5 ಲಕ್ಷ ಹೆಕ್ಟೇರ್ ಕಂದಾಯ ಭೂಮಿ ರೈತರಿಗೆ ಹಂಚಿಕೆ: ಸಚಿವ ಆರ್. ಅಶೋಕ್

ಬೆಂಗಳೂರು, ಮೇ 4: ‘ತನ್ನ ವಶದಲ್ಲಿರುವ 6 ಲಕ್ಷ ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆ, ಕಂದಾಯ ಇಲಾಖೆಗೆ ಹಿಂತಿರುಗಿಸಲಿದ್ದು, ಈ ಹಿನ್ನೆಲೆಯಲ್ಲಿ ತನ್ನ ಅಗತ್ಯಕ್ಕೆ ಬೇಕಾದ ಭೂಮಿಯನ್ನು ಹೊರತುಪಡಿಸಿ ಉಳಿದ ಭೂಮಿಯನ್ನು ರೈತರಿಗೆ ಹಂಚಲು ಸರಕಾರ ನಿರ್ಧರಿಸಿದೆ' ಎಂದು ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ಇಂದಿಲ್ಲಿ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ‘ಆ ಮೂಲಕ ಮೈಸೂರು, ಚಾಮರಾಜನಗರ, ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಇರುವ ಬಗರ್ ಹುಕುಂ ಸಮಸ್ಯೆಗೆ ಶಾಶ್ವತ ತೆರೆ ಬೀಳಲಿದೆ. ಅರಣ್ಯ ಇಲಾಖೆಯ ವಶದಲ್ಲಿ 6 ಲಕ್ಷ ಹೆಕ್ಟೇರ್ನಷ್ಟು ಭೂಮಿ ಡೀಮ್ಡ್ ಅರಣ್ಯ ಪ್ರದೇಶವೆಂದು ಗುರುತಿಸಲಾಗಿದ್ದು ಮೂಲತಃ ಇದು ಕಂದಾಯ ಇಲಾಖೆಗೆ ಸೇರಿದ್ದು' ಎಂದು ಹೇಳಿದರು.
‘ಇದೀಗ ಈ ಭೂಮಿಯನ್ನು ಅರಣ್ಯ ಇಲಾಖೆ ಕಂದಾಯ ಇಲಾಖೆಗೆ ಹಸ್ತಾಂತರಿಸಲಿದ್ದು, ಹೀಗೆ ಕಂದಾಯ ಇಲಾಖೆಗೆ ಮರಳಲಿರುವ ಬಹುತೇಕ ಭೂಮಿಯನ್ನು ರೈತರಿಗೆ ಹಂಚಲು ನಿರ್ಧರಿಸಲಾಗಿದೆ. ಕಂದಾಯ ಇಲಾಖೆಗೆ ಮರಳಿ ಬರಲಿರುವ ಭೂಮಿಯ ಪೈಕಿ ಎಷ್ಟು ಪ್ರಮಾಣದ ಭೂಮಿ ಸರಕಾರದ ಅಗತ್ಯಕ್ಕೆ ಬೇಕು ಎಂದು ಗುರುತಿಸಲಾಗುತ್ತಿದ್ದು, ಆಸ್ಪತ್ರೆಯಿಂದ ಹಿಡಿದು ಹಲವು ಸಾರ್ವಜನಿಕ ಕೆಲಸಗಳಿಗಾಗಿ ಇದು ಬಳಕೆಯಾಗಲಿದೆ' ಎಂದು ಅವರು ವಿವರಣೆ ನೀಡಿದರು.
