ಚೆರ್ವತ್ತೂರು | ಶವರ್ಮ ಸೇವಿಸಿ ವಿದ್ಯಾರ್ಥಿನಿ ಮೃತ್ಯು ಪ್ರಕರಣ: ಕೂಲ್ ಬಾರ್ ನ ಪಾಲುದಾರ ಸಹಿತ ಇಬ್ಬರ ಬಂಧನ
![ಚೆರ್ವತ್ತೂರು | ಶವರ್ಮ ಸೇವಿಸಿ ವಿದ್ಯಾರ್ಥಿನಿ ಮೃತ್ಯು ಪ್ರಕರಣ: ಕೂಲ್ ಬಾರ್ ನ ಪಾಲುದಾರ ಸಹಿತ ಇಬ್ಬರ ಬಂಧನ ಚೆರ್ವತ್ತೂರು | ಶವರ್ಮ ಸೇವಿಸಿ ವಿದ್ಯಾರ್ಥಿನಿ ಮೃತ್ಯು ಪ್ರಕರಣ: ಕೂಲ್ ಬಾರ್ ನ ಪಾಲುದಾರ ಸಹಿತ ಇಬ್ಬರ ಬಂಧನ](https://www.varthabharati.in/sites/default/files/images/articles/2022/05/2/333749-1651468369.jpg)
ದೇವಾನಂದಾ
ಕಾಸರಗೋಡು, ಮೇ 2: ಶವರ್ಮ ಸೇವಿಸಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟು ಹಲವರು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದಾರೆ.
ಚೆರ್ವತ್ತೂರು ಐಡಿಯಲ್ ಫುಡ್ ಪಾಯಿಂಟ್ ಕೂಲ್ ಬಾರ್ ನ ಪಾಲುದಾರ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.
ಈ ನಡುವೆ ಫುಡ್ ಪಾಯಿಂಟ್ ಸೇರಿದ ಓಮ್ನಿ ವಾಹನವೊಂದು ಅಗ್ನಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಂಸ್ಥೆಯ ಗಾಜುಗಳನ್ನು ಕಲ್ಲೆಸೆದು ಹಾನಿಗೊಳಿಸಲಾಗಿದೆ.
ಐಡಿಯಲ್ ಫುಡ್ ಪಾಯಿಂಟ್ ಕೂಲ್ ಬಾರ್ ನಿಂದ ಶವರ್ಮ ಸೇವಿಸಿದ್ದ ಪ್ಲಸ್ ವನ್ ವಿದ್ಯಾರ್ಥಿನಿ, ಚೆರ್ವತ್ತೂರು ಪೇರಳದ ದೇವಾನಂದಾ(16) ರವಿವಾರ ಮಧ್ಯಾಹ್ನ ಮೃತಪಟ್ಟಿದ್ದರು. ಎಪ್ರಿಲ್ 29 ಮತ್ತು 30ರಂದು ಈ ಐಡಿಯಲ್ ಫುಡ್ ಪಾಯಿಂಟ್ ನಿಂದ ಶವರ್ಮ ಸೇವಿಸಿದ್ದ ಒಟ್ಟು 46 ಮಂದಿ ಅಸ್ವಸ್ಥಗೊಂಡಿದ್ದಾರೆ. ಈ ಪೈಕಿ ಬಹುತೇಕ ವಿದ್ಯಾರ್ಥಿಗಳು. ಶವರ್ಮ ತಿಂದ ಕೆಲ ಗಂಟೆಗಳಲ್ಲಿ ವಾಂತಿ, ಜ್ವರ, ತಲೆ ಸುತ್ತುವಿಕೆ ಹಾಗೂ ಇನ್ನಿತರ ಅಸ್ವಸ್ಥತೆ ಕಂಡು ಬಂದಿದ್ದು, ಜಿಲ್ಲಾಸ್ಪತ್ರೆ ಸೇರಿದಂತೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ದೇವಾನಂದರಲ್ಲಿ ರವಿವಾರ ಬೆಳಗ್ಗೆ ಅಸ್ವಸ್ಥತೆ ಕಂಡುಬಂದಿದ್ದು, ಬಳಿಕ ಅವರಿಗೆ ಚೆರ್ವತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯಾಹ್ನದ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆ ಇಂದು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಯಲಿದೆ.
ಸದ್ಯ ಜಿಲ್ಲಾಸ್ಪತ್ರೆಯಲ್ಲಿ 39 ಮತ್ತು ಚೆರ್ವತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 9 ಮಂದಿ ಚಿಕಿತ್ಸೆಯಲ್ಲಿದ್ದಾರೆ
ಈ ನಡುವೆ ಈ ಸಂಸ್ಥೆಗೆ ಆಹಾರ ಸುರಕ್ಷತಾ ಇಲಾಖೆಯ ಪರವಾನಿಗೆ ಇಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಕೂಲ್ ಬಾರ್ ನಿಂದ ಆಹಾರ ಸಾಮಗ್ರಿಗಳ ಸ್ಯಾಂಪಲನ್ನು ತಪಾಸಣೆಗೆ ಕೊಚ್ಚಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.