ಶಿರ್ವಾಕೋಡು ಸುಮತಿ ಹೆಗ್ಗಡ್ತಿಗೆ ಸಂಜೀವಿನಿ ಪ್ರಶಸ್ತಿ ಪ್ರದಾನ

ಮಂಗಳೂರು : ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಜೀವ ಪ್ರೀತಿ ಮತ್ತು ಜೀವನ ಪ್ರೀತಿಗಳನ್ನು ಪೋಷಿಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತವೆ. ಇಂದಿಲ್ಲಿ ನೀಡುತ್ತಿರುವ ಸಂಜೀವಿನಿ ಪ್ರಶಸ್ತಿ ಎಂಬುದು, ತನ್ನ ವೈಯಕ್ತಿಕ ಅಪೇಕ್ಷೆ ಆದ್ಯತೆಗಳನ್ನು ಬದಿಗೊತ್ತಿ, ನಮ್ಮೆಲ್ಲರ ಬದುಕನ್ನು ರೂಪಿಸಿದ ಅಮ್ಮಂದಿರ ಶಕ್ತಿಗೆ ಸಂದ ಗೌರವವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಭಿಪ್ರಾಯಪಟ್ಟರು.
ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಮಂಗಳೂರು ಇದರ ಆಶ್ರಯದಲ್ಲಿ ಮುನ್ನೂರು ಗ್ರಾಮದ ಕುತ್ತಾರು ಪದವಿನ ’ಸಂಜೀವಿನಿ’ ಗೃಹದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಸಂಜೀವಿ ನಾರಾಯಣ ಅಡ್ಯಂತಾಯರ ಸ್ಮರಣಾರ್ಥ ಸ್ಥಾಪಿಸಲಾಗಿರುವ ʼಸಂಜೀವಿನಿ ಪ್ರಶಸ್ತಿ’ ಯನ್ನು ೯೨ ರ ಹರೆಯದ ಶಿರ್ವಾಕೋಡು ಸುಮತಿ ಹೆಗ್ಗಡ್ತಿ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳಾಯಿರು ಅಧ್ಯಕ್ಷತೆ ವಹಿಸಿದ್ದರು. ಕುಸುಮಲತಾ ರೈ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಉಪನ್ಯಾಸಕ ರಘು ಇಡ್ಕಿದು ’ಕೌಟುಂಬಿಕ ಸಂಬಂಧಗಳು ಮತ್ತು ಸೌಹಾರ್ದತೆ’ ಎಂಬ ವಿಷಯವಾಗಿ ವಿಶೇಷ ಉಪನ್ಯಾಸವಿತ್ತರು. ಹಿರಿಯ ಜಾನಪದ ವಿದ್ವಾಂಸ ಡಾ. ವಾಮನ ನಂದಾವರ, ಬಾಲಕೃಷ್ಣ ಅಡ್ಯಂತಾಯ ಚೆನ್ನೈ ಉಪಸ್ಥಿತರಿದ್ದರು.
ನಿವೃತ್ತ ಯೋಧ ದಯಾನಂದ ಆಳ್ವ ಸಣ್ಣತ್ತಡ್ಕ ಸಂಜೀವಿ ನಾರಾಯಣ ಅಡ್ಯಂತಾಯರ ಸಂಸ್ಮರಣೆಗೈದರು. ಮಂಜುಳಾ ಸುಕುಮಾರ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ವಿದ್ಯಾ ಮೋಹನದಾಸ್ ಸನ್ಮಾನಿತರ ಪರವಾಗಿ ಅನಿಸಿಕೆ ವ್ಯಕ್ತಪಡಿಸಿದರು. ರಾಧಾಕೃಷ್ಣ ಅಡ್ಯಂತಾಯ ಸ್ವಾಗತಿಸಿದರು. ಆಶಾ ಶೆಣೈ, ಆಕೃತಿ ಭಟ್ ಹಾಗೂ ವಿಜಯಲಕ್ಷ್ಮೀ ಕಟೀಲು ಭಾವಗೀತೆಗಳನ್ನು ಹಾಡಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂಯೋಜಕಿ ರೂಪಕಲಾ ಆಳ್ವ ವಂದಿಸಿದರು. ಡಾ. ಸುಧಾರಾಣಿ ಕಾರ್ಯಕರಮ ನಿರೂಪಿಸಿದರು. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸದಸ್ಯೆಯರಿಂದ ಡಾ. ದಿನಕರ ಎಸ್. ಪಚ್ಚನಾಡಿಯ ನಿರ್ದೇಶನದಲ್ಲಿ ಱಉಳ್ಳಾಲದ ಅಬ್ಬಕ್ಕ’ ತುಳು ಯಕ್ಷಗಾನ ತಾಳಮದ್ದಲೆ ನಡೆಯಿತು.