‘ಉಳಿದಂತೆ ಐದು ಲಕ್ಷ ಹೆಕ್ಟೇರ್ನಷ್ಟು ಭೂಮಿಯನ್ನು ರೈತರಿಗೆ ಹಂಚಲಾಗುವುದು. ಇದರಿಂದಾಗಿ ದಶಕಗಳಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ. ಈ ಮಧ್ಯೆ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ತೊಂಭತ್ತು ಸಾವಿರ ಎಕರೆಗೂ ಹೆಚ್ಚು ಭೂಮಿ ಒತ್ತುವರಿಯಾಗಿದ್ದು ಹೀಗೆ ಒತ್ತುವರಿಯಾದ ಜಮೀನನ್ನು ಒತ್ತುವರಿದಾರರಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
‘ಕೊಡಗು ಜಿಲ್ಲೆಯಲ್ಲಿ ಹನ್ನೆರಡು ಸಾವಿರ ಎಕರೆ, ಹಾಸನದಲ್ಲಿ ಮೂವತ್ತು ಸಾವಿರ ಎಕರೆ ಭೂಮಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಲವತ್ತೈದು ಸಾವಿರ ಎಕರೆ ಭೂಮಿ ಒತ್ತುವರಿಯಾಗಿದೆ. ಹೀಗೆ ಒತ್ತುವರಿಯಾದ ಭೂಮಿಯಲ್ಲಿ ಕಾಫಿ, ಏಲಕ್ಕಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತಿದ್ದು ಈ ಭೂಮಿಯನ್ನು ಮೂವತ್ತು ವರ್ಷಗಳ ಗುತ್ತಿಗೆ ಆಧಾರದ ಮೇಲೆ ಒತ್ತುವರಿದಾರರಿಗೇ ನೀಡಲಾಗುವುದು ಎಂದು ಅಶೋಕ್ ಹೇಳಿದರು.
‘ಹೀಗೆ ಒತ್ತುವರಿಯಾದ ಭೂಮಿಯ ಪೈಕಿ ಐದು ಎಕರೆಗಿಂತ ಕಡಿಮೆ ಪ್ರಮಾಣದ ಭೂಮಿಯನ್ನು ಒತ್ತುವರಿ ಮಾಡಿಕೊಂಡವರ ಸಂಖ್ಯೆ ಶೇಕಡಾ ಎಂಭತ್ತರಷ್ಟಿದೆ. ಹೀಗಾಗಿ ಒಂದರಿಂದ ಎರಡು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಗೆ ಎಕರೆಗೆ ವಾರ್ಷಿಕ ಒಂದೂವರೆ ಸಾವಿರ ರೂ.ನಿಂದ ಎರಡು ಸಾವಿರ ರೂ.ಗಳಿಗೆ ಗುತ್ತಿಗೆ ಹಣ ನಿಗದಿ ಪಡಿಸಲಾಗುವುದು' ಎಂದು ಅಶೋಕ್ ತಿಳಿಸಿದರು.
‘ಇನ್ನು ಮೂರರಿಂದ ಐದು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಗೆ ಎರಡರಿಂದ ಎರಡೂವರೆ ಸಾವಿರ ರೂ., ಐದರಿಂದ ಹತ್ತು ಎಕರೆ ಮೇಲ್ಪಟ್ಟ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಗೆ ಎರಡೂವರೆ ಸಾವಿರ ರೂ.ನಿಂದ ಮೂರು ಸಾವಿರ ರೂ.ಗಳಿಗೆ ಗುತ್ತಿಗೆ ದರ ನಿಗದಿ ಪಡಿಸಲಾಗುವುದು.ಇದೇ ರೀತಿ ಸ್ಲ್ಪಾಬ್ ಆಧಾರದ ಮೇಲೆ ಒತ್ತುವರಿ ಭೂಮಿಗೆ ಗುತ್ತಿಗೆ ದರವನ್ನು ನಿಗದಿ ಮಾಡಲಾಗುವುದು. ಇಂತಹ ಭೂಮಿಯನ್ನು ಹಲವು ಕಾಲದಿಂದ ಒತ್ತುವರಿದಾರರು ಸರಕಾರಕ್ಕೆ ಹಣ ಪಾವತಿಸದೆಯೇ ಅನುಭವಿಸುತ್ತಿದ್ದರು. ಆದರೆ ಇನ್ನು ಮುಂದೆ ಅವರು ಗುತ್ತಿಗೆ ಹಣ ಪಾವತಿಸಬೇಕಾಗುತ್ತದೆ. ಆ ಮೂಲಕ ಒತ್ತುವರಿ ಜಮೀನು ಸರಕಾರದ್ದು ಎಂದು ದಾಖಲೆಗಳಲ್ಲಿ ಖಚಿತವಾಗಿ ಗುರುತಿಸಲ್ಪಡುತ್ತದೆ' ಎಂದು ತಿಳಿಸಿದರು.
‘ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒತ್ತುವರಿ ಗೇರು ಭೂಮಿಯನ್ನು ಒತ್ತುವರಿದಾರರಿಗೇ ಮಾರಾಟ ಮಾಡಲು ನಿರ್ಧರಿಸಲಾಗಿದೆ'
-ಆರ್.ಅಶೋಕ್ ಕಂದಾಯ ಸಚಿವ







