ಮೇ 7: ಶ್ರೀವಿಶ್ವೇಶತೀರ್ಥ ಸ್ಮರಣಾರ್ಥ ಸ್ಮೃತಿವನಕ್ಕೆ ಭೂಮಿ ಪೂಜೆ
ಉಡುಪಿ : ಪೇಜಾವರ ಮಠದ ಪದ್ಮವಿಭೂಷಣ ಪುರಸ್ಕೃತ ಕೀರ್ತಿ ಶೇಷ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಸ್ಮರಣಾರ್ಥ ನೀಲಾವರ ಗ್ರಾಮದ ಗೋ ಶಾಲೆ ಸಮೀಪದ ಎರಡು ಎಕರೆ ಸರಕಾರಿ ಜಾಗದಲ್ಲಿ ನಿರ್ಮಾಣವಾಗಲಿ ರುವ ಸ್ಮೃತಿವನಕ್ಕೆ ಭೂಮಿ ಪೂಜಾ ಕಾರ್ಯಕ್ರಮವು ಮೇ ೭ರಂದು ಬೆಳಗ್ಗೆ ೯.೩೦ಕ್ಕೆ ನಡೆಯಲಿದೆ.
ಪೇಜಾವರ ಮಠದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಠದ ದಿವಾನ ಎಂ.ರಘುರಾಮಾಚಾರ್ಯ, ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯ ಸಾನ್ನಿಧ್ಯದಲ್ಲಿ ರಾಜ್ಯದ ಅರಣ್ಯ ಸಚಿವ ಉಮೇಶ ವಿ ಕತ್ತಿ ಶಿಲಾನ್ಯಾಸ ನೆರವೇರಿಸಲಿರುವರು. ಅಧ್ಯಕ್ಷತೆಯನ್ನು ಉಡುಪಿ ಶಾಸಕ ಕೆ ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿರುವರು ಎಂದು ತಿಳಿಸಿದರು.
ಭೂಮಿಪೂಜೆಯ ಬಳಿಕ ಸಭಾ ಕಾರ್ಯಕ್ರಮವು ಗೋಶಾಲೆಯ ಸಭಾಂಗಣ ದಲ್ಲಿ ನಡೆಯಲಿದೆ. ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಯೋಜನೆಯ ನೀಲನಕಾಶೆ ಸಿದ್ಧವಾಗಿದ್ದು ವನದಲ್ಲಿ ಶ್ರೀವಿಶ್ವೇಶ ತೀರ್ಥರ ಕುಳಿತ ಭಂಗಿಯ ಹತ್ತು ಅಡಿ ಎತ್ತರದ ಕಂಚಿನ ಪ್ರತಿಮೆ, ವೇದಿಕೆ, ಗ್ರೀನ್ ರೂಮ್, ಸ್ಟೇಡಿಯಂ ರೀತಿಯ ಮೆಟ್ಟಿಲುಗಳು, ವಾಕಿಂಗ್ ಟ್ರ್ಯಾಕ್, ಗ್ಯಾಲರಿ ಮತ್ತು ಮಕ್ಕಳ ಆಟದ ವಿಭಾಗ, ನಾಲ್ಕು ಕುಟೀರಗಳು ಮತ್ತು ಔಷಧೀಯ ಸಸ್ಯಗಳು ಹೂವಿನ ಹಾಗೂ ಹಣ್ಣಿನ ಮರಗಳು ಇರಲಿವೆ. ಈ ವನದ ಕಾಮ ಗಾರಿಯು ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಗೋಷ್ಠಿಯಲ್ಲಿ ಮಠದ ಸಿಇಒ ಸುಬ್ರಹ್ಮಣ್ಯ ಭಟ್ ಸಗ್ರಿ, ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ, ನೀಲಾವರ ಪಂಚಾಯತ್ ಅಧ್ಯಕ್ಷ ಮಹೇಂದ್ರ ಕುಮಾರ್, ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು.