ಬೆಂಗಳೂರು | ಮೇ 4ಕ್ಕೆ ಕೆಪಿಎಸ್ಸಿ ಕಚೇರಿಗೆ ಬೀಗ ಜಡಿದು ಎಎಪಿ ಪ್ರತಿಭಟನೆ: ಮೋಹನ್ ದಾಸರಿ

ಬೆಂಗಳೂರು, ಮೇ 2: ವ್ಯಾಪಕ ಭ್ರಷ್ಟಾಚಾರದ ಕೂಪವಾಗಿರುವ ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್ಸಿ) ಕಚೇರಿಗೆ ನಾಳೆ (ಮೇ 4) ಬೀಗ ಜಡಿದು ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ನಡೆಸಲಿದೆ ಎಂದು ಪಕ್ಷದ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ತಿಳಿಸಿದರು.
ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್ ದಾಸರಿ, ಶ್ಯಾಮ್ ಭಟ್ರಂತಹ ಪರಮ ಭ್ರಷ್ಟಾಚಾರಿಗಳನ್ನು ಕೆಪಿಎಸ್ಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದೇ ದೊಡ್ಡ ದುರಂತವಾಗಿದೆ. ಇದನ್ನು ಖಂಡಿಸಿ ರಾಜಭವನದ ಮುಂದೆ ಪ್ರತಿಭಟನೆ ಮಾಡಿದ್ದ ಎಎಪಿ ಕಾರ್ಯಕರ್ತರು ಈಗಲೂ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಭ್ರಷ್ಟಾಚಾರದ ತಾಣ ಎಂಬ ಕುಖ್ಯಾತಿಗೆ ಒಳಗಾಗಿರುವ ಕರ್ನಾಟಕ ಲೋಕಸೇವಾ ಆಯೋಗವನ್ನು ಸರಿದಾರಿಗೆ ತರುವ ಕುರಿತು ಎಲ್ಲ ಸರಕಾರಗಳು ಮಾತನಾಡಿವೆ. ಆದರೆ ಇದಕ್ಕೆ ಕಾಯಕಲ್ಪ ಮಾತ್ರ ಇನ್ನೂ ಆಗಿಲ್ಲ. ಹಾಗಾಗಿ ಕೆಪಿಎಸ್ಸಿ ಅಕ್ರಮಗಳನ್ನು ಖಂಡಿಸಿ, ಕೆಪಿಎಸ್ಸಿ ಕಚೇರಿಗೆ ಬೀಗ ಜಡಿದು ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದರು.
1998ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಹುದ್ದೆಗಳ ನೇಮಕದಲ್ಲಿ ಅನರ್ಹರಿಗೆ ಹುದ್ದೆ ನೀಡಿರುವುದನ್ನು ಕರ್ನಾಟಕ ಲೋಕಸೇವಾ ಆಯೋಗ ಒಪ್ಪಿಕೊಂಡಿದ್ದು, 28 ಗೆಜೆಟೆಡ್ ಅಧಿಕಾರಿಗಳನ್ನು ಕೈಬಿಟ್ಟು ಉಳಿದವರನ್ನು ನೇಮಿಸಲಾಯಿತು. 1998, 1999, 2004ರಲ್ಲಿ ಕೆಪಿಎಸ್ಸಿ ನಡೆಸಿದ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕೆ.ಆರ್. ಖಲೀಲ್ ಅಹ್ಮದ್ ಮತ್ತು ಇತರ ಅಭ್ಯರ್ಥಿಗಳು ಹೈಕೋರ್ಟ್ಗೆ 2008ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ 2016ರ ಜೂನ್ 21ರಂದು ತೀರ್ಪು ನೀಡಿತ್ತು. ಇದನ್ನು ಸುಪ್ರೀಂ ಕೋರ್ಟ್ 2018 ರಲ್ಲಿ ಎತ್ತಿ ಹಿಡಿದಿದೆ ಎಂದು ಅವರು ಮಾಹಿತಿ ನೀಡಿದರು.
ಅಕ್ರಮಗಳನ್ನೇ ಹೊದ್ದು ಮಲಗಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) 2015ನೇ ಸಾಲಿನ 428 ಗೆಜೆಟೆಡ್ ಪ್ರೊಬೇಷನರಿ (ಕೆಎಎಸ್) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲೂ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಹಿಂದೆಲ್ಲಾ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಗೊಂಡ ಬಳಿಕ ಭ್ರಷ್ಟಾಚಾರವಾದರೆ 2015ರಲ್ಲಿ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆ ಸಿದ್ಧತೆ ನಡೆಯುತ್ತಿರುವ ಹಂತದಲ್ಲಿಯೇ ಅಕ್ರಮವಾಗಿದೆ. 129 ಅಭ್ಯರ್ಥಿಗಳು ಉತ್ತರ ಪತ್ರಿಕೆಯಲ್ಲಿ ಗುರುತಿನ ಚಿಹ್ನೆ ಹಾಕುವ ಮೂಲಕ ಅಕ್ರಮ ನಡೆಸಿದ್ದರು. ಇಷ್ಟೇ ಅಲ್ಲದೆ ಡಿಜಿಟಲ್ ಮೌಲ್ಯಮಾಪನದಲ್ಲಿ ಭಾರೀ ಅಕ್ರಮ ನಡೆದಿದೆ. ಜೊತೆಗೆ ಕೆಪಿಎಸ್ಸಿ ಅವರೇ ಐಡಿ ಮತ್ತು ಪಾಸ್ವರ್ಡ್ ಕ್ರಿಯೇಟ್ ಮಾಡಿ ಮೌಲ್ಯಮಾಪನವಾದ ನಂತರ ಅಂಕಗಳನ್ನು ತಿದ್ದಿದ ಆರೋಪವಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚನ್ನಪ್ಪಗೌಡ ನೆಲ್ಲೂರು, ಸುರೇಶ್ ರಾಥೋಡ್, ಮುರುಳಿ ಸೇರಿದಂತೆ ಹಲವು ಮುಖಂಡರುಗಳು ಭಾಗವಹಿಸಿದ್ದರು.
2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ 106 ಹುದ್ದೆಗಳ ನೇಮಕಾತಿಯಲ್ಲಿ, ಅಂಗವಿಕಲರೆಂದು ಸುಳ್ಳು ಪ್ರಮಾಣಪತ್ರ ನೀಡಿ 20 ಮಂದಿ ಪರೀಕ್ಷೆ ಬರೆದಿದ್ದರು. ಇನ್ನು 64 ಅಭ್ಯರ್ಥಿಗಳು ಉತ್ತರ ಪತ್ರಿಕೆಯಲ್ಲಿ ಹೆಸರು, ವಿಳಾಸ ಬರೆದು ಉತ್ತೀರ್ಣರಾಗಿದ್ದರು. ನಂತರ ಇವರನ್ನೆಲ್ಲ ಅನರ್ಹ ಮಾಡಲಾಯಿತು. 1999, 2004 ಮತ್ತು 2008ರ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎಂಬ ಆರೋಪಗಳಿದ್ದು, ಇವು ಕೋರ್ಟ್ ಅಂಗಳದಲ್ಲಿವೆ.
-ಮೋಹನ್ ದಾಸರಿ, ಎಎಪಿ ಮುಖಂಡ
ಕೆಪಿಎಸ್ಸಿ ಭ್ರಷ್ಟಾಚಾರದಿಂದಾಗಿ ಸರಕಾರಿ ಉದ್ಯೋಗಗಳು ಇಂದು ಭ್ರಷ್ಟರ, ಪ್ರಭಾವಿಗಳ ಹಾಗೂ ಉಳ್ಳವರ ಪಾಲಾಗುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳು ಬೀದಿಗೆ ಬೀಳುವ ಪರಿಸ್ಥಿತಿ ಉದ್ಭವಿಸಿದೆ. ಹಾಗಾಗಿ ಕೂಡಲೇ ಈ ಉದ್ಯೋಗಸೌಧವನ್ನು ಮುಚ್ಚಿ ಹರಾಜಾಗುತ್ತಿರುವ ಸರಕಾರಿ ಉದ್ಯೋಗಗಳನ್ನು ರಕ್ಷಿಸುವ ಉದ್ದೇಶವನ್ನಿಟ್ಟುಕೊಂಡು, ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ, ಕಮಿಷನರ್ ಭಾಸ್ಕರ್ ರಾವ್, ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಇನ್ನಿತರ ನಾಯಕರುಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು.
-ಜಗದೀಶ್ ವಿ ಸದಂ, ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ







