2017ರಲ್ಲಿ ಅನುಮತಿ ಇಲ್ಲದೆ ರ್ಯಾಲಿ: ಜಿಗ್ನೇಶ್ ಮೆವಾನಿ, ಇತರ 9 ಮಂದಿ ದೋಷಿ ಎಂದ ನ್ಯಾಯಾಲಯ
ಆರೋಪಿಗಳಿಗೆ ಮೂರು ತಿಂಗಳ ಜೈಲು ಶಿಕ್ಷೆ
![2017ರಲ್ಲಿ ಅನುಮತಿ ಇಲ್ಲದೆ ರ್ಯಾಲಿ: ಜಿಗ್ನೇಶ್ ಮೆವಾನಿ, ಇತರ 9 ಮಂದಿ ದೋಷಿ ಎಂದ ನ್ಯಾಯಾಲಯ 2017ರಲ್ಲಿ ಅನುಮತಿ ಇಲ್ಲದೆ ರ್ಯಾಲಿ: ಜಿಗ್ನೇಶ್ ಮೆವಾನಿ, ಇತರ 9 ಮಂದಿ ದೋಷಿ ಎಂದ ನ್ಯಾಯಾಲಯ](https://www.varthabharati.in/sites/default/files/images/articles/2022/05/5/334047-1651744927.jpg)
ಮೆಹ್ಸಾನ, ಮೇ 5: ಪೊಲೀಸ್ ಅನುಮತಿಯಿಲ್ಲದೆ ಜುಲೈ 2017 ರಲ್ಲಿ ಮೆಹ್ಸಾನಾ ಪಟ್ಟಣದಿಂದ ರ್ಯಾಲಿ ನಡೆಸಿದ್ದಕ್ಕಾಗಿ ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ಹಾಗೂ ಇತರ ಒಂಬತ್ತು ಮಂದಿಯ ವಿರುದ್ಧ ದಾಖಲಿಸಲಾದ ಅಕ್ರಮ ಕೂಟಕ್ಕಾಗಿನ ಕ್ರಿಮಿನಲ್ ಪ್ರಕರಣದಲ್ಲಿ ಗುಜರಾತ್ನ ಮೆಹ್ಸಾನಾದ ಮ್ಯಾಜಿಸ್ಟ್ರಿಯಲ್ ನ್ಯಾಯಾಲಯವು ಗುರುವಾರ ದೋಷಿ ಎಂದು ತೀರ್ಪು ನೀಡಿದೆ ಎಂದು indianexpress ವರದಿ ಮಾಡಿದೆ.
ಎಲ್ಲಾ ಆರೋಪಿಗಳಿಗೆ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ತಲಾ 1,000 ರೂ. ವಿಧಿಸಲಾಗಿದೆ. ಮೇವಾನಿ ಅವರಲ್ಲದೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕಿ ರೇಷ್ಮಾ ಪಟೇಲ್ ಕೂಡ ಶಿಕ್ಷೆಗೊಳಗಾದ ಆರೋಪಿಗಳಲ್ಲಿ ಒಬ್ಬರು.
ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಜೆಎ ಪರ್ಮಾರ್ ಈ ಕುರಿತು ತೀರ್ಪು ನೀಡಿದ್ದು, "ರ್ಯಾಲಿ ನಡೆಸುವುದು ಅಪರಾಧವಲ್ಲ. ಆದರೆ ಅನುಮತಿಯಿಲ್ಲದೆ ರ್ಯಾಲಿ ನಡೆಸುವುದು ಅಪರಾಧ. ಅವಿಧೇಯತೆಯನ್ನು ಎಂದಿಗೂ ಸಹಿಸಲಾಗುವುದಿಲ್ಲ" ಎಂದು ಹೇಳಿದ್ದಾರೆ.
ಮೇವಾನಿ ಅವರ ಆಪ್ತರಲ್ಲಿ ಒಬ್ಬರಾದ ಕೌಶಿಕ್ ಪರ್ಮಾರ್ ಅವರು ಮೆವಾನಿ ಸ್ಥಾಪಿಸಿದ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್ ಎಂಬ ಸಂಘಟನೆಯ ಬ್ಯಾನರ್ ಅಡಿಯಲ್ಲಿ ರ್ಯಾಲಿಗೆ ಮೆಹ್ಸಾನಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ನಲ್ಲಿ ಅನುಮತಿ ಕೋರಿದ್ದರು. ಆರಂಭದಲ್ಲಿ ಅನುಮತಿ ನೀಡಲಾಯಿತು. ಬಳಿಕ ಅದನ್ನು ಅಧಿಕಾರಿಗಳು ಹಿಂಪಡೆದರು. ಆದಾಗ್ಯೂ ಆಯೋಜಕರು ರ್ಯಾಲಿ ನಡೆಸಿದ್ದರು.