಷಪೂರಿತ ಮತ್ತು ಲೈಂಗಿಕ ನಿಂದನೆಗಳನ್ನು ಮಾಡಿದ್ದ. ರಾಷ್ಟ್ರೀಯ ಮಹಿಳಾ ಆಯೋಗವು ಇದನ್ನು ಗಂಭಿರವಾಗಿ ಪರಿಗಣಿಸಿದ್ದು, ಅದರ ಅಧ್ಯಕ್ಷೆ ರೇಖಾ ಶರ್ಮಾ ಅವರು ಎಫ್ಐಆರ್ ಅನ್ನು ದಾಖಲಿಸುವಂತೆ ಮತ್ತು ಕಾಲಮಿತಿಯಲ್ಲಿ ತನಿಖೆಯನ್ನು ಪೂರ್ಣಗೊಳಿಸುವಂತೆ ಮಹಾರಾಷ್ಟ್ರ ಡಿಜಿಪಿಗೆ ನಿರ್ದೇಶ ನೀಡಿದ್ದರು. ತನಿಖೆಯ ವರದಿಯನ್ನೂ ಆಯೋಗವು ಕೋರಿದೆ.
ಜಾಮಿಯಾ ಶೂಟರ್ ತನ್ನ ಮುಸ್ಲಿಂ ವಿರೋಧಿ ಹಿಂಸಾಚಾರದ ಕೃತ್ಯಗಳನ್ನು ವೈಭವೀಕರಿಸಿದ್ದು ಇದೇ ಮೊದಲ ಸಲ ಅಲ್ಲ. ಆತನ ಇತ್ತೀಚಿನ ‘ಸಂಗೀತ’ ವೀಡಿಯೊಗಳು ತೋರಿಸಿರುವ ಅಪರಾಧ ಚಟುವಟಿಕೆಗಳ ವಿರುದ್ಧ ಹರ್ಯಾಣ ಪೊಲೀಸರು ಇನ್ನೂ ಕ್ರಮಗಳನ್ನು ಕೈಗೊಂಡಿಲ್ಲ. ವೀಡಿಯೊದಲ್ಲಿದ್ದವರ ಮುಖಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಸೂಕ್ತ ಪೊಲೀಸ್ ತನಿಖೆ ಮಾತ್ರ ಜಾಮಿಯಾ ಶೂಟರ್ ಈ ವೀಡಿಯೊಗಳಲ್ಲಿ ಪಾತ್ರ ನಿರ್ವಹಿಸಿದ್ದಾನೆಯೇ ಎನ್ನುವದನ್ನು ಹೇಳಲು ಸಾಧ್ಯ. ತನಗೂ ವೀಡಿಯೊಗಳಿಗೂ ಯಾವುದೇ ಸಂಬಂಧವಿಲ್ಲ ಜಾಮಿಯಾ ಶೂಟರ್ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾನೆ.







