ಬಲೆಗಳನ್ನಿಡಲು ಮಾಡಿದ್ದ ಶೆಡ್ ಕೂಡಾ ಸಮುದ್ರಪಾಲು: ಉಳ್ಳಾಲ ಕಡಲ್ಕೊರೆತ ಪ್ರದೇಶಗಳಲ್ಲಿ ಸ್ಥಳೀಯರ ಆತಂಕ
ವಿಧಾನ ಪರಿಷತ್ನ ಬಾಕಿ ಭರವಸೆಗಳ ಸಮಿತಿಯಿಂದ ಪರಿಶೀಲನೆ

ಮಂಗಳೂರು, ಮೇ 5: ಕಡಲ್ಕೊರೆತ ತಡೆಗಾಗಿ ಇಲ್ಲಿ ಪ್ರತೀ ವರ್ಷ ಸಮುದ್ರ ಕಿನಾರೆಗೆ ಕಲ್ಲು ಹಾಕಲಾಗುತ್ತದೆ. ಸಮುದ್ರದ ಮದ್ಯದಲ್ಲೇ ಅಲೆಗಳ ರಭಸಕ್ಕೆ ಬ್ರೇಕ್ ಹಾಕಿ ಸಮುದ್ರ ತೀರದ ಮನೆಗಳನ್ನು ರಕ್ಷಿಸುವ ಉದ್ದೇಶದಿಂದ ರೀಫ್ಗಳನ್ನು ಅಳವಡಿಸಲಾಗಿದೆ. ಆದರೆ ಯಾವುದೂ ಪ್ರಯೋಜನವಾಗುತ್ತಿಲ್ಲ. ಮೀನುಗಾರಿಕಾ ಬಲೆಗಳನ್ನಿಡಲು ನಿರ್ಮಿಸಲಾಗಿದ್ದ ಶೆಡ್ ಕೂಡಾ ಇತ್ತೀಚೆಗೆ ಸಮುದ್ರಪಾಲಾಗಿದೆ. ಇದು ಇಂದು ಉಳ್ಳಾಲ ವ್ಯಾಪ್ತಿಯ ಸೋಮೇಶ್ವರ ಉಚ್ಚಿಲ ಪ್ರದೇಶಕ್ಕೆ ವಿಧಾನ ಪರಿಷತ್ನ ಬಾಕಿ ಭರವಸೆಗಳ ಸಮಿತಿ ಪರಿಶೀಲನೆಗೆ ಭೇಟಿ ನೀಡಿದ್ದ ವೇಳೆ ಸ್ಥಳೀಯರಿಂದ ವ್ಯಕ್ತವಾದ ಆತಂಕದ ಮಾತುಗಳು.
ಪ್ರತಿ ವರ್ಷ ಇಲ್ಲಿ ಮಳೆಗಾಲದ ಸಂದರ್ಭ ಕಡಲ್ಕೊರೆತಕ್ಕೆ ರಸ್ತೆಗಳು ಸಮುದ್ರಪಾಲಾಗುತ್ತವೆ. ಮತ್ತೆ ಕೋಟಿಗಟ್ಟಲೆ ಹಣ ವ್ಯಯಿಸಿ ರಸ್ತೆ ನಿರ್ಮಿಸಲಾಗುತ್ತದೆ. ಆದರೆ ಒಂದೇ ವರ್ಷದಲ್ಲಿ ಅದು ಕಡಲ್ಕೊರೆತಕ್ಕೆ ಕೊಚ್ಚಿ ಹೋಗುತ್ತದೆ. ಇಲ್ಲಿ ಸಮುದ್ರದ ಅಲೆಯನ್ನು ತಡೆಯಲು ಶಾಶ್ವತ ಕ್ರಮ ವಹಿಸದೆ ರಸ್ತೆ ಮಾಡಿ ಏನೂ ಪ್ರಯೋಜನವಿಲ್ಲ ಎಂದು ಸಮಿತಿಯ ಅಧ್ಯಕ್ಷ ಬಿ.ಎಂ. ಫಾರೂಕ್ ಅಧಿಕಾರಿಗಳ ಜತೆ ಮಾತನಾಡುತ್ತಾ ಪ್ರತಿಕ್ರಿಯಿಸಿದರು.
ಸಮುದ್ರ ತೀರದಲ್ಲಿ ಮರಗಳನ್ನು ನೆಟ್ಟು ಹಸಿರೀಕರಣದೊಂದಿಗೆ ಬಹುಮಟ್ಟಿಗೆ ಕಡಲ್ಕೊರೆತ ತಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಸಮಿತಿಗೆ ತಿಳಿಸಿದಾಗ, ಇಷ್ಟು ವರ್ಷಗಳಿಂದ ಕಡಲ್ಕೊರೆತ ತಡೆಗಾಗಿ ಎಷ್ಟು ಹಣವನ್ನು ವಿನಿಯೋಗಿಸಲಾಗಿದೆ. ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವಂತೆ ಸೂಚಿಸಿದರು.
ಸಮುದ್ರವೇ ಮರಳನ್ನು ಎಳೆದೊಯ್ದಿದೆ!
ಒಂದೆರಡು ವರ್ಷಗಳ ಹಿಂದೆ ಪರ್ವತಾಕಾರದಲ್ಲಿ ಶೇಖರವಾಗಿದ್ದ ಮರಳು ಎಲ್ಲಿ ಹೋಗಿದೆ ಎಂದು ಬಿ.ಎಂ.ಫಾರೂಕ್ ಪ್ರಶ್ನಿಸಿದಾಗ, ಆ ಮರಳನ್ನೆಲ್ಲಾ ಸಮುದ್ರವೇ ಎಳೆದೊಯ್ದಿದೆ. ಅದು ಕೇರಳ ಭಾಗಕ್ಕೆ ಸಾಗಿ ಅಲ್ಲಿ ಶೇಖರಣೆಯಾಗಿದೆ ಎಂದು ಸ್ಥಳೀಯರು ಪ್ರತಿಕ್ರಿಯಿಸಿದರು.
ಬಂದು ನೋಡಿ ಹೋಗುತ್ತಾರಷ್ಟೆ, ನಮ್ಮ ಸಮಸ್ಯೆ ಪರಿಹಾರವಾಗುತ್ತಿಲ್ಲ!
ಇಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರತೀ ವರ್ಷ ಬಂದು ಕಡಲ್ಕೊರೆತವನ್ನು ವೀಕ್ಷಿಸಿ ಹೋಗುತ್ತಾರೆ. ಭರವಸೆ ನೀಡುತ್ತಾರೆ. ಆದರೆ ನಾವು ಮಾತ್ರ ಇಲ್ಲಿ ಪ್ರತಿನಿತ್ಯ ಆತಂಕದಲ್ಲೇ ದಿನ ಕಳೆಯುತ್ತಿದ್ದೇವೆ. ಈ ಬಾರಿ ನಮ್ಮ ಮನೆಗಳೂ ಸಮುದ್ರಪಾಲಾಗುವ ಆತಂಕವನ್ನು ಎದುರಿಸುತ್ತಿದ್ದೇವೆ. ಇಲ್ಲಿ ಸಮುದ್ರ ತೀರಕ್ಕೆ ಕಲ್ಲು ಹಾಕುವ ಕೆಲಸ ಆಗಿಲ್ಲ ಎಂದು ಉಚ್ಚಿಲ ಬಳಿ ಸಮುದ್ರ ತೀರದ ರಸ್ತೆಯ ಬದಿಯ ಮನೆಗಳ ನಿವಾಸಿಗಳು ಸಮಿತಿ ಎದುರು ಅಳಲು ತೋಡಿಕೊಂಡರು.
ಇಲ್ಲಿ ಕೇವಲ ಕಲ್ಲುಹಾಕುವುದರಿಂದ ಪ್ರಯೋಜನವಾಗದು. ಅದನ್ನು ಪರಿಶೀಲಿಸುವುದಾಕ್ಕಾಗಿಯೇ ನಾವು ಬಂದಿದ್ದೇವೆ ಎಂದು ಬಿ.ಎಂ. ಫಾರೂಕ್ ಜನರ ಮನವಿಗೆ ಪ್ರತಿಕ್ರಿಯಿಸಿದರು.
