ರಾಜ್ಯದಲ್ಲಿ ಬುಧವಾರ 148 ಮಂದಿಗೆ ಕೊರೋನ ದೃಢ; ಸಾವಿನ ಸಂಖ್ಯೆ ಶೂನ್ಯ

ಬೆಂಗಳೂರು, ಮೇ 4: ರಾಜ್ಯದಲ್ಲಿ ಬುಧವಾರ 148 ಹೊಸ ಕೊರೋನ ಪ್ರಕರಣಗಳು ದೃಢವಾಗಿದ್ದು, ಸೋಂಕಿನಿಂದ ಯಾರೊಬ್ಬರು ಮೃತಪಡದೆ, 162 ಜನರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 39,48,092ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 40,060ಕ್ಕೆ ತಲುಪಿದೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 1801ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.
ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 148 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಳ್ಳಾರಿ 1, ಬೆಂಗಳೂರು ನಗರ 142, ಕೋಲಾರ 1, ಮಂಡ್ಯ 1, ಮೈಸೂರು 3 ಪ್ರಕರಣಗಳು ಪತ್ತೆಯಾಗಿವೆ.
ರಾಜಧಾನಿಯಲ್ಲಿ 142 ಜನರಿಗೆ ಸೋಂಕು ದೃಢ: ರಾಜಧಾನಿಯಲ್ಲಿ ಬುಧವಾರ 142 ಜನರಿಗೆ ಕೊರೋನ ಸೋಂಕು ದೃಢಪಟ್ಟಿದೆ. ನಗರದಲ್ಲಿ ಇಲ್ಲಿಯವರೆಗೆ ಒಟ್ಟು 17,84,022 ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 16,962 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು 17,65,339 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.







