ಕಬ್ಬಡ್ಡಿ ಮತ್ತು ಬಾಸ್ಕೆಟ್ ಬಾಲ್ ಕ್ರೀಡೆ ಪ್ರೋತ್ಸಾಹಿಸಲು ತೀರ್ಮಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮೇ 03 : ಕಬ್ಬಡ್ಡಿ ಮತ್ತು ಬಾಸ್ಕೆಟ್ ಬಾಲ್ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಜ್ಯ ಸರ್ಕಾರ 75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ 75 ಕ್ರೀಡಾಪಟುಗಳನ್ನು ದತ್ತು ಪಡೆದು 4 ವರ್ಷಗಳ ಕಾಲ ಗುಣಮಟ್ಟದ ತರಬೇತಿ, ಕ್ರೀಡಾ ಸೌಲಭ್ಯಗಳನ್ನು ನೀಡುವ ಮೂಲಕ ರಾಜ್ಯದ ಕನಿಷ್ಟ 10 ಕ್ರೀಡಾಪಟುಗಳು ಮುಂದಿನ ಒಲಂಪಿಕ್ಸ್ ನಲ್ಲಿ ಭಾಗವಹಿಸುವಂತೆ ಮಾಡುವ ಗುರಿ ಹೊಂದಿದೆ ಎಂದು ತಿಳಿಸಿದರು.
ಯುವಕರು ಭವ್ಯ ಭಾರತದ ಭವಿಷ್ಯ :ಗುಜರಾತ್ ನಲ್ಲಿ ಅತ್ಯಂತ ದೊಡ್ಡ ಸ್ಟೇಡಿಯಂ ಅಲ್ಲದೇ ಕ್ರೀಡಾ ನಗರವನ್ನು ಪ್ರಥಮಬಾರಿಗೆ ನಿರ್ಮಿಸಲಾಗುತ್ತಿದೆ. ಅದರ ನೇತೃತ್ವವನ್ನು ಕೇಂದ್ರ ಗೃಹ ಸಚಿವರು ವಹಿಸಿಕೊಂಡಿದ್ದಾರೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021ರ ಯಶಸ್ವಿಯಾಗಿ ಆಯೋಜಿಸಲಾಗಿದೆ. ಬೆಂಗಳೂರು ನಗರ ದೇಶದ ಎಲ್ಲ ವಿಶ್ವವಿದ್ಯಾಲಯಗಳು ಗುರುತಿಸುವಂತಾಗಿದೆ. 10 ದಿನಗಳ ಕಾಲ ಕ್ರೀಡಾಪಟುಗಳು ಕ್ರಿಯಾಶೀಲರಾಗಿ ಭಾಗವಹಿಸಿದ್ದಾರೆ. 2 ರಾಷ್ಟ್ರಮಟ್ಟದ ಹೊಸ ದಾಖಲಗೆಗಳನ್ನು ಮಾಡಲಾಗಿದೆ. ಖೇಲೋಇಂಡಿಯಾ ಕ್ರೀಡಾಕೂಟದ ಭಾಗವಾಗುವ ಮೂಲಕ ಯುವಕರು ಭವ್ಯ ಭಾರತದ ಭವಿಷ್ಯವಾಗಿದ್ದಾರೆ ಎಂದು ತಿಳಿಸಿದರು.
ಸೋಲಿಗೆ ಹೆದರದವರೇ ಗೆಲ್ಲಲು ಸಾಧ್ಯ : ಕ್ರೀಡೆ ಮನುಷ್ಯನ ಸಹಜವಾದ ಒಂದು ಕ್ರಿಯಾಶೀಲ ಚಟುವಟಿಕೆ. ಕ್ರೀಡೆಯಿಂದ ಶಿಸ್ತು , ವ್ಯಕ್ತಿತ್ವ ವಿಕಸನವಾಗುತ್ತದೆ. ಕ್ರೀಡಾಮನೋಭಾವ ಬೆಳೆಸಿಕೊಳ್ಳಲು ಕ್ರೀಡೆ ಸಹಕರಿಸುತ್ತದೆ. ಗೆಲ್ಲುವುದು ನಮ್ಮ ಗುರಿ. ಗೆಲ್ಲುವ ಸಲುವಾಗಿಆಟವಾಡಬೇಕೆ ಹೊರತು ಸೋಲಬಾರದು ಎಂದು ಆಡಬಾರದು. ಸಕಾರಾತ್ಮಕವಾಗಿ ಆಟವಾಡಬೇಕು. ಸೋಲು ಗೆಲುವು ಸಾಮಾನ್ಯ. ಯಾರು ಸೋಲುವುದಕ್ಕೆ ಹೆದರುವುದಿಲ್ಲವೋ ಅವರು ಮಾತ್ರ ಗೆಲ್ಲಲು ಸಾಧ್ಯ. ಪ್ರಧಾನಮಂತ್ರಿ ಮೋದಿಯವರು ಖೇಲೋ ಇಂಡಿಯೋ, ಫಿಟ್ ಇಂಡಿಯಾ, ಒಲಂಪಿಕ್ ಸಂದರ್ಭದಲ್ಲಿ ಜೀತೋ ಇಂಡಿಯಾ ಎಂದು ಕರೆ ನೀಡಿದರು. ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಹೆಚ್ಚಿನ ಪದಕಗಳನ್ನು ಗೆಲ್ಲಲು ಪ್ರೇರಣೆ ನೀಡಿದರು.