ಎಸ್ಟಿಪಿ ವೈಜ್ಞಾನಿಕವಾಗಿ ಆಗಲಿ
ಉಳ್ಳಾಲದ ಎಸ್ಟಿಪಿ (ಒಳಚರಂಡಿ ಸಂಸ್ಕರಣಾ ಘಟಕ)ಗೆ ಸಮಿತಿ ಭೇಟಿ ನೀಡಿದ ವೇಳೆ ಸ್ಥಳೀಯರು ಅಲ್ಲಿನ ಒಳಚರಂಡಿ ವ್ಯವಸ್ಥೆಗಳ ಬಗೆ ಗಮನಸೆಳೆದರು. 30 ವರ್ಷಗಳಾದರೂ ಇನ್ನೂ ಇಲ್ಲಿನ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಎಸ್ಟಿಪಿ ಭೂಗತವಾಗಿ ಸ್ಥಾಪನೆಯಾಗಬೇಕು. ಆದರೆ ಇಲ್ಲಿ ನೆಲದ ಮೇಲೆಯೇ ರಚಿಸಲಾಗಿದೆ. ಇದರಿಂದ ಸಮುದ್ರ ತೀರದಲ್ಲೇ ಇರುವ ಈ ಪ್ರದೇಶದಲ್ಲಿ ಸಾಕಷ್ಟು ತೊಂದರೆಯಾಗಲಿದೆ ಎಂದು ಸ್ಥಳೀಯ ಹಿರಿಯ ನಾಗರಿಕರೊಬ್ಬರು ಆತಂಕ ವ್ಯಕ್ತಪಡಿಸಿದರು.
2009ರಲ್ಲಿ ಆರಂಭವಾದ ಎಸ್ಟಿಪಿ ಕಾಮಗಾರಿಗೆ ಸುಮಾರು 16 ವರ್ಷಗಳ ಬಳಿಕ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್ಜಿಟಿ)ಯಿಂದ ಒಂದೆರಡು ವರ್ಷದ ಹಿಂದಷ್ಟೇ ಅನುಮತಿ ಪಡೆಯಲಾಗಿದೆ. ಕಾಮಗಾರಿ ಆರಂಭವಾಗುವ ಮೊದಲು ಸರ್ವೆಯ ಆರಂಭದಲ್ಲೇ ಈ ಅನುಮತಿಯನ್ನು ಪಡೆಯಬೇಕಾಗಿದ್ದರೂ ಅದನ್ನು ಪಡೆಯದೆ ಕಾಮಗಾರಿ ಆರಂಭಿಸಲಾಗಿದೆ. ಇದು ಯಾವ ಆಧಾರದಲ್ಲಿ ಮಾಡಿರುವುದು ಎಂದು ಬಿ.ಎಂ. ಫಾರೂಕ್ ಅಧಿಕಾರಿಗಳನ್ನು ಪ್ರಶ್ನಿಸಿದರು.
ಎಸ್ಟಿಪಿಯು ನೇತ್ರಾವತಿ ನದಿಯ ತಟದಲ್ಲೇ ಜನವಸತಿ ಪ್ರದೇಶದ ಸಮೀಪವೇ ನಿರ್ಮಾಣವಾಗಿರುವುದಲ್ಲದೆ, ಸಮುದ್ರಕ್ಕೂ ಸಮೀಪದಲ್ಲಿದೆ ಎಂದು ಅವರು ಹೇಳಿದರು.
ಸಮಿತಿ ಸದಸ್ಯರಾದ ಯು.ಬಿ. ವೆಂಕಟೇಶ್, ಶಶೀಲ್ ಜಿ. ನಮೋಶಿ, ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ, ಸಹಾಯಕ ಆಯುಕ್ತ ಮದನ್ ಮೋಹನ್ ಮೊದಲಾದವರು ಉಪಸ್ಥಿತರಿದ್ದರು.